ಇಂದು ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ (International Anti Drug Day 2021). ಹೀಗಾಗಿ, ಕಳೆದ 12 ತಿಂಗಳಲ್ಲಿ ಸೀಜ್ ಮಾಡಿರುವ 50 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಮಾದಕ ವಸ್ತು ನಾಶ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಹಲವಡೆ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ವಿವಿಧ ಅಧಿಕಾರಿಗಳ ಸಮಕ್ಷಮ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ವತಿಯಿಂದ ನಾಶಗೊಳಿಸಲಾಯಿತು.
ಬೆಂಗಳೂರು : ಆಲ್ಪಾಜೋಲಮ್ ಡ್ರಗ್ ತಯಾರಿಕಾ ಅಡ್ಡೆ ಮೇಲೆ ಬೆಂಗಳೂರು ವಲಯ ಎಸ್ಸಿಬಿ ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಎಸ್ಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ 91 ಕೆಜಿ ಆಲ್ಪಾಜೋಲಮ್ ಹಾಗೂ ₹62 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.
ಆಲ್ಪಾಜೋಲಮ್ ನಿಷೇಧಿತ ಮಾದಕ ವಸ್ತುವಾಗಿದೆ. ಕೋಲಾರ ಕೈಗಾರಿಕ ಪ್ರದೇಶದಲ್ಲೂ ಕೂಡ ಎಸ್ಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಕೋಲಾರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಬೀದರ್ ಎರಡು ಕಡೆಗಳಲ್ಲಿ ಎಸ್ಸಿಬಿ ದಾಳಿ ನಡೆಸಿದೆ. ಆಲ್ಪಾಜೋಲಮ್ ಪೌಡರ್ನ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೈದರಾಬಾದ್ನ ಎನ್ ವಿ ರೆಡ್ಡಿ ಎಂಬಾತ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ. ಇನ್ನು, ಕಾರ್ಖಾನೆ ಮೇಲೆಯೂ ದಾಳಿ ನಡೆದಿದೆ.
ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಬೀದರ್ ಫ್ಯಾಕ್ಟರಿಯಲ್ಲಿ ಡ್ರಗ್ ಉತ್ಪಾದನೆಯಾಗ್ತಿತ್ತು. ಜೊತೆಗೆ ಎನ್ ವಿ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ, ಈ ವೇಳೆ 62 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಎಸ್.ಭಾಸ್ಕರ್ ಹಾಗೂ ರೆಡ್ಡಿ ಡ್ರಗ್ಸ್ನಲ್ಲಿ ಆಲ್ಪಾಜೋಲಮ್ ಡ್ರಗ್ ಮ್ಯಾನುಫ್ಯಾಕ್ಟರ್ ಮಾಡುತ್ತಿದ್ದರು. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈ ವಿ ರೆಡ್ಡಿ, ಎಸ್.ಮೆನನ್, ಎನ್ ವಿ ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವರನ್ನ ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 61 ಲಕ್ಷ ಮೌಲ್ಯದ ಮಾದಕ ವಸ್ತು ನಾಶ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಪ್ತಿ ಪಡಿಸಿಕೊಳ್ಳಲಾಗಿದ್ದ ₹61 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಇಂದು ನಾಶ ಪಡಿಸಲಾಯಿತು. ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ವತಿಯಿಂದ ನಾಶಗೊಳಿಸಲಾಯಿತು. ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದಲ್ಲಿರುವ ಗ್ರೀಮ್ ಮ್ಯಾನೇಜ್ಮೆಂಟ್ ಪ್ರೈ.ಲಿ ಕಾರ್ಖಾನೆ ಸ್ಥಳದಲ್ಲಿ ನಿಯಮಾನುಸಾರ ಮಾದಕ ವಸ್ತುವನ್ನು ನಾಶಪಡಿಸಲಾಯಿತು.
ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆಯುತ್ತಿದ್ದ ಹಾಗೂ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಎನ್ಡಿಪಿಎಸ್ ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡಿದ್ದ ಗಾಂಜಾವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿಯ ಅನುಮತಿ ಪಡೆದು ಇಂದು ಮುರಗೋಡ ಮೊಲೀಸ್ ಠಾಣಾ ವ್ಯಾಪಿಯಲ್ಲಿ ನಾಶ ಮಾಡಲಾಯಿತು.
ಒಟ್ಟೂ 126 ಪ್ರಕರಣಗಳಲ್ಲಿ 755 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 58.28 ಲಕ್ಷ ರೂ., 3 ಪ್ರಕರಣಗಳಲ್ಲಿ 31.4 ಕಿಲೋ ಪಾಪ್ಪಿ ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 2.73 ಲಕ್ಷ ರೂ., ಒಟ್ಟು 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ 637 ಕೆಜಿ ಗಾಂಜಾ ಭಸ್ಮ
ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ವಿವಿಧ ಪೊಲೀಸ್ ಠಾಣೆಗಳ ಪ್ರಕರಣಗಳಲ್ಲಿ ವಶಪಡಿಸಿಕೊಂಡ ರೂ. 29,30,310/- ಅಂದಾಜು ಮೌಲ್ಯದ ಒಟ್ಟು 637 ಕೆಜಿ ಮಾದಕ ವಸ್ತು ಗಾಂಜಾವನ್ನು ಇಂದು ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು, ಪರಿಸರ ಅಧಿಕಾರಿಗಳ ಸಮಕ್ಷಮ ಮಾಚೇನಹಳ್ಳಿಯ M/s Shushruta Bio-Medical Waste Management Societyಯ Common Bio-Medical Waste Treatment and Disposal Facilityಯಲ್ಲಿ ಗಾಂಜಾವನ್ನು ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಡಿವೈಎಸ್ಪಿ ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲೆಯಲ್ಲಿಯೂ ವಿಲೇವಾರಿ
ಜಿಲ್ಲೆಯಲ್ಲಿಯೂ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಮಾದಕ ವಸ್ತುಗಳನ್ನು ತಾಲೂಕಿನ ಹಳೇ ಕುಮ್ಮಟ ಗ್ರಾಮದ ಬಳಿ ಇರುವ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿಯಮಾನುಸಾರ ಇಂದು ವಿಲೇವಾರಿ ಮಾಡಲಾಯಿತು. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್, ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಿನ್ನೆಲೆ ಇಂದು ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳೇ ಕುಮ್ಮಟ ಗ್ರಾಮದ ಬಳಿ ಇರುವ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇಂದು 118 ಕೆಜಿ ಗಾಂಜಾ ಮತ್ತು ಅಫೀಮ್ಅನ್ನು ನಿಯಮಾನುಸಾರ ವಿಲೇವಾರಿ ಮಾಡಲಾಯಿತು. ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 4 ವರ್ಷದಲ್ಲಿನ ಒಟ್ಟು 14 ಪ್ರಕರಣಗಳಿಗೆ ಸಂಬಂಧಿಸಿದ 118 ಕೆಜಿ ಗಾಂಜಾ, ಅಫೀಮ್ಅನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.