ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ನೇಮಕ, ನಾಲ್ಕೈದು ನಾಯಕರಿಗೆ ರಾಷ್ಟ್ರೀಯ ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆ, ಸಣ್ಣಪುಟ್ಟ ಉನ್ನತಿಯನ್ನು ಸಂಭ್ರಮಿಸಿಕೊಂಡದ್ದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ 2020 ಅಷ್ಟೇನೂ ಫಲದಾಯಕವಾಗಿರಲಿಲ್ಲ.
ಸಾಕಷ್ಟು ಏಳುಬೀಳುಗಳೊಂದಿಗೆ ಕಾಂಗ್ರೆಸ್ ಈ ವರ್ಷ ಪೂರೈಸಿದೆ. ಕೊರೊನಾ ಅಟ್ಟಹಾಸ ವರ್ಷದ 9 ತಿಂಗಳನ್ನು ಸಂಪೂರ್ಣವಾಗಿ ತಿಂದು ಹಾಕಿದರೆ, ಪ್ರತಿಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ, ಪ್ರತಿರೋಧ ಒಡ್ಡದಿದ್ದರೂ ಸಂಕಷ್ಟದ ಸಂದರ್ಭದಲ್ಲಿ ಜನರ ಸಹಾಯಕ್ಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಧಾವಿಸಿದೆ. ಅಲ್ಲದೆ ಸರ್ಕಾರದ ಕೋವಿಡ್ ಸಲಕರಣೆ ಖರೀದಿ, ಮುಖ್ಯಮಂತ್ರಿಗಳ ಪುತ್ರ ಹಾಗೂ ಕುಟುಂಬ ಸದಸ್ಯರ ಹಗರಣ ಆರೋಪ ಇತ್ಯಾದಿ ವಿಚಾರದಲ್ಲಿ ದೊಡ್ಡ ಹೋರಾಟವನ್ನೇ ನಡೆಸಿದೆ. ಸಾಕಷ್ಟು ಪ್ರತಿಭಟನೆಗಳು, ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕಾರ್ಯ ಇತ್ಯಾದಿಯಲ್ಲಿ ಯಶ ಕಂಡ ಕಾಂಗ್ರೆಸ್, ಜನರ ಒಲವು ಗಳಿಸಿಲ್ಲ ಎನ್ನುವುದು ಈ ವರ್ಷದ ಕಾಂಗ್ರೆಸ್ ಬೆಳವಣಿಗೆಯ ಹಿನ್ನೋಟದಲ್ಲಿ ಅರ್ಥವಾಗುತ್ತದೆ.
ವೈದ್ಯಕೀಯ ಸಲಕರಣೆ ಖರೀದಿ ಹಗರಣದ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸಿತ್ತು ಕಾಂಗ್ರೆಸ್ ಪಾಲಿನ ಸಿಹಿ ಸುದ್ದಿ:ವರ್ಷದ ಆರಂಭದಿಂದಲೂ ನಡೆಯುತ್ತಿದ್ದ ದೊಡ್ಡ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು ಮಾರ್ಚ್ ತಿಂಗಳಲ್ಲಿ. ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾ. 11ರಂದು ಡಿ.ಕೆ. ಶಿವಕುಮಾರ್ ಹೆಸರು ಘೋಷಣೆಯಾಯಿತು. ಇವರ ಜೊತೆ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ನೇಮಕಗೊಂಡರು. ಕೋವಿಡ್ ಆತಂಕದ ಹಿನ್ನೆಲೆ ಪದಗ್ರಹಣ ಸಮಾರಂಭ ಸಾಕಷ್ಟು ವಿಳಂಬವಾಗಿ ಜು. 2ರಂದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನೆರವೇರಿತು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ ಸೆಪ್ಟೆಂಬರ್ 11ರಂದು ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಸ್ಥಾನಕ್ಕೆ ಎಐಸಿಸಿ ವಕ್ತಾರರಾಗಿದ್ದ ರಣದೀಪ್ ಸಿಂಗ್ ಸುರ್ಜೇವಾಲಾ ನೇಮಕಗೊಂಡರು. ಅದೇ ದಿನ ರಾಜ್ಯದ ಮೂವರು ಕಾಂಗ್ರೆಸ್ ನಾಯಕರಿಗೆ ಮಹತ್ವದ ಜವಾಬ್ದಾರಿ ಲಭಿಸಿತು. ಮಹಾರಾಷ್ಟ್ರ ಉಸ್ತುವಾರಿಯಾಗಿ ಹೆಚ್.ಕೆ. ಪಾಟೀಲ ನೇಮಕಗೊಂಡರೆ, ತಮಿಳುನಾಡು, ಪುದುಚೇರಿ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಜವಾಬ್ದಾರಿ ನೀಡಲಾಯಿತು. ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರಾಗಿ ಮುಂದುವರೆದರು. ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಅವರೂ ಸಿಡಬ್ಲ್ಯುಸಿ ಕಾಯಂ ಆಹ್ವಾನಿತರಾಗಿ ಮುಂದುವರೆದರು. ಇವರ ಜೊತೆ ಕೆಪಿಸಿಸಿಯ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ಹೆಚ್.ಕೆ. ಪಾಟೀಲ ಅವರನ್ನು ಸಿಡಬ್ಲ್ಯುಸಿ ಕಾಯಂ ಆಹ್ವಾನಿತರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಲಾಯಿತು. ಮಾಜಿ ಸಚಿವ ಕೃಷ್ಣ ಬೈರೇಗೌಡ ಎಐಸಿಸಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡರು.
ವಿಧಾನಸೌಧದದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯ ನೋಟ ಪಕ್ಷ ಸೇರ್ಪಡೆ ಸಂಭ್ರಮ:ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆಶಿ ನೇಮಕವಾದ ನಂತರ ಅವರ ನಾಯಕತ್ವ ಮೆಚ್ಚಿ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಆರ್.ಆರ್ ನಗರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ, ಕುಸುಮಾ ಹನುಂತರಾಯಪ್ಪ, ಹನುಮಂತರಾಯಪ್ಪ, ಬಸವನಗೌಡ ತುರುವೀಹಾಳ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಸೋಮಣ್ಣ ಬೇವಿನಮರದ, ಅಕೈ ಪದ್ಮಶಾಲಿ, ಓಲಾ-ಉಬರ್ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮತ್ತಿತರರು ಈ ವರ್ಷ ಪಕ್ಷ ಸೇರ್ಪಡೆಯಾಗಿದ್ದಾರೆ. ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಸೇರ್ಪಡೆಗೆ ಮುಹೂರ್ತ ನಿಗದಿಯಾಗಬೇಕಿದ್ದು, ಇದು ಕಾಂಗ್ರೆಸ್ ಪಾಲಿಗೆ ಲಭಿಸಿರುವ ದೊಡ್ಡ ಗೆಲುವಾಗಲಿದೆ.
ಕಾಂಗ್ರೆಸ್ ಪಾಲಿನ ಕಹಿ ಸುದ್ದಿ:ರಾಜ್ಯದಲ್ಲಿ ನಡೆದ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಯಿತು. ವಿಧಾನ ಪರಿಷತ್ನಲ್ಲಿ ಕೂಡ ಸಂಖ್ಯಾಬಲ ಕಡಿಮೆಯಾಗಿ 38ರಿಂದ 29 ಸದಸ್ಯ ಬಲಕ್ಕೆ ಕಾಂಗ್ರೆಸ್ ಕುಸಿದಿದೆ. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದ ನಂತರ ಮೊದಲ ಗೆಲುವಿಗಾಗಿ ಎದುರು ನೋಡುತ್ತಿರುವ ಡಿ.ಕೆ. ಶಿವಕುಮಾರ್ಗೆ 2020 ದೊಡ್ಡ ನಿರಾಸೆ ಉಂಟು ಮಾಡಿದೆ. ಮುಂಬರುವ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.
ಆರ್.ಆರ್ ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕುಸುಮ ಹನುಮಂತರಾಯಪ್ಪ ಒಟ್ಟಾರೆ 2021 ಆದರೂ ಕಾಂಗ್ರೆಸ್ ಪಾಲಿಗೆ ಆಶಾದಾಯಕವಾಗಿ ಲಭಿಸಿದರೆ 2023ರ ವಿಧಾನಸಭೆ ಚುನಾವಣೆಗೆ ಒಂದಿಷ್ಟು ನೈತಿಕ ಬಲ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಈಗಾಗಲೇ 80 ಸದಸ್ಯಬಲ ಹೊಂದಿದ್ದ ವಿಧಾನಸಭೆಯಲ್ಲಿ 67ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಪಕ್ಷದ ಒಗ್ಗಟ್ಟಿನ ಕೊರತೆಗೆ ಪರಿಹಾರ ಕಂಡುಕೊಳ್ಳಲಿದ್ದರೆ ಸಮಸ್ಯೆ ತಪ್ಪಿದ್ದಲ್ಲ.