ಕರ್ನಾಟಕ

karnataka

ದ್ವೇಷದ ರಾಜಕಾರಣ ಕೊನೆಗಾಣಿಸಿದರೆ ಅದೇ ರಾಜೀವ್ ಗಾಂಧಿಗೆ ಸಲ್ಲಿಸುವ ನಿಜವಾದ ಗೌರವ: ಸಿದ್ದರಾಮಯ್ಯ

ಕಾಂಗ್ರೆಸ್​​​ನವರು ಭಯೋತ್ಪಾದನೆ ಬೆಂಬಲಿಸುವರು ಎಂದು ಬಿಜೆಪಿ ಆರೋಪಿಸುತ್ತಿದೆ. ಭಯೋತ್ಪಾದನೆಯಲ್ಲಿ ಯಾರೂ ಬಿಜೆಪಿಯವರು ಪ್ರಾಣ ಕಳೆದುಕೊಂಡಿಲ್ಲ. ಜನರ ನೆಮ್ಮದಿ, ಶಾಂತಿ ಹಾಳು ಮಾಡುವ ಭಯೋತ್ಪಾದನೆ ತೊಡೆದುಹಾಕಲು ಕಾಂಗ್ರೆಸ್ ಮೊದಲಿನಿಂದಲೂ ಹೋರಾಟ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

By

Published : May 21, 2023, 3:46 PM IST

Published : May 21, 2023, 3:46 PM IST

Updated : May 21, 2023, 4:22 PM IST

CM Siddaramaiah saluted the portrait of former Prime Minister  Rajiv Gandhi.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಭಾವಚಿತ್ರಕ್ಕೆ ಸಿ ಎಂ ಸಿದ್ದರಾಮಯ್ಯ ನಮನ ಸಲ್ಲಿಸಿದರು.

ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಬೆಂಗಳೂರು:ದ್ವೇಷದ ರಾಜಕಾರಣವನ್ನು ಕೊನೆಗಾಣಿಸಿದರೆ ಮಾತ್ರ, ಅದು ರಾಜೀವ್ ಗಾಂಧಿಯವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿಜೆಪಿ ಇರುವವರೆಗೂ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಮರಸ್ಯ ಇರುವುದಿಲ್ಲ. ಬಡವರು, ದಲಿತರು, ಹಿಂದುಳಿದವರು ದೇಶದ ಅನೇಕ ಭಾಗಗಳಲ್ಲಿ ಆತಂಕದಲ್ಲಿ ಬದುಕುತ್ತಿದ್ದಾರೆ. ಜಗತ್ತು ಮತ್ತು ದೇಶದಲ್ಲಿ ಶಾಂತಿ ನೆಲೆಸಿದ್ದರೆ ಮಾತ್ರ ಮನುಕುಲ ಉದ್ಧಾರವಾಗುತ್ತದೆ. ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಬೇಕಿದೆ. ಇದನ್ನು ಸ್ಥಾಪಿಸಲು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಮತ್ತಿತರರು ಪ್ರಯತ್ನಿಸಿದ್ದರು ಎಂದು ಹೇಳಿದರು.

ರಾಜೀವ್ ಗಾಂಧಿಯಂತಹ ಮಹಾನ್ ನಾಯಕನೊಬ್ಬನನ್ನು ಭಯೋತ್ಪಾದಕರು ಬಲಿ ತೆಗೆದುಕೊಂಡರು. ರಾಜೀವ್ ಗಾಂಧಿಯವರು ಒಬ್ಬ ಕ್ರಿಯಾಶೀಲ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಬಣ್ಣಿಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆಯುವ ಪ್ರಯತ್ನ ಮಾಡೋಣ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ಭಯೋತ್ಪಾದನೆಯಲ್ಲಿ ಬಿಜೆಪಿಯ ಯಾರೂ ಪ್ರಾಣ ಕಳೆದುಕೊಂಡಿಲ್ಲ..ಕಾಂಗ್ರೆಸ್​​​ನವರು ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ ಎಂದು ಮಾತನಾಡುವ ಬಿಜೆಪಿಯವರು, ಯಾರಾದರೂ ಬಿಜೆಪಿಯವರು ಭಯೋತ್ಪಾದನೆಯಲ್ಲಿ ಪ್ರಾಣ ಕಳೆದುಕೊಂಡಿಲ್ಲ. ಕಾಂಗ್ರೆಸ್ಸಿನವರು ದೇಶದಲ್ಲಿ ಭಯೋತ್ಪಾದನೆ ತೊಲಗಿಸಲು ಹೋರಾಡಿದ್ದಾರೆ.

ಭಯೋತ್ಪಾದನೆಯಿಂದ ದೇಶಕ್ಕೆ ಅಪಾಯ. ಜನರ ನೆಮ್ಮದಿ, ಶಾಂತಿಯನ್ನು ಹಾಳು ಮಾಡುವ ಭಯೋತ್ದಾದನೆಯನ್ನು ತೊಡೆದುಹಾಕಲು ಕಾಂಗ್ರೆಸ್ ಮೊದಲಿನಿಂದಲೂ ಹೋರಾಟ ಮಾಡುತ್ತಿದೆ. ಭಯೋತ್ಪಾದನೆಗೆ ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿ ಬಲಿಯಾಗಿದ್ದಾರೆ ಎಂದು ತಿಳಿಸಿದರು.

ದೇಶದ ಐಕ್ಯತೆ, ಸಾರ್ವಭೌಮತ್ವವನ್ನು ಎತ್ತಿಹಿಡಿಯುವಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿ, ಭಾರತೀಯರಿಗೆ ಅವರದ್ದೇ ಸರ್ಕಾರ ರೂಪಿಸಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯದ ಬೆಲೆ ಕಾಂಗ್ರೆಸ್​​​ಗೆ ತಿಳಿದಿದೆ. ರಾಜೀವ್ ಗಾಂಧಿಯವರು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.

ಪ್ರಜಾಪ್ರಭುತ್ವದ ಬುನಾದಿ ಹಾಕಿದವರು ನೆಹರೂ.. ನೆಹರೂ ಅವರು ದೇಶಕ್ಕೆ ಪ್ರಜಾಪ್ರಭುತ್ವದ ಬುನಾದಿ ಹಾಕಿದವರು. ಭಾರತದಂತಹ ದೊಡ್ಡ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಜವಾಹರ್ ಲಾಲ್ ನೆಹರೂ ಹಾಕಿದ ಬುನಾದಿಯೇ ಕಾರಣ. ವಿರೋಧ ಪಕ್ಷಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಬೆಂಬಲ ಸಹಕಾರ ನೀಡಿದರು. ಈಗಿನ ಪ್ರಧಾನಿಗಳಿಗೂ ನೆಹರೂ ಅವರಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ರಾಜೀವ್ ಗಾಂಧಿಯವರು ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಬಯಸಿದ್ದರು. ರಾಹುಲ್ ಗಾಂಧಿಯವರು ಅದನ್ನು ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಮಹಿಳೆಯರಿಗೆ ಶೇ 50ರಷ್ಟು ಮೀಸಲು ನೀಡಲಿ..ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದೆ. ಜನತಂತ್ರದ ವಿಕೇಂದ್ರೀಕರಣ ಜಾರಿಗೆ ತಂದಿದ್ದು ರಾಜೀವ್ ಗಾಂಧಿಯವರು. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಮಸೂದೆ ಇದೆ. ಶೇ 50ಕ್ಕೆ ಏರಿಸಿದರೆ ನಮ್ಮ ತಕರಾರು ಇಲ್ಲ ಎಂದರು.

ನಿಜವಾದ ಅರ್ಥದಲ್ಲಿ ಸಮಪಾಲು. ಸಮಬಾಳು ದೊರೆಯಬೇಕು. ದೇಶದಲ್ಲಿ ಜಾತ್ಯಾತೀತ ವ್ಯವಸ್ಥೆ ಉಳಿದು ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ರಾಜೀವ್‍ಗಾಂಧಿಯವರ ಕೊಡುಗೆ ಅಪಾರ ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಏಳು ಕೋಟಿ ಕನ್ನಡಿಗರ ಗೆಲುವು..ಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದ್ದಲ್ಲ, ಇದು ಏಳು ಕೋಟಿ ಕನ್ನಡಿಗರ ಗೆಲುವು ಎಂದ ಮುಖ್ಯಮಂತ್ರಿಗಳು, ಜನ ಸುಭದ್ರ ಸರ್ಕಾರ ಬಯಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವುದೇ ನಮ್ಮ ಮುಂದಿರುವ ಸವಾಲು. ಐದು ಗ್ಯಾರಂಟಿಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ವ್ಯಾಖ್ಯಾನಕ್ಕೆ ಉತ್ತರ ನೀಡಿ, ಮುಂದಿನ ಅಧಿವೇಶನದಲ್ಲಿ ಈ ಐದೂ ಗ್ಯಾರಂಟಿಗಳನ್ನು ಮತ್ತೊಮ್ಮೆ ಸ್ಥಿರೀಕರಿಸಿ ಅಂದಿನಿಂದಲೇ ಜಾರಿಗೆ ತರುತ್ತೇವೆ ಎಂದರು.

ಮಾಹಿತಿ ಸಂಗ್ರಹಣೆ ಮುಗಿದ ಕೂಡಲೇ ಅನುಮೋದನೆ ನೀಡಿ, ಆದೇಶ ಹೊರಡಿಸಲಾಗುವುದು. ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಅನೇಕ ವಿಚಾರಗಳನ್ನೂ ಜಾರಿಗೆ ತರಲಾಗುವುದು. ಭರವಸೆಗಳನ್ನು ಚಾಚೂ ತಪ್ಪದೆ ಈಡೇರಿಸಿ, ನುಡಿದಂತೆ ನಡೆಯುವುದಾಗಿ ಸಿಎಂ ಭರವಸೆಯಿತ್ತರು.

ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ. ಪಾಟೀಲ್ , ಬಿ. ಕೆ ಹರಿಪ್ರಸಾದ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂಓದಿ:ಬಿಜೆಪಿ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ, ಬೇಕಾದ್ರೆ ತನಿಖೆ ಮಾಡಲಿ: ಜೋಶಿ

Last Updated : May 21, 2023, 4:22 PM IST

ABOUT THE AUTHOR

...view details