ಕರ್ನಾಟಕ

karnataka

By

Published : Jul 12, 2023, 10:24 AM IST

ETV Bharat / state

ಆನೇಕಲ್‌ನ ಸೂರ್ಯನಗರ 4ನೇ ಹಂತದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ: ಸಚಿವ ಜಮೀರ್ ಅಹ್ಮದ್

ಆನೇಕಲ್ ತಾಲೂಕಿನ​ ಸೂರ್ಯನಗರ 4ನೇ ಹಂತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಮತ್ತು ಶಾಲೆಯನ್ನು ನಿರ್ಮಾಣ ಮಾಡಲು ವಸತಿ ಸಚಿವ ಜಮೀರ್ ಅಹ್ಮದ್ ಸ್ಥಳ ವೀಕ್ಷಣೆ ಮಾಡಿದರು.

international-stadium-built-at-suryanagar-says-minister-jameer-ahmed
ಸೂರ್ಯನಗರ 4ನೇ ಹಂತದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ :ಸಚಿವ ಜಮೀರ್ ಅಹ್ಮದ್

ಆನೇಕಲ್ (ಬೆಂಗಳೂರು): 100 ಎಕರೆಯಲ್ಲಿ ರಾಜ್ಯದಲ್ಲಿಯೇ ಮಾದರಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಮತ್ತು 10 ಎಕರೆಯಲ್ಲಿ ಶಾಲೆಯೊಂದನ್ನು ನಿರ್ಮಿಸಲು ಆನೇಕಲ್​ ತಾಲೂಕಿನ ಸೂರ್ಯನಗರದಲ್ಲಿ ಮಂಗಳವಾರ ವಸತಿ ಸಚಿವ ಜಮೀರ್ ಅಹಮದ್​​ ಸ್ಥಳ ವೀಕ್ಷಣೆ ಮಾಡಿದರು. ಈ ವೇಳೆ ಸಂಸದ ಡಿ.ಕೆ. ಸುರೇಶ್, ಶಾಸಕ ಬಿ. ಶಿವಣ್ಣ ಮತ್ತು ಕೆಲವು ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಸಚಿವರು ಸೂರ್ಯನಗರದ ವಿವಿಧ ಯೋಜನೆಗಳ ಮಾಹಿತಿ ಪಡೆದರು. ರಾಜೀವ್ ಗಾಂಧಿ ವಸತಿ ಸಮುಚ್ಚಯಗಳನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್​ ಅಹಮದ್​​, ಆನೇಕಲ್​ ತಾಲೂಕಿನ ಸೂರ್ಯನಗರದಲ್ಲಿ 100 ಎಕರೆಯಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣ ಮತ್ತು 10 ಎಕರೆಯಲ್ಲಿ ಶಾಲೆಯೊಂದನ್ನು ನಿರ್ಮಿಸಲು ಪ್ರಸ್ತಾವನೆ ಬಂದಿತ್ತು. ನಾನು ಮತ್ತು ಅಧಿಕಾರಿಗಳು ಸ್ಥಳ ವೀಕ್ಷಣೆಗೆ ಬಂದಿದ್ದೇವೆ. ಇಲ್ಲಿ ಎಲ್ಲ ತರದ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಸೂರ್ಯನಗರದಲ್ಲಿ ಒಟ್ಟು 1900 ಎಕರೆ ಭೂಮಿ ಇದೆ, ಇದರಲ್ಲಿ 100 ಎಕರೆಯಲ್ಲಿ ಒಂದು ಕ್ರೀಡಾಂಗಣ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಈ ಬಗ್ಗೆ ಪ್ರತಿಭಟನೆ ನಡೆಸಿದ ರೈತರ ಜೊತೆ ಸಭೆ ನಡೆಸಿದ ಅವರು, ಇಂಡ್ಲವಾಡಿಯ ಸೂರ್ಯನಗರ ನಾಲ್ಕನೇ ಹಂತದ ರೈತರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ನಮ್ಮ ಕಾಂಗ್ರೆಸ್​ ಪಕ್ಷ, ನಮ್ಮ ಸರ್ಕಾರ ಯಾವಾಗಲೂ ರೈತರ ಪರ. ರೈತರಿಗೆ ನೋವು ಉಂಟು ಮಾಡುವ ಕೆಲಸವನ್ನು ನಾವು ಮಾಡಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿವೆ. ಅದನ್ನು ನಾನು ಕುಳಿತುಕೊಂಡು ಬಗೆಹರಿಸುತ್ತೇವೆ ಎಂದರು.

ಸಂಸದ ಡಿ.ಕೆ. ಸುರೇಶ್​ ಮಾತನಾಡಿ, ಯೋಜನೆ 2012-13ರಲ್ಲಿ ಪ್ರಾರಂಭವಾಗಿದೆ. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಕೆಲವು ದಾಖಲೆಗಳ ವಿಚಾರದಲ್ಲಿ ರೈತರಿಗೆ ಗೊಂದಲ ಉಂಟಾಗಿದೆ. ಇವೆಲ್ಲವನ್ನು ಸರ್ಕಾರ ಬಗೆಹರಿಸುವ ಕೆಲಸ ಮಾಡುತ್ತದೆ. ಈ ಬಗ್ಗೆ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಸೂರ್ಯನಗರದಲ್ಲಿ ಅಭಿವೃದ್ದಿ ಕಾರ್ಯಗಳು ಆಗುತ್ತಿದೆ. ಇಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ವಸತಿ ಸೌಕರ್ಯಗಳನ್ನು ನೀಡುವ ಕೆಲಸ ಆಗುತ್ತಿದೆ. ಇದರ ಜೊತೆಗೆ ನಾವು ಆನೇಕಲ್​ ಕ್ಷೇತ್ರದಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದೆವು. ಈ ಸಂಬಂಧ ಸಚಿವರು ಸುಸಜ್ಜಿತ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆ ನಡೆಸಿದ ಕೆಲ ರೈತರು, ಯೋಜನೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ರೈತ ಕುಮಾರ್​ ಮಾತನಾಡಿ, ಸೂರ್ಯನಗರದಲ್ಲಿ ನಡೆಯುತ್ತಿರುವ ಕಾಮಗಾರಿಯು ಅಕ್ರಮ ಕಾಮಗಾರಿಯಾಗಿದೆ. ನಾವು ತಹಶೀಲ್ದಾರ್​ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ವಸತಿ ಇಲಾಖೆಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೂ ಎಲ್ಲಿಯೂ ರೈತರಿಗೆ ಬೆಂಬಲವನ್ನು ನೀಡದೇ ಕಾಮಗಾರಿ ನಡೆಸುತ್ತಿದ್ದಾರೆ. ಕೇವಲ ಮಧ್ಯವರ್ತಿಗಳ ಜೊತೆ ಸಭೆ ನಡೆಸಿ, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುಮಾರು ಶೇ 90 ರೈತರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಾಗುವಳಿ ಮಾಡುತ್ತಿರುವ ರೈತರಲ್ಲಿ ಮಧ್ಯವರ್ತಿಗಳು ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರವೂ ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ದೂರಿದರು.

ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ :ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಜಮೀರ್ ಅಹ್ಮದ್, ವಾರದ ಹಿಂದೆ ಪೆನ್​ ಡ್ರೈವ್​ ಇದೆ ಎಂದು ಹೇಳಿದ್ದರು. ಕುಮಾರಸ್ವಾಮಿ ಹಿಟ್ ಅಂಡ್ ರನ್ ವ್ಯಕ್ತಿತ್ವದವರು. ಪೆನ್​ ಡ್ರೈವ್​ನಲ್ಲಿ ಏನಾದರೂ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ :₹183 ಕೋಟಿ ವೆಚ್ಚದಲ್ಲಿ ಜೋಗ ಸಮಗ್ರ ಅಭಿವೃದ್ದಿ; ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣ: ಬಿ.ವೈ.ರಾಘವೇಂದ್ರ

ABOUT THE AUTHOR

...view details