ಬೆಂಗಳೂರು : 2019ರ ಲೋಕಸಭೆ ಚುನಾವಣೆಯ ವೇಳೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಅರ್ಜಿದಾರರಾದ ಅಂದಿನ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ. ಮಂಜು ಹಾಗೂ ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸಂಸದ ಸ್ಥಾನವನ್ನು ಅನರ್ಹಗೊಳಿಸಿ ಆದೇಶಿಸಿದೆ.
ಆದೇಶದಲ್ಲಿನ ಪ್ರಮುಖ ಅಂಶಗಳು:
- ಪ್ರಜ್ವಲ್ ರೇವಣ್ಣ ಅವರ ತಂದೆ ಹೆಚ್.ಡಿ.ರೇವಣ್ಣ ಅವರು ಅಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
- ಕಾವೇರಿ ನೀರಾವರಿ ನಿಗಮಕ್ಕೆ ಹಂಚಿಕೆಯಾಗಿದ್ದ ಅನುದಾನವನ್ನು ಬೇರೆ ಕಡೆ ವರ್ಗಾಯಿಸುವ ಮೂಲಕ ಚುನಾವಣಾ ಅಕ್ರಮ ಎಸಗಿದ್ದಾರೆ.
- ಪ್ರಜ್ವಲ್ ರೇವಣ್ಣ ಅವರ ಚಿಕ್ಕಪ್ಪ ಮತ್ತು ಅಂದಿನ ಮುಖ್ಯಮಂತ್ರಿಗಳೂ ಹಾಗೂ ಕಾವೇರಿ ನೀರಾವರಿ ನಿಗಮದ ಅಧ್ಯಕ್ಷರೂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ನಿಗಮ ಅನುದಾನವನ್ನು ಜಿಲ್ಲೆಯ ಬೇರೆ ಅಭಿವೃದ್ಧಿಗಳಿಗೆ ವರ್ಗಾಯಿಸಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಸಹಕಾರಿ ಮಾಡಿದ್ದಾರೆ ಎಂಬುದು ಅರ್ಜಿದಾರರು ಸಾಬೀತುಪಡಿಸಿದ್ದಾರೆ.
- ಸಂಸತ್ ಸದಸ್ಯ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಅರ್ಜಿಗಳ ಪ್ರಕಿಯಾ ನಿಯಮಗಳ (ಎಲೆಕ್ಷನ್ ಪ್ರೋಸೀಜರ್ ರೂಲ್ಸ್) ಅಧಿನಿಯಮ 19ರ ಅನ್ವಯ ಕ್ರಮಕ್ಕೆ ಮುಂದಾಗಲು ಆದೇಶದ ಪ್ರತಿಯನ್ನು ಚುನಾವಣಾ ಆಯೋಗ ಮತ್ತು ಸಂಸತ್ ಸ್ಪೀಕರ್ಗೆ ಕಳುಹಿಸಿಕೊಡಬೇಕು ಎಂದು ರಿಜಿಸ್ಟ್ರಿಗೆ ನ್ಯಾಯಪೀಠ ನಿರ್ದೇಶನ.
- ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಲಾಭ ಮಾಡಿಕೊಡಲು ಅವರ ತಂದೆಯಾದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅಕ್ರಮ ಎಸಗಿದ್ದಾರೆ. ಹಾಗಾಗಿ, ಅವರ ವಿರುದ್ಧ ಏಕೆ ಕ್ರಮ ಜರುಗಿಸಬಾರದು ಎಂಬುದಾಗಿ ವಿವರಣೆ ಪಡೆಯಲು ಮತ್ತು ಕೋರ್ಟ್ ಮುಂದೆ ಅವರು ಹಾಜರಾಗುವುದಕ್ಕಾಗಿ ಸೂಚಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 99 (1) (2)ಅಡಿ ಹೆಚ್.ಡಿ ರೇವಣ್ಣ ಮತ್ತು ಸೂರಜ್ ರೇವಣ್ಣಗೆ ನೋಟಿಸ್ ಜಾರಿ.
- ಪ್ರಜ್ವಲ್ ರೇವಣ್ಣ ಪ್ರತಿಸ್ಪರ್ಧಿ ಎ.ಮಂಜು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದು, ಅವರನ್ನು ಆಯ್ಕೆ ಮಾಡಬೇಕು ಎಂದು ಘೋಷಣೆ ಮಾಡಲಾಗದು ಎಂದು ಕೋರಿದ್ದ ಪ್ರಜ್ವಲ್ ಅರ್ಜಿಯ ಪುರಸ್ಕಾರ.