ಕರ್ನಾಟಕ

karnataka

ETV Bharat / state

ಪಾರದರ್ಶಕ ತನಿಖೆಗಾಗಿ ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ: ಆರಗ ಜ್ಞಾನೇಂದ್ರ - ಗೃಹ ಸಚಿವ ಆರಗ ಜ್ಞಾನೇಂದ್ರ

ಪಿಎಸ್​ಐ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಈ ಪ್ರಕರಣವನ್ನೂ ಯಾವುದೇ ಒತ್ತಡವಿಲ್ಲದೇ ಪಾರದರ್ಶಕವಾಗಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಪಾರದರ್ಶಕ ತನಿಖೆಗಾಗಿ ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವರ್ಗಾವಣೆ: ಆರಗ ಜ್ಞಾನೇಂದ್ರ
home-miniser-araga-jnanedra-said-santro-ravi-case-transferred-to-cid

By

Published : Jan 17, 2023, 2:17 PM IST

ಬೆಂಗಳೂರು:ಸ್ಯಾಂಟ್ರೋ ರವಿ ಪ್ರಕರಣದ ತನಿಖೆಯನ್ನು ಮೈಸೂರು ಪೊಲೀಸರು ನಡೆಸುತ್ತಿದ್ದಾರೆ. ಆದರೆ, ಪಾರದರ್ಶಕವಾಗಿ ತನಿಖೆ ನಡೆಯಬೇಕು. ಯಾವುದೇ ಒತ್ತಡ ಇರಬಾರದು ಎನ್ನುವ ಕಾರಣದಿಂದ ಈ ಪ್ರಕರಣವನ್ನು ಸಿಐಡಿಗೆ ವಹಿಸುವ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಜಯಮಹಲ್‌ನಲ್ಲಿರುವ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್​ಐ ಹಗರಣದ ತನಿಖೆಯನ್ನು ಸಿಐಡಿ ತಂಡ ಬಹಳ ಉತ್ತಮ ರೀತಿಯಲ್ಲಿ ಮಾಡಿದೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನೂ ಅವರಿಗೆ ವಹಿಸಿದ್ದೇವೆ. ಪಿಎಸ್​​ಐ ಹಗರಣ ತನಿಖೆ ಮಾಡಿದ್ದ ತಂಡವೇ ಈ ಪ್ರಕರಣದ ನೇತೃತ್ವ ವಹಿಸುತ್ತದೆ. ಬದ್ಧತೆಯಿಂದ ಸಿಐಡಿಗೆ ತನಿಖೆ ಜವಾಬ್ದಾರಿ ವಹಿಸಿದ್ದೇವೆ. ಬಹಳ ಚೆನ್ನಾಗಿ ತನಿಖೆ ಮಾಡಬೇಕು, ಅಪರಾಧಿಗೆ ಶಿಕ್ಷೆ ಆಗಬೇಕು. ಆರೋಪಿ ಮೇಲೆ ಈಗ ಅತ್ಯಾಚಾರ, ಕೊಲೆ ಬೆದರಿಕೆ, ಹಲ್ಲೆ, ವರದಕ್ಷಿಣೆ ಕಿರುಕುಳದ ಆರೋಪಗಳಿದ್ದು, ಈ ಎಲ್ಲಾ ಆರೋಪಗಳ ಮೇಲೆ ದಾಖಲಾಗಿರುವ ದೂರುಗಳನ್ವಯವೇ ಪ್ರಕರಣದ ತನಿಖೆ ಆಗುತ್ತದೆ ಎಂದರು.

ಇದು ಗಂಭೀರ ಪ್ರಕರಣವಲ್ಲ. ಸಾರ್ವಜನಿಕವಾಗಿ ಚರ್ಚೆ ಆಗಿರುವ ಪ್ರಕರಣವಿದು. ಅಲ್ಲದೇ, ಇದನ್ನು ಪಾರದರ್ಶಕವಾಗಿ ತನಿಖೆ ಮಾಡಿ ರವಿ ಮುಖವಾಡ ಕಳಚಿ ಹೊರ ತರಬೇಕು. ಕಳೆದ 20 ವರ್ಷಗಳಲ್ಲಿ ರವಿ ಯಾರೆಲ್ಲರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ, ಇದರಲ್ಲಿ ಏನಾಗಿದೆ ಎನ್ನುವುದು ಈ ಪ್ರಕರಣದ ತನಿಖೆಯಿಂದ ಹೊರಬರಬೇಕು. ಹೀಗಾಗಿ ಸಿಐಡಿ ತನಿಖೆಗೆ ಒಪ್ಪಿಸಿದ್ದೇವೆ. ಆರೋಪಿಯ ಹೆಂಡತಿ ಕೊಟ್ಟ ಪ್ರಕರಣ ಮತ್ತು ಇನ್ನಿತರ ಪ್ರಕರಣದ ಜೊತೆ ಯಾರ ಜೊತೆಗೆ ಆತನ ಸಂಬಂಧ, ವ್ಯವಹಾರ ಇತ್ತು. ಇದೆಲ್ಲ ಸಂಪೂರ್ಣ ತನಿಖೆ ಆಗಬೇಕು ಎಂದು ಸಚಿವರು ತಿಳಿಸಿದರು.

ಪ್ರಕರಣವನ್ನು ಸಿಐಡಿಯಿಂದ ತನಿಖೆ ಮಾಡಿಸಿದರೂ ಕಷ್ಟ, ತನಿಖೆ ಮಾಡಿಸದಿದ್ದರೂ ಕಷ್ಟ. ಸರ್ಕಾರ ಈಗಾಗಲೇ ಸಿಐಡಿಗೆ ಕೊಡುವ ತೀರ್ಮಾನ ತೆಗೆದುಕೊಂಡಿದೆ. ಏನೇನು ದಾಖಲಾತಿ ಇದೆಯೋ ಅದನ್ನು ನೋಡಿಕೊಂಡು ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದನ್ನು ಸಮರ್ಥಿಸಿಕೊಂಡರು.

ಸಾರ್ವಜನಿಕ ಜೀವನದಲ್ಲಿ ಶುದ್ಧವಾಗಿದ್ದೇನೆ: ಮಲೆನಾಡ ಹಬ್ಬದಲ್ಲಿ ಭಾವುಕ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ನಾನು ಪ್ರಾಮಾಣಿಕ. ನನ್ನ ಪೋಟೋ ಇಟ್ಟು ರಾಜಕೀಯ ಮಾಡಿದರು. ಹಾಗಾಗಿ ಮನಸ್ಸಿಗೆ ನೋವಾಗಿ ಭಾವುಕನಾದೆ ಅಷ್ಟೇ. ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಕಷ್ಟವಾಗುತ್ತದೆ. ನನ್ನ ಜೊತೆ ಎಲ್ಲರೂ ಪೋಟೋ ತೆಗೆಸಿಕೊಳ್ಳುತ್ತಾರೆ. ಕೆಲವರು ಇದರಲ್ಲಿ ಬ್ಯೂಸಿನೆಸ್ ಮಾಡಿಕೊಂಡಿದ್ದಾರೆ. ವೃತ್ತಿ ಮಾಡಿಕೊಂಡಿದ್ದರೆ ಅವರಿಗೆ ಹತ್ತರಲ್ಲಿ ಹನ್ನೊಂದು, ಇದು ನನ್ನಂತಹ ಪ್ರಯಾಣಿಕರಿಗೆ ನೋವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಶುದ್ಧತೆ ಕಾಪಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಸುಳ್ಳು ಆರೋಪ: ಶಾಸಕ ತಿಪ್ಪಾರೆಡ್ಡಿ ವಿರುದ್ಧ ಗುತ್ತಿಗೆದಾರ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಸುಳ್ಳು ಆರೋಪ ಮಾಡಿದರೆ ನಡೆಯಲ್ಲ. ಶಾಸಕ ತಿಪ್ಪಾರೆಡ್ಡಿ ಈಗಾಗಲೇ ತಮ್ಮ ವಿರುದ್ಧ ಮಾಡಿರುವ ಆರೋಪದ ಕುರಿತು ಹೇಳಿಕೆ ನೀಡಿದ್ದಾರೆ. ಗುತ್ತಿಗೆದಾರರ ವಿರುದ್ಧ ಕೇಸ್ ಹಾಕುತ್ತೇವೆ ಎಂದಿದ್ದಾರೆ. ಸುಳ್ಳು ಆರೋಪ ಮಾಡಿದವರು ಅನುಭವಿಸಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಉಚಿತ ಯೋಜನೆ ಭರವಸೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಉಚಿತ ಯೋಜನೆಯನ್ನು ಬೇಕಾಬಿಟ್ಟಿ ಕೊಡಲು ಆಗಲ್ಲ, ಹಿಂದೆ ಆಡಳಿತ ನಡೆಸಿದ ಪಕ್ಷ ಯಡಿಯೂರಪ್ಪ ಸೈಕಲ್ ಕೊಟ್ಟಿದ್ದರು. ಲೆಕ್ಕಾಚಾರ ಹಾಕಿ ಕಾರ್ಯಕ್ರಮ ಘೋಷಣೆ ಮಾಡಬೇಕು, ಅಧಿಕಾರಕ್ಕೆ ಬರಬೇಕು ಅಂತ ಈ ರೀತಿಯಲ್ಲಿ ಘೋಷಣೆ ಮಾಡಬಾರದು, ಉಚಿತವಾಗಿ ಕೊಡುತ್ತಾ ಹೋದರೆ ಅಭಿವೃದ್ಧಿ ಹೇಗೆ ಮಾಡಲು ಆಗುತ್ತದೆ. ನಾವು ಕೂಡ ಈ ರೀತಿಯಲ್ಲಿ ಭರವಸೆ ಕೊಡಬಹುದಿತ್ತಲ್ಲ. ಕೇವಲ ಚುನಾವಣೆಗೆ ‌ಮಾತ್ರ ಕಾಂಗ್ರೆಸ್ ಭರವಸೆ ನೀಡುತ್ತಿದೆ, ಇಂತಹ ಭರವಸೆಗಳ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಇದು ಸಾಧ್ಯ ಆಗಲ್ಲ ಎಂದು ಕಾಂಗ್ರೆಸ್ ಉಚಿತ ಯೋಜನೆಗೆ ಕಿಡಿ ಕಾರಿದರು.

ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಮತ್ತೊಂದು ಸಂಕಷ್ಟ: ಹೊಸ ಪ್ರಕರಣ ದಾಖಲಿಸಿದ ಎರಡನೇ ಪತ್ನಿ

ABOUT THE AUTHOR

...view details