ಕರ್ನಾಟಕ

karnataka

By

Published : Oct 27, 2021, 7:17 PM IST

ETV Bharat / state

ಅಕ್ರಮ ಕಟ್ಟಡ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಅಸಮಾಧಾನ

ಪಾಲಿಕೆ ಪರ ವಾದಿಸಿದ ವಕೀಲ ನಂಜುಂಡರೆಡ್ಡಿ, 2020ರ ನಂತರ ನಿರ್ಮಾಣವಾದ 5,905 ಕಟ್ಟಡಗಳ ಸಮೀಕ್ಷೆ ಮಾಡಲಾಗಿದೆ. ಈ ಪೈಕಿ 4,279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿವೆ. ಈ ಕಟ್ಟಡಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನೂ 2,591 ಕಟ್ಟಡಗಳ ಸರ್ವೆ ಬಾಕಿಯಿದೆ. ನಕ್ಷೆಯಿಲ್ಲದೆ ನಿರ್ಮಾಣವಾದ ಕಟ್ಟಡಗಳ ಸರ್ವೆ ಆರಂಭವಾಗಿಲ್ಲ. ಅಕ್ರಮ ಸಕ್ರಮ ಕಾಯ್ದೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿವೆ ಎಂದು ವಿವರಿಸಿದರು..

High Court
ಹೈಕೋರ್ಟ್

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಕಾರ್ಯ ವೈಖರಿಗೆ ಹೈಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನಗರದಲ್ಲಿ ನಿಯಮಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಾಲಯದ ಹಿಂದಿನ ಸೂಚನೆಯಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವಿಚಾರಣೆಗೆ ಹಾಜರಾಗಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಪೀಠ, ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿ, ನ್ಯಾಯಾಲಯದ ಆದೇಶಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲವೇಕೆ? ಈವರೆಗೆ ಎಷ್ಟು ಅಕ್ರಮ ಕಟ್ಟಡ ತೆರವು ಮಾಡಿದ್ದೀರಿ ಎಂದು ಪ್ರಶ್ನಿಸಿತು.

ಪಾಲಿಕೆ ಪರ ವಾದಿಸಿದ ವಕೀಲ ನಂಜುಂಡರೆಡ್ಡಿ, 2020ರ ನಂತರ ನಿರ್ಮಾಣವಾದ 5,905 ಕಟ್ಟಡಗಳ ಸಮೀಕ್ಷೆ ಮಾಡಲಾಗಿದೆ. ಈ ಪೈಕಿ 4,279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿವೆ. ಈ ಕಟ್ಟಡಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನೂ 2,591 ಕಟ್ಟಡಗಳ ಸರ್ವೆ ಬಾಕಿಯಿದೆ. ನಕ್ಷೆಯಿಲ್ಲದೆ ನಿರ್ಮಾಣವಾದ ಕಟ್ಟಡಗಳ ಸರ್ವೆ ಆರಂಭವಾಗಿಲ್ಲ. ಅಕ್ರಮ ಸಕ್ರಮ ಕಾಯ್ದೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿವೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅಕ್ರಮ ಕಟ್ಟಡಗಳ ತೆರವು ವಿಚಾರವಾಗಿ ಬಿಬಿಎಂಪಿ ಈವರೆಗೆ ಕಠಿಣ ಕ್ರಮ ಕೈಗೊಂಡಿಲ್ಲ. ನಕ್ಷೆಯಿಲ್ಲದ ಕಟ್ಟಡಗಳನ್ನು ಗಮನಿಸಿಲ್ಲ. ಅಕ್ರಮ ಕಟ್ಟಡ ನೆಲಸಮಗೊಳಿಸಲು ಹೆದರುತ್ತಿರುವುದೇಕೆ?. ಇದು ತೀರಾ ಆಘಾತಕಾರಿ ಬೆಳವಣಿಗೆ. ಶೀಘ್ರವಾಗಿ ಕ್ರಮ ಕೈಗೊಂಡರೆ ಅಧಿಕಾರಿಗಳಿಗೂ ಒಳ್ಳೆಯದು.

ಇಲ್ಲದಿದ್ದರೆ ನಿಮ್ಮ ವಿರುದ್ಧ ನ್ಯಾಯಾಲಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೂಡಲೇ ಅಕ್ರಮ ಕಟ್ಟಡಗಳ ಸಮೀಕ್ಷೆ ಪೂರ್ಣಗೊಳಿಸಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಫೋಟೋ ಸಹಿತ ವರದಿ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ : ದುಬಾರಿ ದುನಿಯಾದಲ್ಲಿ ಗ್ರಾಹಕರು-ಮಾರಾಟಗಾರರು ತತ್ತರ

ABOUT THE AUTHOR

...view details