ಕರ್ನಾಟಕ

karnataka

By

Published : Jul 1, 2022, 5:21 PM IST

Updated : Jul 1, 2022, 6:44 PM IST

ETV Bharat / state

ಕೂರಲು, ಏಳಲು ಆಗಲ್ಲವೆಂದು ಕುಹಕವಾಡಿದವರಿಗೆ ಉತ್ತರ ಕೊಡುತ್ತೇನೆ: ದೇವೇಗೌಡ ತಿರುಗೇಟು

ದೇವೇಗೌಡರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಕೆ.ಎನ್.ರಾಜಣ್ಣ ಕ್ಷಮೆ ಯಾಚಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆಗ್ರಹಿಸಿದ್ದಾರೆ.

ಜನತಾಮಿತ್ರ ಜನ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ
ಜನತಾಮಿತ್ರ ಜನ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು: ನಮ್ಮ‌ ಪಕ್ಷವನ್ನು ಯಾರು ತುಳಿಯಬೇಕೆಂದು ಪ್ರಯತ್ನ ಮಾಡಿದ್ದಾರೋ ಅವರ ವಿರುದ್ಧ ಶತಾಯಗತಾಯ ಹೋರಾಟ ಮಾಡುತ್ತೇನೆ. ನಾನು ಸುಮ್ಮನೆ ಕೂರುವುದಿಲ್ಲ. ಕೂರಲು, ಏಳಲು ಆಗುವುದಿಲ್ಲ ಎಂದು ಹಾಸ್ಯ ಮಾಡಿದವರಿಗೆ ನಾನು ಉತ್ತರ ಕೊಡುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಜನತಾಮಿತ್ರ ಜನ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೊದಲು ಜಲಧಾರೆ ಕಾರ್ಯಕ್ರಮ ಆಯಿತು‌. ಈಗ ಜನತಾ ಮಿತ್ರ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿಗೆ ಏನು ಮಾಡಿದ್ದೇವೆ ಅನ್ನೋದನ್ನು ತುಂಬಾ ಮಾತನಾಡಬಲ್ಲೆ. ಬೆಂಗಳೂರಿಗೆ ಏನೇನು ಮಾಡಿದ್ದೇನೆ ಅನ್ನೋದನ್ನು ಹೇಳುವ ಕಾಲ ಬರುತ್ತದೆ. ಈ ದೇವೇಗೌಡ ಹಳ್ಳಿ ರೈತನ ಮಗ. ಕೆಲವರು ಏನು ಮಾಡಲು ಆಗುತ್ತೆ ಅಂತಾ ಕುಹಕವಾಡಿದ್ದಾರೆ. ಅವರಿಗೆಲ್ಲಾ ಉತ್ತರ ಕೊಡಬೇಕು ಎಂದು ಹೇಳಿದರು.

ನಮ್ಮ ಪಕ್ಷಕ್ಕೆ ಶಕ್ತಿ ಇಲ್ಲ ಅಂತಾ ಅಪಹಾಸ್ಯ ಮಾಡುತ್ತಾರೆ. ನಮ್ಮ ಶಕ್ತಿ ಏನು ಅನ್ನೋದನ್ನು ಸಾಬೀತುಪಡಿಸುತ್ತೇನೆ. ಈ ಬಾರಿ ನಮಗೆ ದೈವಿ ಶಕ್ತಿ ಇದೆ. ಪಕ್ಷದ ಪ್ರತಿಯೊಬ್ಬರೂ ಹೋರಾಟದ ಕೆಚ್ಚಿನಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾದ ಮೇಲೆ ಶಕ್ತಿ ಇದೆ. ಇದನ್ನು ನಾನು ಮಾಡುತ್ತೇನೆ.‌ ಹೋರಾಟಕ್ಕೆ ಸಿದ್ಧರಾಗಿ ನಿಲ್ಲಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇದಕ್ಕೂ ಮುನ್ನ ಜೆಪಿ ಭವನದಲ್ಲಿ ಜಲಧಾರೆಯ ಮಹಾಕಳಸಕ್ಕೆ ಪೂಜೆ ಹಾಗೂ ಗಂಗಾಪೂಜೆಯನ್ನು ಪುರೋಹಿತರು ನೆರವೇರಿಸಿದರು. ನಂತರ ಜನತಾ ಮಿತ್ರ ಸಂಪರ್ಕ ವಾಹನಗಳಿಗೆ ಚಾಲನೆ ನೀಡಿದರು.

ದೇವೇಗೌಡರ ಭಾಷಣ

ಡಿಸೆಂಬರ್​ಗೆ ಚುನಾವಣೆ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಬಿಬಿಎಂಪಿ ಚುನಾವಣೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ವಿಧಾನಸಭಾ ಚುನಾವಣೆ ಡಿಸೆಂಬರ್ ವೇಳೆಗೆ ಬರಲಿದೆ. ಅದಕ್ಕಾಗಿಯೇ ಇನ್ನೂ ಸಂಪುಟ ವಿಸ್ತರಣೆ ಮಾಡಲು ಆಗಿಲ್ಲ. ಕಮಲಕ್ಕೆ ಸೂರ್ಯೋದಯ ಚಿಂತೆ, ಮಾಜಿ ಮುಖ್ಯಮಂತ್ರಿಗೆ ಸಿದ್ದರಾಮಯ್ಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿಂತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಧಾನಿ ನರೇಂಧ್ರ ಮೋದಿ ಚಿಂತೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ರಾಜ್ಯದ ಜನರ ಚಿಂತೆ ಎಂದು ಚಾಟಿ ಬೀಸಿದರು. ಬಿಜೆಪಿಯವರು ಡೂಪ್ಲಿಕೇಟ್ ನೀರಿಗೆ ಪೂಜೆ ಮಾಡುತ್ತಾರೆ. ನಾವು ಶುದ್ಧ ನೀರಿಗೆ ಪೂಜೆ ಸಲ್ಲಿಸಿದ್ದೇವೆ ಎಂದರು.

ಇಬ್ರಾಹಿಂ ಭಾಷಣ

ಕ್ಷಮೆ ಯಾಚನೆಗೆ ಆಗ್ರಹ: ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ದೇವೇಗೌಡರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಶಕ ಕೆ.ಎನ್. ರಾಜಣ್ಣ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ದೇವೇಗೌಡರು ಈ ರಾಜ್ಯದ ಪಿತಾಮಹ. ಕರ್ನಾಟಕದ ಆರೂವರೆ ಕೋಟಿ ಜನರ ತಂದೆ. ಆದರೆ, ದೇವೇಗೌಡರ ಹುಟ್ಟು, ಸಾವಿನ ಬಗ್ಗೆ ಮಾತನಾಡುತ್ತಾರೆ. ರಾಜಣ್ಣ ನಿಮಗೆ ಅಪ್ಪ ಇಲ್ಲವಾ? ಎಂದು ಪ್ರಶ್ನಿಸಿದರು. ದೇವೇಗೌಡರು ಅಜರಾಮರರು. ಅವರಿಗೆ ಸಾವಿಲ್ಲ. ಇವರು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದವರು. ಸೂರ್ಯ, ಚಂದ್ರ ಇರೋವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ. ಕೂಡಲೇ ದೇವೇಗೌಡರ ಮನೆಗೆ ಬಂದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರ ಕುರಿತು ಕಾಂಗ್ರೆಸ್ ಮುಖಂಡ ರಾಜಣ್ಣ ವಿವಾದಿತ ಹೇಳಿಕೆ

Last Updated : Jul 1, 2022, 6:44 PM IST

ABOUT THE AUTHOR

...view details