ಬೆಂಗಳೂರು: ಕಾರ್ಮಿಕನ ವೇಷಧಾರಿಯಾಗಿ ನಗರದಲ್ಲಿ ನೆಲೆಯೂರಿದ್ದ ಉಗ್ರನನ್ನು ಬಂಧಿಸಿದ್ದ ಜಮ್ಮು ಕಾಶ್ಮೀರ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿರುವ ನಗರ ಗುಪ್ತಚರ ಇಲಾಖೆ, ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದೆ. ಉಗ್ರ ತಾಲಿಬ್ ಹುಸೇನ್ ಮೇಲಿರುವ ಪ್ರಕರಣಗಳು, ಉಗ್ರನ ಚಟುವಟಿಕೆ, ಬೆಂಗಳೂರಿಗೆ ಬಂದಿದ್ದು ಯಾವಾಗ ಎಂಬುದು ಸೇರಿದಂತೆ ಪ್ರತಿಯೊಂದು ಆಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕಮಿಷನರ್ ಪ್ರತಾಪ್ ರೆಡ್ಡಿಗೆ ರಿಪೋರ್ಟ್ ನೀಡಲಾಗಿದೆ.
ಜಮ್ಮು ಕಾಶ್ಮೀರದ ಕಿಸ್ತಾವರ್ ಠಾಣೆಯಲ್ಲಿ ತಾಲಿಬ್ ಹುಸೇನ್ ವಿರುದ್ಧ ಪ್ರಮುಖವಾಗಿ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿಎ) ಸ್ಫೋಟಕ ವಸ್ತು ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ. 2007-08ರಿಂದ ನಡೆದ ಕೆಲವು ಅಪರಾಧ ಕೃತ್ಯಗಳಲ್ಲಿ ತಾಲಿಬ್ ಭಾಗಿಯಾಗಿರುವ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರ ತನಿಖೆ ನಡೆಸುತ್ತಿರುವುದು, ನಗರದಲ್ಲಿ ತಾಲಿಬ್ ಹುಸೇನ್ ನೆಲೆಸಿದ್ದ ಬಾಡಿಗೆ ಮನೆ, ಕೆಲಸ ಮಾಡುತ್ತಿದ್ದ ಜಾಗ, ಮಸೀದಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿರುವ ಬಗ್ಗೆ ಸಂಪೂರ್ಣ ವರದಿ ನೀಡಿದ್ದಾರೆ.
ತಾಲಿಬ್ ಬೆಂಗಳೂರಿನಲ್ಲಿದ್ದ ಅವಧಿಯಲ್ಲಿ ಆತನ ಚಟುವಟಿಕೆ ಬಗ್ಗೆ ವರದಿ ಪಡೆದುಕೊಂಡ ನಗರ ಪೊಲೀಸ್ ಆಯುಕ್ತರು, ನಗರದ ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಹೊರವಲಯದಲ್ಲಿ ನಿಗಾವಹಿಸುವಂತೆ ನಗರದ ಭಯೋತ್ಪಾದನ ನಿಗ್ರಹ ದಳಕ್ಕೆ (ಎಟಿಸಿ) ಸೂಚನೆ ನೀಡಿದ್ದಾರೆ. ಐಎಸ್ಡಿ, ಐಬಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆ ಕಮಾಂಡರ್ ಆಗಿದ್ದ ತಾಲಿಬ್ ಕಾಶ್ಮೀರದಿಂದ ಬಂದು ನಗರದ ಹಲವೆಡೆ ಪ್ಲಾನ್ ಮಾಡಿ ಸಭೆ ನಡೆಸಿರುವ ಸಂಗತಿ, ತನಿಖೆ ವೇಳೆ ಗೊತ್ತಾಗಿದೆ.