ಕರ್ನಾಟಕ

karnataka

By ETV Bharat Karnataka Team

Published : Jan 18, 2024, 10:29 PM IST

ETV Bharat / state

ರಾಮಮಂದಿರ ಉದ್ಘಾಟನೆಗೆ ದಿನಗಣನೆ; ಶ್ರೀರಾಮನ ಚಿತ್ರವಿರುವ ಬಾವುಟ, ಟಿಶರ್ಟ್​ಗಳಿಗೆ ಹೆಚ್ಚಿದ ಡಿಮ್ಯಾಂಡ್

ಬೆಂಗಳೂರಿನಲ್ಲಿ ಶ್ರೀರಾಮನ ಚಿತ್ರವಿರುವ ಬಂಟಿಂಗ್ಸ್, ಬಾವುಟ, ಶಾಲುಗಳು, ಟಿ ಶರ್ಟ್ ಸೇರಿದಂತೆ ಹಲವು ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.

Etv Bharat
Etv Bharat

ಬೆಂಗಳೂರು: ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೂಡ ಸಮಾರಂಭಗಳನ್ನು ನಡೆಸಿ ಜನವರಿ 22 ರಂದು ಸಂಭ್ರಮಿಸಲು ರಾಮನ ಭಕ್ತರು ತಯಾರಿ ನೆಡೆಸಿದ್ದಾರೆ. ಇದರಿಂದ ನಗರದಲ್ಲಿ ಶ್ರೀರಾಮನ ಚಿತ್ರವಿರುವ ಬಂಟಿಂಗ್ಸ್, ಬಾವುಟ, ಶಾಲುಗಳು, ಟಿ ಶರ್ಟ್ ಸೇರಿದಂತೆ ಹಲವು ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವುದು ಕಂಡು ಬರುತ್ತಿದೆ.

ಶ್ರೀರಾಮನ ಚಿತ್ರವಿರುವ ಬಾವುಟಗಳು

ರಾಜಧಾನಿ ಬೆಂಗಳೂರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲ ಬಡಾವಣೆಗಳನ್ನು ಕೇಸರಿಮಯ ಮಾಡಲು ರಾಮನ ಭಕ್ತರು ಸಜ್ಜಾಗಿದ್ದಾರೆ. ಎಲ್ಲಡೆ ರಾಮನ ಚಿತ್ರ ಇರುವ ಕೇಸರಿ ಬಾವುಟಗಳನ್ನ ಹಾಕಿ, ಅದ್ಧೂರಿ ಆಚರಣೆ ಮಾಡಲು ಉತ್ಸುಕರಾಗಿದ್ದಾರೆ. ಕೇಸರಿ ಶಾಲು, ಶ್ರೀರಾಮನ ಭಾವಚಿತ್ರವಿರುವ ಬಂಟಿಗ್​ಗಳನ್ನು ಕೊಂಡು ಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಬಂಟಿಂಗ್ಸ್, ಬಾವುಟ, ಶಾಲುಗಳು, ಟಿ ಶರ್ಟ್ ಮಾರಾಟ ಮಾಡುವ ವರ್ತಕರು ಸಂಘ ಸಂಸ್ಥೆಗಳಿಂದ ದಿನಕ್ಕೆ 50 ಸಾವಿರಕ್ಕೂ ಹೆಚ್ಚಿನ ಆರ್ಡರ್​ಗಳನ್ನು ತೆಗದುಕೊಳ್ಳುತ್ತಿದ್ದಾರೆ.

ಶ್ರೀರಾಮನ ಚಿತ್ರವಿರುವ ಬಾವುಟಗಳು

ಹುಬ್ಬಳ್ಳಿ, ಬೆಳಗಾವಿ, ಬೀದರ್, ಗುಲ್ಬರ್ಗಾ, ಚಾಮರಾಜನಗರ, ಮೈಸೂರು ಜಿಲ್ಲೆ ಸೇರಿದಂತೆ. ಕರ್ನಾಟಕದ ಹಲವು ಜಿಲ್ಲೆಗಳಿಂದ ರಾಮನ ಭಾವಚಿತ್ರವಿರುವ ಧ್ವಜ ಹಾಗೂ ಶಾಲುಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಆರ್ಡರ್​ಗಳು ವರ್ತಕರಿಗೆ ಬಂದಿವೆ. ಆರ್ಡರ್ ಕೊಟ್ಟ ಗ್ರಾಹಕರಿಗೆ, ಟ್ರಾನ್ಸ್​ಪೋರ್ಟ್ ವ್ಯವಸ್ಥೆಯನ್ನೂ ಸಹ ಮಾಡಿಕೊಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಹಬ್ಬದಂತೆ ಆಚರಣೆ ಮಾಡಲು ಜನ ತುದಿಗಾಲಲ್ಲಿ ನಿಂತಿರುವ ವಾತಾವರಣ ಕಾಣಸಿಗುತ್ತಿದೆ.

ಶ್ರೀರಾಮನ ಚಿತ್ರವಿರುವ ಬಾವುಟಗಳು

ಸಿಲ್ಕ್ ಶಾಲುಗಳಿಗೆ ಸುಮಾರು 12 ರೂಪಾಯಿ ನಿಗದಿಪಡಿಸಲಾಗಿದೆ. ಉಳಿದಂತೆ ಬ್ಯಾನರ್ಸ್, ಬಂಟಿಗ್ಸ್, ಟಿ ಶರ್ಟ್ ಗಳಿಗೆ ಗುಣಮಟ್ಟಕೆ ಅನುಗುಣವಾಗಿ ದರಗಳನ್ನು ನಿಗದಿ ಮಾಡಲಾಗಿದೆ. ಈ ಕುರಿತು ಬೇಲಿಮಠ ರಸ್ತೆಯ ಎಸ್​ ಆರ್ ಎಂಟರ್ಪ್ರೈಸೆಸ್​ನ ಮಾಲೀಕ ಶೇಖರ್ ಮಾತನಾಡಿ, ರಾಮನ ಚಿತ್ರವಿರುವ ಬಂಟಿಂಗ್ಸ್, ಟಿ ಶರ್ಟ್, ಬ್ಯಾನರ್, ಶಾಲುಗಳಿಗೆ ತುಂಬಾ ಬೇಡಿಕೆ ಬಂದಿದೆ. ಕಳೆದ 25 ದಿನದಿಂದಲೇ ಬುಕಿಂಗ್ ಪ್ರಾರಂಭವಾಗಿದೆ. ಸದ್ಯ ಬಂಟಿಂಗ್ಸ್, ಟಿ ಶರ್ಟ್ ಗಳಿಗೆ ಹೆಚ್ಚು ಡಿಮ್ಯಾಂಡ್ ಇದ್ದು, ಇನ್ನು ಮೂರು ದಿನದ ನಂತರ ಶಾಲುಗಳಿಗೆ ಇನ್ನಷ್ಟು ಹೆಚ್ಚು ಬೇಡಿಕೆ ಬರಲಿದೆ. ಅತಿ ಕಡಿಮೆ ಲಾಭಂಶದಲ್ಲಿ ಎಲ್ಲ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಜಾತಿ ಭೇದವಿಲ್ಲದೇ ಎಲ್ಲಡೆ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ನಮ್ಮ ಊರಿನಲ್ಲಿ ಜನವರಿ 22 ರಂದು ರಾಮೋತ್ಸವ ಹಮ್ಮಿಕೊಂಡಿದ್ದೇವೆ, ಅದಕ್ಕೆ ಬಂಟಿಂಗ್ಸ್, ಬಾವುಟ, ಶಾಲುಗಳನ್ನು ತಗೆದುಕೊಳ್ಳಲು ಬಂದಿದ್ದೇವೆ. ಎಷ್ಟೇ ಖರ್ಚಾದರೂ ಅಂದಿನ ದಿನ ಸಂಭ್ರಮದಿಂದ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತೇವೆ. 500 ವರ್ಷದ ಕನಸು ನನಸಾಗುತ್ತಿರುವುದು ತೀವ್ರ ಸಂತಸ ತಂದಿದೆ ಎಂದು ಗ್ರಾಹಕರಾದ ಮಾಲೂರಿನ ಮಂಜುನಾಥ್ ತಿಳಿಸಿದರು.

ಇದನ್ನೂ ಓದಿ:ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಮುನ್ನಾದಿನ ಬಂಟ್ವಾಳದಲ್ಲಿ ಶ್ರೀರಾಮಭಕ್ತರಿಂದ ಸತ್ಯನಾರಾಯಣ ಪೂಜೆ

ABOUT THE AUTHOR

...view details