ಕರ್ನಾಟಕ

karnataka

By

Published : Jun 25, 2020, 7:52 AM IST

ETV Bharat / state

’ಅತ್ಯಾಚಾರದಿಂದ ಸುಸ್ತಾಗಿ ಮಲಗಿದ್ದೆ ಎಂದು ಯಾವ ಭಾರತೀಯ ನಾರಿಯೂ ಹೇಳುವುದಿಲ್ಲ’ : ನ್ಯಾ. ಕೃಷ್ಣ ಎಸ್. ದೀಕ್ಷಿತ್

ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಕೇಶ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ , ಅತ್ಯಾಚಾರದಿಂದ ಸುಸ್ತಾಗಿ ಮಲಗಿಬಿಟ್ಟೆ ಎಂದು ಹೇಳುವುದು ಭಾರತೀಯ ನಾರಿಯ ಲಕ್ಷಣವಲ್ಲ. ನಮ್ಮ ನಾಡಿನ ಮಹಿಳೆಯರು ಅವರ ಮೇಲೆ ಆಕ್ರಮಣವಾದಾಗ ನಡೆದುಕೊಳ್ಳುವ ರೀತಿ ಇದಲ್ಲ ಎಂದು ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಅತ್ಯಾಚಾರದಿಂದ ಸುಸ್ತಾಗಿ ಮಲಗಿಬಿಟ್ಟೆ ಎಂದು ಹೇಳುವುದು ಭಾರತೀಯ ನಾರಿಯ ಲಕ್ಷಣವಲ್ಲ. ನಮ್ಮ ನಾಡಿನ ಮಹಿಳೆಯರು ಅವರ ಮೇಲೆ ಆಕ್ರಮಣವಾದಾಗ ನಡೆದುಕೊಳ್ಳುವ ರೀತಿಯೂ ಇದಲ್ಲ ಎಂದು ಹೈಕೋರ್ಟ್ ಅತ್ಯಾಚಾರ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ, ಈ ರೀತಿ ಅಭಿಪ್ರಾಯಪಟ್ಟಿದೆ.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಕೇಶ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಪ್ರಕರಣವನ್ನು ವಿಶ್ಲೇಷಿಸಿರುವ ಪೀಠ, ಮಹಿಳೆಯ ಆರೋಪಗಳನ್ನು ಈ ಹಂತದಲ್ಲೇ ನಂಬುವುದು ಕಷ್ಟ ಎಂದು ಹೇಳಿದೆ.

ಅತ್ಯಾಚಾರ ಆರೋಪ ಹೊತ್ತಿರುವ ವ್ಯಕ್ತಿ ಸಂತ್ರಸ್ತ ಮಹಿಳೆಯ ಮಾಲೀಕತ್ವದ ಸಂಸ್ಥೆಯಲ್ಲೇ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈತ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ ಸಂದರ್ಭದಲ್ಲೇ ಏಕೆ ಕಾನೂನಿನ ಮೊರೆ ಹೋಗಲಿಲ್ಲ. ಹಾಗೆಯೇ, ಸಂಧಾನ ಮಾಡಿಕೊಳ್ಳಲು ಒಪ್ಪಿದರೆ ದೂರನ್ನು ವಾಪಸ್ ಪಡೆಯುವುದಾಗಿ ಮಹಿಳೆ ಪತ್ರ ಬರೆದಿರುವ ಆರೋಪವಿದೆ. ಹೀಗಾಗಿ ದೂರುದಾರ ಮಹಿಳೆ ಹೇಳಿರುವಂತೆ ಮದುವೆಯಾಗುವುದಾಗಿ ಸುಳ್ಳು ಹೇಳಿ ಆರೋಪಿ ಅತ್ಯಾಚಾರ ಎಸಗಿದ್ದಾರೆ ಎಂಬುದನ್ನು ಈ ಹಂತದಲ್ಲೇ ನಂಬುವುದಕ್ಕೆ ಕಷ್ಟವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಮಹಿಳೆಯು ಆರೋಪಿಯ ಜೊತೆಯಲ್ಲೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕೂ ಮುನ್ನ ಆರೋಪಿ ಕುಡಿದು ಬಂದು ಕಾರು ಹತ್ತಿದ ಎಂದು ಹೇಳಿರುವ ಮಹಿಳೆ, ಈ ವೇಳೆ ಪೊಲೀಸರನ್ನಾಗಲಿ, ಸಾರ್ವಜನಿಕರನ್ನಾಗಲಿ ಸಹಾಯಕ್ಕಾಗಿ ಕೂಗಿದ ಬಗ್ಗೆ ವಿವರಣೆ ನೀಡಿಲ್ಲ. ಅಷ್ಟಕ್ಕೂ ಕೃತ್ಯ ನಡೆದ ದಿನ ರಾತ್ರಿ 11 ಗಂಟೆಗೆ ಕಚೇರಿಗೆ ಹೋಗಿದ್ದೇಕೆ ಎಂಬುದರ ಬಗ್ಗೆಯೂ ವಿವರಿಸಿಲ್ಲ. ಜತೆಗೆ ರಾತ್ರಿ ಪೂರ್ತಿ ಆರೋಪಿಯೊಂದಿಗೆ ಉಳಿದಿದ್ದಾರೆ. ಜತೆಗೆ ತನ್ನ ಮೇಲೆ ಅತ್ಯಾಚಾರ ನಡೆದು ಸುಸ್ತಾಗಿದ್ದರಿಂದ ಮಲಗಿಬಿಟ್ಟೆ ಎಂದಿದ್ದಾರೆ. ಇದು ನಮ್ಮ ಮಹಿಳೆಯರು ನಡೆದುಕೊಳ್ಳುವ ರೀತಿಯಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಸರ್ಕಾರದ ಪರ ವಕೀಲರು ಪ್ರಕರಣ ಅತ್ಯಂತ ಗಂಭೀರವಾಗಿದೆ ಹಾಗೂ ಸಾಮಾಜಿಕ ಹಿತದೃಷ್ಟಿಯಿಂದ ಜಾಮೀನು ನೀಡುವುದು ಸೂಕ್ತವಲ್ಲ ಎಂಬ ವಾದವನ್ನು ಒಪ್ಪದ ಪೀಠ, ಆರೋಪ ಗಂಭೀರ ಸ್ವರೂಪದ್ದು ಎಂಬ ಒಂದೇ ಕಾರಣಕ್ಕೆ ಜನರ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು ಎಂದಿದೆ.

ಆರೋಪಿಯು ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ, ತನಿಖೆಗೆ ಸಹಕಾರ, ಅನುಮತಿ ಇಲ್ಲದೇ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬಾರದು. ಪ್ರತಿ ಎರಡು ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡಬೇಕು. ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ.

ಪ್ರಕರಣದ ಹಿನ್ನೆಲೆ: ಆರೋಪಿ ರಾಕೇಶ್(27) ದೂರುದಾರ ಮಹಿಳೆ(42) ಬೆಂಗಳೂರಿನಲ್ಲಿ ನಡೆಸುತ್ತಿರುವ ಕನ್ಸಲ್ಟೆನ್ಸಿ ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಇಬ್ಬರ ನಡುವೆ ಆತ್ಮೀಯತೆ ಇತ್ತು. ಆದರೆ, ಕಳೆದ ಮೇ.2ರಂದು ಮಹಿಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ರಾಕೇಶ್ ವಿರುದ್ಧ ಅತ್ಯಾಚಾರ ಎಸಗಿದ ಆರೋಪದಡಿ ದೂರು ಸಲ್ಲಿಸಿದ್ದರು.

ದೂರಿನಲ್ಲಿ ಏಪ್ರಿಲ್ 22ರಂದು ರಾಕೇಶ್ ತನ್ನೊಂದಿಗೆ ಕಾರಿನಲ್ಲಿ ಕಚೇರಿಗೆ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ. ಬಳಿಕ ಏ. 23ರಂದು ನನ್ನ ಬೆತ್ತಲೆ ಫೋಟೋವನ್ನು ನನಗೆ ಕಳುಹಿಸಿದ. ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್.ಆರ್ ನಗರ ಠಾಣೆ ಪೊಲೀಸರು ಆರೋಪಿ ರಾಕೇಶ್ ವಿರುದ್ಧ ಐಪಿಸಿ ಸೆಕ್ಷನ್ 376, 420, 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಬಿ) ಅಡಿ ದೂರು ದಾಖಲಿಸಿದ್ದರು. ನಗರದ ಸೆಷನ್ಸ್ ಕೋರ್ಟ್ ಆರೋಪಿಗೆ ಜಾಮೀನು ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ.

ABOUT THE AUTHOR

...view details