ಕರ್ನಾಟಕ

karnataka

ETV Bharat / state

ವರದಕ್ಷಿಣೆ ತಾರದ್ದಕ್ಕೆ ಪತ್ನಿಗೆ ತಲಾಖ್​; ದೂರು ದಾಖಲು - ವರದಕ್ಷಿಣೆ ತರದ ಕಾರಣ ಪತ್ನಿಗೆ ತಲಾಖ್​

ಪತ್ನಿ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಕುಪಿತಗೊಂಡ ಪತಿರಾಯನೋರ್ವ, ಹೆಂಡತಿ ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿ ತಲಾಖ್​ ನೀಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.

File Photo
ಸಂಗ್ರಹ ಚಿತ್ರ

By

Published : Oct 26, 2020, 5:58 PM IST

ಬೆಂಗಳೂರು:ತ್ರಿವಳಿ ತಲಾಖ್ ಪದ್ಧತಿಯನ್ನು ಕೇಂದ್ರ ಸರ್ಕಾರ ನಿಷೇಧಿಸಿದರೂ ಸಹ ತೆರೆಮರೆಯಲ್ಲಿ ಇನ್ನೂ ಜೀವಂತವಾಗಿದ್ದು, ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ಪತಿರಾಯನೋರ್ವ ಹೆಂಡತಿಗೆ ಕಿರುಕುಳ ಕೊಟ್ಟು, ತಲಾಖ್​ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.

ಈ ಬಗ್ಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ನೀಡಿರುವ ಪತ್ನಿ, ತನ್ನ ಅಳಲನ್ನು ಪೊಲೀಸರ ಮುಂದೆ ತೋಡಿಕೊಂಡಿದ್ದಾಳೆ. ಚಾಮರಾಜಪೇಟೆಯ ದುಬಾಯಿ ಕಾಲೋನಿ ವಾಸಿ ಸಯ್ಯದ್ ಅಜ್ಮಲ್ ಎಂಬಾತ 2004ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ನನ್ನನ್ನು ಮದುವೆ ಮಾಡಿಕೊಂಡಿದ್ದ. ಆರಂಭದ ವರ್ಷಗಳಲ್ಲಿ ಅನ್ಯೋನ್ಯವಾಗಿದ್ದ ಪತಿ ಮೂರು ಮಕ್ಕಳ ತಂದೆಯೂ ಆಗಿದ್ದ. ಇದಾದ ಬಳಿಕ ಕಾಲಕ್ರಮೇಣ ನನಗೆ ಕ್ಷುಲ್ಲಕ ಕಾರಣಗಳಿಗೆ ಕಿರುಕುಳ ನೀಡಲು ಆರಂಭಿಸಿದ್ದ, ನಂತರ ವರದಕ್ಷಿಣೆ ಹಣ ತರುವಂತೆ ಪ್ರತಿನಿತ್ಯ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ನಾನು, ಕಾಟ ತಾಳಲಾರದೆ ನನ್ನ ಬಳಿ ಇದ್ದ ಒಡವೆಗಳನ್ನೆಲ್ಲಾ ಮಾರಿ ಹಣ ತಂದು ಕೊಟ್ಟಿದ್ದೆ ಎಂದು ತಿಳಿಸಿದ್ದಾಳೆ.

ಹಣ ಸಿಕ್ಕ ಬಳಿಕ ಕೊಂಚ ತಣ್ಣಗಾಗಿದ್ದ ಅಜ್ಮಲ್ ಕೆಲ ದಿನಗಳ ನಂತರ​​ ಮತ್ತೆ ವರದಕ್ಷಿಣೆ ತರುವಂತೆ ತಕರಾರು ತೆಗೆದಿದ್ದನಂತೆ. ಅದಲ್ಲದೆ ಹಣ ತರಲಿಲ್ಲವೆಂಬ ಕಾರಣಕ್ಕೆ ಆಕೆ ಗರ್ಭಿಣಿಯಾಗಿದ್ದಾಗ ಸರಿಯಾಗಿ ಊಟವನ್ನೂ ಸಹ ನೀಡದೆ ಸತಾಯಿಸಿದ್ದನಂತೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪತ್ನಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಅಜ್ಮಲ್​​ ಮನೆಯವರು ಆಕೆಗೆ ತಲಾಖ್ ನೀಡುವಂತೆ ಸೂಚಿಸಿದ್ದು, ಮನೆಯವರ ತಾಳಕ್ಕೆ ಕುಣಿದ ಪತಿ, ಹೆಂಡತಿಗೆ ತಲಾಖ್​ ನೀಡಿದ್ದಾನೆ.

ಈ ಸಂಬಂಧ ಬಸವನಗುಡಿ ಮಹಿಳಾ ಠಾಣೆ ಮೆಟ್ಟಿಲೇರಿರುವ ಸಂತ್ರಸ್ತೆ, ನನ್ನ ಗಂಡ ಹಾಗೂ ಆತನ ಮನೆಯವರು ನನ್ನನ್ನು ಹಾಗೂ ನನ್ನ ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿ ಹಿಂಸಿಸಿದ್ದಾರೆ ಎಂದು ಸವಿವರವಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಸಂತ್ರಸ್ತೆ ನೀಡಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇದೀಗ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details