ಕರ್ನಾಟಕ

karnataka

ETV Bharat / state

ಡಿಸಿಇಟಿ, ಪಿಜಿಸಿಇಟಿ ಪ್ರವೇಶಾತಿಯಲ್ಲಿ ಅಕ್ರಮ ಆರೋಪ: ಎಬಿವಿಪಿ ಪ್ರತಿಭಟನೆ - ಡಿಸಿಇಟಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Akhil Bharat Vidyarthi Parishad workers protested.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

By ETV Bharat Karnataka Team

Published : Oct 5, 2023, 10:15 PM IST

Updated : Oct 5, 2023, 10:55 PM IST

ಎಬಿವಿಪಿ ಪ್ರತಿಭಟನೆ

ಬೆಂಗಳೂರು: ಡಿಸಿಇಟಿ-ಪಿಜಿಸಿಇಟಿ ಪ್ರವೇಶಾತಿಯಲ್ಲಿ 2 ನೇ ಸುತ್ತಿನ ಕಟ್ಆಫ್ ಬಿಡುಗಡೆ ಮಾಡಿ ಮೂರನೇ ಸುತ್ತನ್ನು ನಡೆಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದೆದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಪ್ರತಿಭಟನೆಯ ವೇಳೆ ಕರ್ನಾಟಕ ದಕ್ಷಿಣದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೇಮ ಜೋಡಿದಾ‌ರ್ ಮಾತನಾಡಿ, "ಎಂಜಿನಿಯರಿಂಗ್, ಎಂಬಿಎ, ಎಂ.ಕಾಂನಂತಹ ಉನ್ನತ ಪದವಿಗಳಿಗೆ ಸೇರಬೇಕೆಂಬುದು ಲಕ್ಷಾಂತರ ವಿದ್ಯಾರ್ಥಿಗಳ ಕನಸು. ಇದಕ್ಕಾಗಿ ಹಗಲಿರುಳು ಶ್ರಮಪಟ್ಟು ಪ್ರವೇಶ ಪರೀಕ್ಷೆಗಳನ್ನು ಬರೆದು ಉತ್ತಮ ಶ್ರೇಯಾಂಕ ಪಡೆದು ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾಗುವ ಕನಸು ಕಂಡಿರುತ್ತಾರೆ. ಇಂತಹ ಕನಸು ಕಂಡ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಾರದರ್ಶಕ ಪ್ರಕ್ರಿಯೆ ಮೂಲಕ ಪ್ರೋತ್ಸಾಹವಾಗಿ ನಿಲ್ಲಬೇಕು. ಆದರೆ ಪ್ರಾಧಿಕಾರವು ಈ ಪರೀಕ್ಷೆಗಳನ್ನು ಕೈಗೊಂಡು, ಪ್ರವೇಶಾತಿಗಳನ್ನು ನೀಡುವ ನಿಟ್ಟಿನಲ್ಲಿ ಕೆಲವು ಲೋಪದೋಷಗಳನ್ನು ಮಾಡುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಡಿಸಿಇಟಿ- ಪಿಜಿಸಿಇಟಿ" ಎಂದು ಆರೋಪಿಸಿದರು.

"ತಾಂತ್ರಿಕ ಶಿಕ್ಷಣದಲ್ಲಿ ಮುಂದುವರೆಯಬೇಕೆಂಬ ಅಪೇಕ್ಷೆ ಇಟ್ಟುಕೊಂಡು ಡಿಪ್ಲೋಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನೇರ ಎರಡನೇ ವರ್ಷದ ಇಂಜಿಯರಿಂಗ್ ಪದವಿಗೆ ದಾಖಲಾಗುವ ಈ ಪ್ರವೇಶಾತಿ ಮತ್ತು ಎಂಬಿಎ ಅಂತ ಉನ್ನತ ಪದವಿಗಳಿಗೆ ಸೇರುವ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡುಬಂದಿವೆ. ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ಡಿಸಿಇಟಿ ಮತ್ತು ಪಿಜಿಸಿಇಟಿ ಎರಡನೇ ಸುತ್ತಿನ ಕಟ್ ಆಫ್ ಅಂಕಪಟ್ಟಿ ಮತ್ತು ಉಳಿದಿರುವ ಸೀಟ್ ಪ್ರಕಟಿಸದಿರುವುದು ಅನೇಕ ವಿದ್ಯಾರ್ಥಿಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಸಂದೇಹವನ್ನು ಉಂಟುಮಾಡುತ್ತಿದೆ" ಎಂದು ದೂರಿದರು.

"ಮೊದಲನೇ ಸುತ್ತಿನಲ್ಲಿ ಪವೇಶಾತಿ ಸಿಗದ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ತಮ್ಮ ಆಯ್ಕೆಗಳನ್ನು ನೀಡುತ್ತಾರೆ. ಆದರೆ ಇಲ್ಲಿಯೂ ಪ್ರವೇಶಾತಿ ಸಿಗದೆ, ಮೂರನೇ ಸುತ್ತಿನಲ್ಲಿ ತಮಗೆ ಬೇಕಾದಂತಹ ಕಾಲೇಜನ್ನು ಆಯ್ದುಕೊಳ್ಳಲು ಅನುಕೂಲವಾಗಲು ಎರಡನೇ ಸುತ್ತಿನ ಕಟ್ ಆಫ್ ಅಂಕ ಪ್ರಮುಖವಾಗುತ್ತದೆ. ಆದರೆ ಎರಡನೇ ಸುತ್ತಿನಲ್ಲಿ ಪ್ರವೇಶಾತಿ ಪಡೆದ ಕೆಲ ವಿದ್ಯಾರ್ಥಿಗಳು ತಮಗೆ ನೀಡಿದಂತಹ ಕಾಲೇಜುಗಳಿಗೆ ಪ್ರವೇಶಾತಿ ಪಡೆಯದೆ ಖಾಲಿ ಬಿಡುತ್ತಾರೆ. ಇಂತಹ ಸೀಟುಗಳನ್ನು ಕಾಲೇಜಿನ ಆಡಳಿತ ಮಂಡಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ತೋರಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಯಾವ ಯಾವ ಕಾಲೇಜಿನಲ್ಲಿ ಎಷ್ಟೆಷ್ಟು ಸೀಟು ಖಾಲಿ ಇದೆ ಎಂಬುದು ತಿಳಿಯುತ್ತಿಲ್ಲ" ಎಂದು ವಿವರಿಸಿದರು.

"ಕಾಲೇಜಿನ ಕಟ್ ಆಫ್ ತಿಳಿಯದೆ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕೋರ್ಸ್‌ ಮತ್ತು ಕಾಲೇಜನ್ನು ಆಯ್ದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಅಥವಾ ತಮ್ಮಿಷ್ಟದ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಲೋಪದೋಷವು ಪ್ರವೇಶಾತಿಯಲ್ಲಿ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ. ಎಬಿವಿಪಿ ಈ ಹಿಂದೆ ಕೂಡ ಪ್ರಾಧಿಕಾರದ ಗಮನಕ್ಕೆ ತಂದಿದೆ ಆದರೆ ಪರೀಕ್ಷಾ ಪ್ರಾಧಿಕಾರ ಈ ಕುರಿತು ಯಾವುದೇ ನಿಲುವನ್ನು ತಡೆದಿಲ್ಲ" ಎಂದು ಹೇಳಿದರು.

ಮಹಾನಗರ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಡಾಂಗೆ, ಕಾರ್ಯದರ್ಶಿಗಳಾದ ಪ್ರೇಮಶ್ರೀ ಮತ್ತು ಲಕ್ಷ್ಮೀನಾರಾಯಣ, ಕಾರ್ಯಕರ್ತರಾದ ಸುಮಂತ್, ಆದಿತ್ಯ, ಚೈತ್ರಾ , ಈಶ್ವರ, ಶೇಷಾಂಕ್, ಸ್ವರೂಪ್, ಕಾರ್ತಿಕ್, ಪುನೀತ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂಓದಿ:DHFWS Kalaburagi: ಕಲಬುರಗಿ ಆರೋಗ್ಯ ಇಲಾಖೆಯಿಂದ 71 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Last Updated : Oct 5, 2023, 10:55 PM IST

ABOUT THE AUTHOR

...view details