ಕರ್ನಾಟಕ

karnataka

By

Published : Jan 24, 2023, 10:38 PM IST

Updated : Jan 24, 2023, 10:59 PM IST

ETV Bharat / state

ದುಡಿಯಲು ಸಾಮರ್ಥ್ಯವಿರುವ ಪತಿ ಜೀವನಾಂಶ ನೀಡುವಂತೆ ಪತ್ನಿಗೆ ಆದೇಶಿಸಿದರೆ ಸೋಮಾರಿತನಕ್ಕೆ ಬೆಂಬಲಿಸಿದಂತೆ: ಹೈಕೋರ್ಟ್

ಪತ್ನಿಯಿಂದ ಜೀನವಾಂಶ ಕೇಳಿದ ಪತಿ- ದುಡಿಯಲು ಸಾಮರ್ಥ್ಯವಿರುವ ವ್ಯಕ್ತಿ ಜೀವನಾಂಶ ಕೇಳಿದ್ರೆ ಅದು ಸೋಮಾರಿತನ - ಹೈಕೋರ್ಟ್​

husband asks his wife for alimony it is like supporting laziness
ಹೈಕೋರ್ಟ್

ಬೆಂಗಳೂರು: ದುಡಿಯಲು ಸಾಮರ್ಥ್ಯ ಹೊಂದಿರುವ ಪತಿ ಜೀವನಾಂಶ ನೀಡುವಂತೆ ಪತ್ನಿಗೆ ಆದೇಶಿಸಿದಲ್ಲಿ ಸೋಮಾರಿತನವನ್ನು ಬೆಂಬಲಿಸಿದಂತೆ ಎಂದು ಹೈಕೋರ್ಟ್ ಕೌಟುಂಬಿಕ ಪ್ರಕರಣವೊಂದರಲ್ಲಿ ಅಭಿಪ್ರಾಯ ಪಟ್ಟಿದೆ. ಸಾಂಕ್ರಾಮಿಕ ರೋಗ ಕೊರೋನಾದಿಂದ ಉದ್ಯೋಗ ಕಳೆದುಕೊಂಡು ಆದಾಯವಿಲ್ಲದ ಜೀವನ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಬೆಂಗಳೂರಿನ ಕನಕಪುರ ರಸ್ತೆಯ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಪತ್ನಿಯಿಂದ ಜೀವನಾಂಶ ಪಡೆದು ತುಂಬಾ ಆರಾಮಾಗಿ ಜೀವನ ನಡೆಸಲು ಪತಿ ನಿರ್ಧರಿಸಿದ್ದಾನೆ ಎಂಬುದಾಗಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ, ಪತ್ನಿಯಿಂದ ಜೀವನಾಂಶ ಕೋರಿದ ಪತಿಯ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ತಿಳಿಸಿದ ಹೈಕೋರ್ಟ್, ತನ್ನ ಮತ್ತು ಪತ್ನಿ ಮಗುವಿನ ಜೀವನ ನಿರ್ವಹಣೆ ಮಾಡುವುದು ದುಡಿಯಲು ಸಾಮಥ್ಯವಿರುವ ವ್ಯಕ್ತಿಯ ಆದ್ಯ ಕರ್ತವ್ಯ ಎಂದು ಸಲಹೆ ನೀಡಿದೆ.

ಅಲ್ಲದೆ, ಉದ್ಯೋಗ ಹಾಗೂ ಆದಾಯವಿಲ್ಲದ ಕಾರಣ ಪತ್ನಿಗೆ ಜೀವನಾಂಶ ನೀಡಲಾಗದ ಸ್ಥಿತಿಯಲ್ಲಿದ್ದೇನೆ. ಆದ್ದರಿಂದ ಪತ್ನಿಯೇ ಜೀವನಾಂಶ ನೀಡಬೇಕು ಎಂಬ ಪತಿಯ ವಾದ ಮೂಲತಃ ದೋಷಪೂರಿತವಾಗಿದ್ದು, ಒಪ್ಪಲು ಸಾಧ್ಯವಿಲ್ಲ. ಅರ್ಜಿದಾರ ಪತಿ ದುಡಿಯಲು ಸಾಮರ್ಥ್ಯವಿರುವ ವ್ಯಕ್ತಿ. ಯಾವುದೇ ಅಂಗವೈಕಲ್ಯ ಅಥವಾ ದೌರ್ಬಲ್ಯದಿಂದ ನರಳುತ್ತಿಲ್ಲ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಜೀವನಾಂಶ ಪಡೆಯಲು ಯಾವುದೇ ಲಿಂಗ ಭೇದವಿಲ್ಲ ಎಂಬ ಕಾರಣಕ್ಕೆ ದುಡಿಯಲು ಸಾಮರ್ಥ್ಯವಿರುವ ಪತಿ ಪತ್ನಿಯಿಂದ ಜೀವನಾಂಶ ವಿತರಣೆಗೆ ಆದೇಶಿಸಿದರೆ, ಸೋಮಾರಿತನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ಕೋವಿಡ್-19ಯಿಂದ ಉದ್ಯೋಗ ಕಳೆದುಕೊಂಡ ಎಂಬ ಕಾರಣಕ್ಕೆ ಪತಿ ಆದಾಯ ಗಳಿಸಲು ಸಾಮರ್ಥ್ಯವಿಲ್ಲ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು?:2017ರ ಫೆ. 6 ರಂದು ಮದುವೆಯಾಗಿದ್ದ ದಂಪತಿಯ ನಡುವಿನ ಸಣ್ಣ ಗೊಂದಲಗಳಿಂದಾಗಿ ಪತ್ನಿ ತವರು ಮನೆಯಲ್ಲಿದ್ದರು. ಇದಾದ ಬಳಿಕ ಪತಿಯು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅತ್ತ ವೈವಾಹಿಕ ಸಂಬಂಧ ಪುನರ್ ಸ್ಥಾಪಿಸುವಂತೆ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಹೀಗಿರುವಾಗ ಪತಿಯಿಂದ ಮಧ್ಯಂತರ ಜೀವನಾಂಶವಾಗಿ ಮಾಸಿಕ 25 ಸಾವಿರ ರು. ಮತ್ತು ವ್ಯಾಜ್ಯ ವೆಚ್ಚವೆಂದು ಒಂದು ಲಕ್ಷ ರು. ಕೊಡಿಸುವಂತೆ ಕೋರಿ ಪತ್ನಿ ಮಧ್ಯಂತರ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಪತಿ, ತನ್ನ ಜೀವನ ಸಾಗಿಸಲು ಯಾವುದೇ ಆದಾಯ ಇಲ್ಲವಾಗಿದೆ ಎಂದು ತಿಳಿಸಿದ್ದರು. ಜತೆಗೆ, ವಿಚ್ಛೇದನ ಅರ್ಜಿ ಇತ್ಯರ್ಥವಾಗುವರೆಗೆ ತನ್ನ ಮತ್ತು ಪೋಷಕರ ಜೀವನ ನಿರ್ವಹಣೆಗಾಗಿ ಪತ್ನಿಯಿಂದಲೇ ಮಧ್ಯಂತರ ಜೀವನಾಂಶವಾಗಿ ಮಾಸಿಕ 30 ಸಾವಿರ ರು. ಮತ್ತು ವಾಜ್ಯ ವೆಚ್ಚಕ್ಕಾಗಿ 2 ಲಕ್ಷ ರು. ಕೊಡಿಸುವಂತೆ ಕೋರಿ ಪತಿ ಮನವಿ ಮಾಡಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಕೌಟುಂಬಿಕ ನ್ಯಾಯಾಲಯ, ಪತಿಯ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿತ್ತು. ಜತೆಗೆ, 2021ರ ಡಿಸೆಂಬರ್‌ನಿಂದ ವಿಚ್ಛೇದನ ಅರ್ಜಿ ಇತ್ಯರ್ಥವಾಗುವರೆಗೆ ಪತ್ನಿಗೆ ಮಾಸಿಕ 10 ಸಾವಿರ ರು. ಜೀವನಾಂಶ ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 25 ಸಾವಿರ ರು. ಪಾವತಿಸುವಂತೆ ಪತಿಗೆ ನಿರ್ದೇಶಿಸಿ 2022ರ ಅ.31ರಂದು ಆದೇಶಿಸಿತ್ತು. ಪತ್ನಿಯಿಂದ ಜೀವನಾಂಶ ಕೋರಿದಕ್ಕೆ 10 ಸಾವಿರ ರು.ಗಳ ದಂಡವನ್ನು ವಿಧಿಸಿ ಆದೇಶೀತ್ತು. ಪತಿ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಕೊರೋನಾದಿಂದಾಗಿ ಉದ್ಯೋಗ ಕಳೆದುಕೊಂಡಿದ್ದು ಜೀವನ ನಿರ್ವಹಣೆಗಾಗಿ ಆದಾಯ ಇಲ್ಲವಾಗಿದೆ. ಕಳೆದ ಎರಡು ವರ್ಷದಿಂದ ಉದ್ಯೋಗ ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತ್ನಿ ಪೋಷಣೆಗೆ ಜೀವನಾಂಶವನ್ನು ನೀಡುವುದಕ್ಕೆ ಸಾಧ್ಯವಾಗಿಲ್ಲ. ಬದಲಾಗಿ ನನ್ನ ಜೀವನ ನಿರ್ವಹಣೆಗೆ ಪತ್ನಿಯೇ ಜೀವನಾಂಶ ನೀಡಬೇಕಿದೆ. ಅವರ ಪೋಷಕರು ಸ್ಥಿತಿವಂತರಾಗಿದ್ದಾರೆ. ನನ್ನ ಮೇಲೆ ಪತ್ನಿ ಹಲವು ಪ್ರಕರಣ ದಾಖಲಿಸಿದ್ದು, ಅವುಗಳ ನಿರ್ವಹಣೆಗೆ ಹಣ ವ್ಯಯಿಸಬೇಕಿದೆ ಎಂದು ವಾದಿಸಿದ್ದರು.

ಈ ನಡುವೆ ಪತಿ ಉದ್ಯೋಗ ಮಾಡುತ್ತಿದ್ದು, ಮಾಸಿಕ 50ರಿಂದ 60 ಸಾವಿರ ರು.ವರೆಗೂ ಆದಾಯ ಗಳಿಸುತ್ತಿದ್ದಾರೆ. ಆಸ್ತಿಯಿಂದ ಬಾಡಿಗೆಯಿಂದ ಮಾಸಿಕ 75 ಸಾವಿರ ರು. ಪಡೆಯುತ್ತಿದ್ದಾರೆ. ಹೀಗಾಗಿ, ಕೌಟುಂಬಿಕ ನ್ಯಾಯಾಲಯ ಸೂಕ್ತವಾಗಿಯೇ ಆದೇಶ ಮಾಡಿದೆ ಎಂದು ಪತ್ನಿ ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ಇದನ್ನೂ ಓದಿ:ಷಡಕ್ಷರಿ ಸ್ವಾಮಿ ನೇಮಕ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ ಪಡಿಸಿದ ಹೈಕೋರ್ಟ್

Last Updated : Jan 24, 2023, 10:59 PM IST

ABOUT THE AUTHOR

...view details