ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಅಟ್ಟಹಾಸ ಹೆಚ್ಚಾಗಿದ್ದು, ಸಂಡೇ ಲಾಕ್ಡೌನ್ ಆದರೂ 24 ಗಂಟೆಗಳಲ್ಲಿ 71 ಜನ ಬಲಿಯಾಗಿದ್ದಾರೆ. ಇತ್ತ ಬೆಂಗಳೂರು ಒಂದರಲ್ಲೇ ಕೊರೊನಾಗೆ 45 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಈವರೆಗೆ 684 ಜನರು ಸಾವನ್ನಪ್ಪಿದ್ದು, 2627 ಹೊಸ ಪಾಸಿಟಿವ್ ಕೇಸ್ ದೃಢಪಟ್ಟಿವೆ. 38,843 ಜನರಿಗೆ ಸೋಂಕು ತಗುಲಿದೆ.
ಈವರೆಗೆ 15,409 ಗುಣಮುಖರಾಗಿದ್ದು, 22,746 ಸಕ್ರಿಯ ಪ್ರಕರಣಗಳಿವೆ. 532 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 8,39,074 ಮಂದಿಯ ಕೊರೊನಾ ಪರೀಕ್ಷೆ ಮಾಡಿದ್ದು, 38,843 ಜನರಿಗೆ ಸೋಂಕು ತಗುಲಿದೆ. 76,791 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದು ನಿಗಾವಣೆಯಲ್ಲಿದ್ದಾರೆ.
16 ದಿನದ ಮಗು ಕೊರೊನಾಗೆ ಬಲಿ:
ಬೆಂಗಳೂರಿನಲ್ಲಿ P-11,884 ಸಂಖ್ಯೆಯ 16 ದಿನದ ಮಗು ಕೊರೊನಾಗೆ ಬಲಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಾರಕ ಸೋಂಕಿಗೆ ಸಾವನ್ನಪ್ಪಿದೆ. ಬೆಂಗಳೂರಿನಲ್ಲಿ ಇಂದು 1525 ಹೊಸ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಒಟ್ಟಾರೆ 18,387 ಸೋಂಕಿತರು ಇದ್ದಾರೆ. ಈವರೆಗೆ 274 ಮಂದಿ ಕೋವಿಡ್ಗೆ ಮರಣ ಹೊಂದಿದ್ದಾರೆ.
ಇನ್ನು 4045 ಜನ ಗುಣಮುಖರಾಗಿದ್ದು, 14,067 ಜನರು ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 68 ಫೀವರ್ ಕ್ಲಿನಿಕ್ನಲ್ಲಿಂದು 818 ವ್ಯಕ್ತಿಗಳ ತಪಾಸಣೆ ಮಾಡಲಾಗಿದ್ದು, ಒಟ್ಟಾರೆ ಇಲ್ಲಿಯವರೆಗೆ 22,917 ಕೋವಿಡ್ ಪರೀಕ್ಷೆ ಮಾಡಲಾಗಿದೆ.
ಪತ್ರಕರ್ತರಿಗೆ ವಿಮೆ ಸೌಲಭ್ಯ: ಸಿಎಂ ಜೊತೆಗೆ ಚರ್ಚೆ... ಸಚಿವ ಶ್ರೀರಾಮುಲು:
ಹಲವು ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ವಿಮೆ ಅಗತ್ಯವಿದೆ. ಕೊರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ವಿಮೆ ಅಗತ್ಯವಿದ್ದು, ಈ ಕುರಿತು ಸಿಎಂ ಯಡಿಯೂರಪ್ಪರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.