ಕರ್ನಾಟಕ

karnataka

By

Published : Sep 13, 2022, 6:56 PM IST

ETV Bharat / state

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ವಿಚಾರಣೆ ಪೂರ್ಣ. ವಾರ್ಡ್ ಪುನರ್ ವಿಂಗಡಣೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಬಿಬಿಎಂಪಿ ಕಾಯಿದೆ ಉಲ್ಲಂಘಿಸಿ ವಾರ್ಡ್ ಪುನರ್ ವಿಂಗಡಣೆ ಮಾಡಿ ಹೊರಡಿಸಿರುವ ಅಧಿಸೂಚನೆ ರದ್ದು ಪಡಿಸುವಂತೆ ಬೊಮ್ಮನಳ್ಳಿ ಶಾಸಕ ನಂದೀಶ್ ರೆಡ್ಡಿ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಕುರಿತಂತೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ರಚನೆ ಮಾಡಿರುವ ಪುನರ್ ವಿಂಡಣೆ ಕುರಿತು ಅಂತಿಮ ಅಧಿಸೂಚನೆ ರದ್ದು ಪಡಿಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಿಬಿಎಂಪಿ ಕಾಯಿದೆ ಸೆಕ್ಷನ್ 7(ಬಿ) ಪ್ರಕಾರ ವಿಧಾನಸಭೆ ಸದಸ್ಯರ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯೊಳಗೆ ವಾರ್ಡ್​ಗಳ ವಿಭಾಗಿಸಬೇಕು. ಯಾವುದೇ ವಾರ್ಡ್​​ಅನ್ನು ಇತರೆ ಕ್ಷೇತ್ರಗಳಿಗೆ ವಿಸ್ತರಿಸಬಾರದು ಎಂದು ಹೇಳಲಾಗಿದೆ. ಆದರೆ, ಹುಳಿಮಾವು ವಾರ್ಡ್‌ ಪುನರ್ ವಿಂಡನೆ ವಿಚಾರದಲ್ಲಿ ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸೇರಿಸಲಾಗಿದೆ.

ರಾಜ್ಯ ಸರ್ಕಾರ ವಾರ್ಡ್ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ತಾನು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಇದರಿಂದ ಮತದಾರರಿಗೆ ತೀವ್ರ ತರದ ಗೊಂದಲಗಳುಂಟಾಗಲಿದೆ. ಆದ್ದರಿಂದ ವಾರ್ಡ್ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು.

ಅಲ್ಲದೆ, ಈ ಸಂಬಂಧ ಪುನರ್ ಪರಿಶೀಲನೆ ಮಾಡುವಂತೆ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು. ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ರದ್ದು ಪಡಿಸಬೇಕು ಎಂದು ಮನವಿ ಮಾಡಿದ್ದರು. ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ವಾರ್ಡ್​ನಲ್ಲಿ ಈ ಹಿಂದೆ ಇದ್ದ 14 ವಾರ್ಡ್​​ಗಳ ಜೊತೆಗೆ ಹೆಚ್ಚುವರಿಯಾಗಿ 6 ವಾರ್ಡ್​​ಗಳನ್ನು ಸೇರ್ಪಡೆ ಮಾಡಲಾಗಿದೆ.

ಇವುಗಳಲ್ಲಿ ಒಂದಾದ ಹುಳಿಮಾವು ವಾರ್ಡ್(239) ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಸೇರಿ ಎರಡೂ ವಾರ್ಡ್​​ಗಳಲ್ಲಿ ಸೇರಿಹೋಗಿದೆ. ಇದು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯಿದೆ 2020 ಸೆಕ್ಷನ್ 7ಕ್ಕೆ ವಿರುದ್ಧವಾಗಿದೆ.

ವಾರ್ಡ್​​ನಲ್ಲಿರುವ ಅಕ್ಷಯಾ ಗಾರ್ಡನ್ ಬಡಾವಣೆ, ಸತ್ಯಸಾಯಿ ಬಡಾವಣೆ, ಶಿರಡಿ ಸಾಯಿನಗರ, ವಿಐಪಿ ಬಡಾವಣೆ ಮತ್ತು ಹಿರಾನಂದಾನಿ ಅಪಾರ್ಟ್​​ಮೆಂಟ್​, ಹುಳಿಮಾವು ವಾರ್ಡ್​​ಗೆ (ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ) ಸೇರಿಸಲಾಗಿದೆ. ಆದರೆ, ಅಲ್ಲಿನ ಮತದಾರರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮತಹಾಕಬೇಕಾಗಿದೆ.

ಈ ಅಂಶ ಬೆಳಕಿಗೆ ಬರುತ್ತಿದ್ದಂತೆ ಅರ್ಜಿದಾರರು ಬಿಬಿಎಂಪಿ ವಿಭಾಗೀಯ ಜಂಟಿ ಆಯುಕ್ತರು(ದಕ್ಷಿಣ) ಅವರಿಗೆ ಮನವಿ ಸಲ್ಲಿಸಿ ಈ ಗೊಂದಲ ಸರಿಪಡಿಸುವಂತೆ ಕೋರಿದ್ದರು. ಜತೆಗೆ, ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಡುವೆ ಬಿಬಿಎಂಪಿ ವಿಭಾಗೀಯ ಜಂಟಿ ಆಯುಕ್ತರು(ದಕ್ಷಿಣ) ಎರಡು ಬಾರಿ ಪತ್ರ ಬರೆದು ಗೊಂದಲಗಳನ್ನು ಸರಿಪಡಿಸುವುದಾಗಿ ಸೂಚನೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಬದಲಾವಣೆ ಆಗಿರಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

(ಇದನ್ನೂ ಓದಿ: ಬಿಬಿಎಂಪಿ ವಾರ್ಡ್​ ಪುನರ್​ ವಿಂಗಡಣೆ ಸಮರ್ಥಿಸಿಕೊಂಡ ಸರ್ಕಾರ)

ABOUT THE AUTHOR

...view details