ಕರ್ನಾಟಕ

karnataka

By ETV Bharat Karnataka Team

Published : Nov 22, 2023, 6:43 PM IST

ETV Bharat / state

ಭದ್ರತೆಯ ಉದ್ಯೋಗ ಮೌಲ್ಯಯುತ ಆಸ್ತಿ ಇದ್ದಂತೆ, ಹುದ್ದೆಗಾಗಿ ಸುಳ್ಳು ಹೇಳುವುದು ವಂಚನೆಗೆ ಸಮಾನ: ಹೈಕೋರ್ಟ್

High Court order in a lawyer case: ತನ್ನ ಮೇಲಿನ ಪ್ರಕರಣ ಮರೆಮಾಚಿ ಹುದ್ದೆಯೊಂದಕ್ಕೆ ಆಯ್ಕೆಯಾಗಿದ್ದ ವಕೀಲರೊಬ್ಬರ ವಿರುದ್ಧದ ಆರೋಪಪಟ್ಟಿ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.

high-court-refuses-to-quash-charge-sheet-against-lawyer
ಭದ್ರತೆಯ ಉದ್ಯೋಗ ಮೌಲ್ಯಯುತ ಆಸ್ತಿ ಇದ್ದಂತೆ, ಹುದ್ದೆಗಾಗಿ ಸುಳ್ಳು ಹೇಳುವುದು ವಂಚನೆಗೆ ಸಮಾನ : ಹೈಕೋರ್ಟ್

ಬೆಂಗಳೂರು:ಭದ್ರತೆಯಿರುವ ಉದ್ಯೋಗ ಮೌಲ್ಯಯುತವಾದ ಆಸ್ತಿಗೆ ಸಮಾನವಾದದ್ದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮರೆಮಾಚಿದ ಆರೋಪ ಎದುರಿಸುತ್ತಿದ್ದ ವಕೀಲರ ವಿರುದ್ಧದ ಆರೋಪಪಟ್ಟಿ ರದ್ದುಪಡಿಸಲು ನಿರಾಕರಿಸಿದೆ.

ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತನ್ನ ವಿರುದ್ಧ ವಿಚಾರಣಾ ಹಂತದಲ್ಲಿದ್ದ ಕ್ರಿಮಿನಲ್/ ಸಿವಿಲ್ ಪ್ರಕರಣಗಳನ್ನು ಮರೆಮಾಚಿದ್ದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಕುರಿತಂತೆ ಸಲ್ಲಿಕೆಯಾಗಿದ್ದ ಆರೋಪಪಟ್ಟಿಯನ್ನು ಪ್ರಶ್ನಿಸಿ ಸೋಮವಾರಪೇಟೆ ತಾಲೂಕಿನ ವಕೀಲ ಎಸ್.ಎಸ್. ಪಾಲಾಕ್ಷ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮೋಸದಿಂದ ಯಾವುದೇ ಸ್ವತ್ತನ್ನು ತನ್ನಲ್ಲಿಟ್ಟುಕೊಳ್ಳುವುದು ವಂಚನೆಗೆ ಸಮ. ಇದು ಭಾರತೀಯ ದಂಡ ಸಂಹಿತೆ ಸೆಕ್ಷನ್ 415ರ ಪ್ರಕಾರ ಅಪರಾಧ. ಹೀಗಾಗಿ ಭದ್ರತೆಯಿರುವ ಉದ್ಯೋಗವೂ ಒಂದು ಮೌಲ್ಯಯುತ ಸ್ವತ್ತಾಗಿದೆ. ಇದನ್ನು ಪಡೆಯುವುದಕ್ಕಾಗಿ ಸುಳ್ಳು ಮಾಹಿತಿ ನೀಡುವುದು ವಂಚನೆ ಮಾಡಿದಂತೆ ಎಂದು ತಿಳಿಸಿದೆ.

ಅರ್ಜಿದಾರರು, ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಣ್ತಪ್ಪಿನಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಗ್ರೂಪ್ ಡಿ ನೌಕರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪಾಗಿದೆ ಎಂದರೆ ಪರವಾಗಿಲ್ಲ. ಆದರೆ, ಸತತ 13 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಮಾಡಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಈ ತಪ್ಪು ಆಗದಂತೆ ನೋಡಿಕೊಳ್ಳಬೇಕು. ನೇಮಕಾತಿ ಅಧಿಸೂಚನೆಯಲ್ಲಿ ಪ್ರಸ್ತುತ ಇರುವ ಹಾಗೂ ಹಿಂದೆ ಇದ್ದ ಪ್ರಕರಣಗಳ ಬಗ್ಗೆ ಸ್ಪಷ್ಟವಾಗಿ ಕೇಳಲಾಗಿದೆ. ಆದರೆ, ಅರ್ಜಿದಾರರು ನೇಮಕಾತಿ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಅದಕ್ಕೂ ಹಿಂದೆ ಇದ್ದ ಪ್ರಕರಣಗಳನ್ನು ಮರೆಮಾಚಿದಂತಿದೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ, ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಈ ರೀತಿಯ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ನಿರಾಕರಿಸಿ ಅರ್ಜಿ ವಜಾಗೊಳಿಸಿ ಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ಅರ್ಜಿದಾರರು 13 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019ರ ಸೆಪ್ಟಂಬರ್ 15ರಂದು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಭರ್ತಿ ಮಾಡಲು ಹೈಕೋರ್ಟ್ ಅರ್ಜಿಗಳನ್ನು ಆಹ್ವಾನಿಸಿತ್ತು. ಅರ್ಜಿ ಸಲ್ಲಿಸುವರು ತಮ್ಮ ವಿರುದ್ಧ ಪ್ರಸ್ತುತ ಇರುವ ಹಾಗೂ ಹಿಂದೆ ಇದ್ದಂತಹ ಕ್ರಿಮಿನಲ್/ಸಿವಿಲ್ ಪ್ರಕರಣಗಳ ಬಗ್ಗೆ ತಿಳಿಸಬೇಕು ಎಂಬ ಷರತ್ತು ನೀಡಲಾಗಿತ್ತು. ಆದರೆ, ಅರ್ಜಿದಾರರ ತಮ್ಮ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಸೇರಿ 9 ಪ್ರಕರಣಗಳು ದಾಖಲಾಗಿದ್ದರೂ, ಯಾವುದೇ ಪ್ರಕರಣ ಇಲ್ಲ ಎಂಬುದಾಗಿ ಉಲ್ಲೇಖಿಸಿದ್ದರು.

ಈ ನಡುವೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯಲ್ಲಿಯೂ ಅಜಿದಾರರು ಆಯ್ಕೆಯಾಗಿದ್ದರು. ಜಿಲ್ಲಾ ನ್ಯಾಯಾಧೀಶರಿಗೆ ಆಯ್ಕೆಯಾಗಿದ್ದ ಒಟ್ಟು ಮೂರು ಅಭ್ಯರ್ಥಿಗಳಲ್ಲಿ ಅರ್ಜಿದಾರರು ಒಬ್ಬರಾಗಿದ್ದರು. ಆದರೆ, ಅನಾಮಧೇಯರಿಂದ ಹೈಕೋರ್ಟ್‌ಗೆ ದೂರೊಂದು ಬಂದಿದ್ದು, ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವ ಸಂಬಂಧ ಗೊತ್ತಾಗಿತ್ತು. ಈ ಕುರಿತಂತೆ ವಿವರಣೆ ನೀಡುವಂತೆ ಹೈಕೋರ್ಟ್ ಅರ್ಜಿದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಅರ್ಜಿದಾರರು ಉತ್ತರಿಸಿದ್ದರು, ಜೊತೆಗೆ, ಮೌಖಿಕವಾಗಿ ವಿಚಾರಣೆಯನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಎಲ್ಲ ಪ್ರಕರಣಗಳು ಇತ್ಯರ್ಥವಾಗಿದೆ. ಕೇವಲ ಒಂದು ಪ್ರಕರಣ ಬಾಕಿಯಿದೆ. ಅದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಚಾರ್ತುಯದಿಂದ ತಪ್ಪಾಗಿದೆ ಎಂದು ವಿವರಣೆ ನೀಡಿದ್ದರು.

ನಂತರ ಹೈಕೋರ್ಟ್ ರಿಜಿಸ್ಟ್ರಾರ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಅರ್ಜಿದಾರರ ವಿರುದ್ಧ ವಂಚನೆ ಆರೋಪದಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು. ಇದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಡಿಕೆಶಿ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ಕ್ರಮ ಪ್ರಶ್ನಿಸಿದ್ದ ಅರ್ಜಿ : ವಿಚಾರಣೆ ಮುಂದೂಡಿದ ಹೈಕೋರ್ಟ್

ABOUT THE AUTHOR

...view details