ಕರ್ನಾಟಕ

karnataka

ಹೋಮ್ ಕ್ವಾರಂಟೈನ್ ನಿಯಮ‌ ಉಲ್ಲಂಘನೆ: 720 ಜನರ ವಿರುದ್ದ 70 ಠಾಣೆಗಳಲ್ಲಿ ಪ್ರಕರಣ

By

Published : Aug 3, 2020, 11:17 PM IST

Updated : Aug 4, 2020, 1:11 PM IST

ದಿನೇ ದಿನೇ ನಗರದಲ್ಲಿ ಸೋಂಕಿತರ‌‌ ಪ್ರಮಾಣ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಪ್ರಮಾಣ ಅಧಿಕವಾಗುತ್ತಿರುವುದು ಸಮಾಧಾನ ತಂದಿದೆ. ವಿಪಯಾರ್ಸವೆಂದರೆ ಕಡ್ಡಾಯವಾಗಿ ಹೋಮ್‌ ಕ್ವಾರಂಟೈನ್ ಇರಬೇಕೆಂದು ತಾಕೀತು ಮಾಡುತ್ತಿದ್ದರೂ ಜನ ಮಾತ್ರ ಮನೆಯಿಂದ ಹೊರಬಂದು ನಿಯಮ‌ ಉಲ್ಲಂಘಿಸುತ್ತಿದ್ದಾರೆ‌.

ಹೋಮ್ ಕ್ವಾರಂಟೈನ್ ನಿಯಮ‌ ಉಲ್ಲಂಘನೆ
ಹೋಮ್ ಕ್ವಾರಂಟೈನ್ ನಿಯಮ‌ ಉಲ್ಲಂಘನೆ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸೋಂಕಿನಿಂದ ಗುಣಮುಖರಾಗಿ ಹೊರಬಂದ ನಂತರ ಮನೆಯಲ್ಲಿ14 ದಿನ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸುತ್ತಾರೆ. ಆದ್ರೂ ಜನರು ಇದಕ್ಕೆ ಕ್ಯಾರೆ‌ ಎನ್ನುತ್ತಿಲ್ಲ‌. ಇದಕ್ಕೆ ಪೂರಕವೆಂಬಂತೆ ನಗರದ 70 ಪೊಲೀಸ್ ಠಾಣೆಗಳಲ್ಲಿ 720ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಹೋಮ್ ಕ್ವಾರಂಟೈನ್ ನಿಯಮ‌ ಉಲ್ಲಂಘನೆ

ಹೋಮ್ ಕ್ವಾರಂಟೈನ್ ನಿಯಮ‌ ಪಾಲನೆ‌ ಉಸ್ತುವಾರಿ ಮುಖ್ಯಸ್ಥ ಹಾಗೂ ಸಿವಿಲ್‌ ಡಿಫೆನ್ಸ್ ಪಿಆರ್​ಎಸ್ ಚೇತನ್ ನೇತೃತ್ವದ ತಂಡ ಕ್ವಾರಂಟೈನ್ ನಿಯಮ‌ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆಯಡಿ 720 ಜನರ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದೆ.

ಕೊರೊನಾದಿಂದ ಗುಣಮುಖರಾಗಿರುವವರು ಹಾಗೂ ಪ್ರಾಥಮಿಕ‌ ಸಂಪರ್ಕದಲ್ಲಿರುವವರನ್ನು ಮನೆಯಲ್ಲಿರುವಂತೆ‌ ತಾಕೀತು ಮಾಡುವುದಲ್ಲದೆ ಅಕ್ಕಪಕ್ಕದ ಮನೆಯವರಿಗೂ ಸೋಂಕಿತರು ಹೊರಬಂದರೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಹೇಳುವುದು ಸಹಜ‌ ಪ್ರಕ್ರಿಯೆ. ಅಲ್ಲದೆ ಹೋಮ್‌ ಕ್ವಾರಂಟೈನ್​ನಲ್ಲಿ ಇರುವವರ ಕೈಗಳಿಗೆ ಸೀಲ್ ಹಾಕಿ, ಕಡ್ಡಾಯವಾಗಿ ಕ್ವಾರಂಟೈನ್ ವಾಚ್ ಆ್ಯಪ್ ಮಾಡುವಂತೆ ಅಳವಡಿಸಿಕೊಳ್ಳಬೇಕು. ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಿದರೆ, ಮನೆಯಿಂದ 100 ಮೀಟರ್ ದೂರ ಬಂದರೂ ಪತ್ತೆ ಹಚ್ಚುವುದು ಸುಲಭವಾಗಿದೆ. ಅದೆಷ್ಟೋ ಜನರು ಮನೆಯಿಂದ ಹೊರಗಡೆ ಬಂದಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಂಡು‌ ಅವರವರ ಮನೆಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ‌ ನಿರ್ದಶನಗಳಿವೆ.

ಇನ್ನು ಅಧಿಕಾರಿಗಳ ಪರಿಶೀಲನೆ ವೇಳೆ ಕ್ವಾರಂಟೈನ್ ನಿಯಮ ಉಲ್ಲಂಘನೆ ಬಗ್ಗೆ ಪ್ರಶ್ನಿಸಿದರೆ ತರಹೇವಾರಿ ಉತ್ತರ ನೀಡಿರುವುದು ಕಂಡುಬಂದಿದೆ. ತರಕಾರಿ, ದಿನಸಿ ಖರೀದಿಗೆ ಬಂದಿದ್ದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನನಗೆ ಯಾವುದೇ ಸೋಂಕು ಇಲ್ಲ. ನನಗೆ ಕೊರೊನಾ ಬರುವುದಿಲ್ಲ ಎಂದು ಅಧಿಕಾರಿಗಳ ವಿರುದ್ದವೇ ಕೆಂಡಕಾರಿರುವುದು ಬೆಳಕಿಗೆ ಬಂದಿದೆ.

ಜನರ ಒಳಿತಿಗಾಗಿ ಹೋಮ್ ಕ್ವಾರಂಟೈನ್​ನಲ್ಲಿ ಇರುವಂತೆ ನಿಯಮ‌ ರೂಪಿಸಿದರೂ, ಜನರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಹೊರಬಂದು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Last Updated : Aug 4, 2020, 1:11 PM IST

ABOUT THE AUTHOR

...view details