ಬೆಂಗಳೂರು: ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಹಾಪ್ಕಾಮ್ಸ್ ಇಂದಿನಿಂದ ಮಾವು ಮತ್ತು ಹಲಸಿನ ಹಣ್ಣುಗಳ ಮೇಳ ಆರಂಭಿಸಿದೆ. ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಲಾಲ್ಬಾಗ್ ಸಸ್ಯ ತೋಟದಲ್ಲಿ ಇಂದಿನಿಂದ ಜೂನ್ 5 ರವರೆಗೆ ನಡೆಯುವ ಮೇಳಕ್ಕೆ ರಾಮಲಿಂಗಾರೆಡ್ಡಿ ಹಸಿರು ನಿಶಾನೆ ತೋರಿಸಿದ್ದಾರೆ.
ನಂತರ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಸೀಸನ್ ಮುಗಿಯುವವರೆಗೆ ಗ್ರಾಹಕರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನಷ್ಟವಾಗಿದ್ದು, ಶೇ.30 ರಷ್ಟು ಮಾತ್ರ ಫಸಲು ಬಂದಿದೆ. ಆದರೂ, ಬಗೆಬಗೆಯ ಮಾವಿನ ಹಣ್ಣು ಮೇಳದಲ್ಲಿ ಗ್ರಾಹಕರಿಗೆ ಲಭ್ಯವಾವಾಗಲಿದೆ ಎಂದು ಹೇಳಿದರು.
ಮಾವು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬಾಗಂಪಲ್ಲಿ, ಸಿಂಧೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಮಾವಿನ ಹಣ್ಣುಗಳನ್ನು ರೈತರಿಂದ ಹಾಪ್ಕಾಮ್ಸ್ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಿದೆ. ಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ 7 ಬಗೆಯ ಹಲಸಿನ ಹಣ್ಣುಗಳೂ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.