ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಆರ್ಎಸ್ಎಸ್ ಸಮಾವೇಶದಲ್ಲಿ ಆರ್ಎಸ್ಎಸ್ ಮುಖಂಡ ಡಾ.ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಬಯಲಾಗಿದೆ.
ಭಾಗವತ್ ಹತ್ಯೆಗೆ ಸಂಚು ವಿಚಾರ: ಅವರಿಗೆ ಝೆಡ್ ಪ್ಲಸ್ ಭದ್ರತೆಯಿದೆ ಎಂದ ಗೃಹ ಸಚಿವ - ಭಾಗವತ್ ಹತ್ಯೆ ಪಿತೂರಿ ಕುರಿತು ಗೃಹ ಸಚಿವರ ಪ್ರತಿಕ್ರಿಯೆ
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಆರ್ಎಸ್ಎಸ್ ಸಮಾವೇಶದಲ್ಲಿ ಆರ್ಎಸ್ಎಸ್ ಮುಖಂಡ ಡಾ.ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಬಯಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಝೆಡ್ ಪ್ಲಸ್ ಭದ್ರತೆಯಿದೆ ಹೆದರಬೇಕಿಲ್ಲ ಎಂದಿದ್ದಾರೆ.

ಸಮಾವೇಶದಲ್ಲಿ ಮೋಹನ್ ಭಾಗವತ್ ಅವರನ್ನು ಹತ್ಯೆ ಮಾಡುವ ಕುರಿತು ಗ್ಲೋಬಲ್ ಟೆರರಿಸ್ಟ್ (ಜಿಟಿಜಿ) ಗ್ರೂಪ್ ಇಂಟರ್ ನೆಟ್ನಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಆಂತರಿಕ ಭದ್ರತಾ ಪಡೆ(ಐಎಸ್ಡಿ)ಗೆ ಮಾಹಿತಿ ನೀಡಿದೆ. ಗುಪ್ತಚರ ಇಲಾಖೆ ಮಾಹಿತಿ ಆದರಿಸಿ, ಸಮಾವೇಶ ನಡೆದ ಮೈದಾನ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಅಲ್ಲದೇ ಸುತ್ತ ಮುತ್ತ ಓಡಾಡುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಟ್ಟು, ನಗರದ ಡಿಜೆಹಳ್ಳಿ, ಕೆಜಿಹಳ್ಳಿ, ಗೂರಪ್ಪನಪಾಳ್ಯ,ಇಲಿಯಾಸ್ ನಗರ ಶಿವಾಜಿನಗರ, ಯಾರಬ್ ನಗರ, ಪ್ರೇಜರ್ ಟೌನ್, ಚಾಮರಾಜಪೇಟೆ ಸೇರಿ ಹಲವೆಡೆ ಪೊಲೀಸರು ತೀವ್ರ ನಿಗಾವಹಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರ್ಎಸ್ಎಸ್ ಸಂಚಾಲಕ ಡಾ.ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಹೆದರಬೇಕಿಲ್ಲ. ಅವರಿಗೆ ಈಗಾಗಲೇ ಝೆಡ್ ಪ್ಲಸ್ ಭದ್ರತೆ ಇದೆ. ನಮ್ಮ ಪೊಲೀಸರು, ಗುಪ್ತಚರ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.