ಕರ್ನಾಟಕ

karnataka

ವಿದೇಶ ಪ್ರವಾಸ ರದ್ದು: ನಷ್ಟ ಮರುಪಾವತಿ ಮಾಡುವಂತೆ ಮಾಜಿ ಶಾಸಕ ಚಿಕ್ಕಣ್ಣಗೆ ಹೈಕೋರ್ಟ್‌ ಆದೇಶ

By ETV Bharat Karnataka Team

Published : Sep 8, 2023, 6:57 AM IST

2009ರಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಅವರು ಸರ್ಕಾರದಿಂದ ಕಾನೂನು ಅಧ್ಯಯನಕ್ಕಾಗಿ ಹಮ್ಮಿಕೊಂಡಿದ್ದ ಪ್ರವಾಸವನ್ನು, ಪ್ರವಾಸಕ್ಕೆ 5 ದಿನಗಳ ಹಿಂದೆ ರದ್ದುಪಡಿಸಿದ್ದರು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು:ರಾಜ್ಯ ವಿಧಾನಸಭಾ ಸಮಿತಿಯಿಂದ ವಿದೇಶಗಳಲ್ಲಿ ಕಾನೂನು ಅಧ್ಯಯನಕ್ಕಾಗಿ ಆಯ್ಕೆಯಾಗಿ, ಕೊನೆಗಳಿಗೆಯಲ್ಲಿ ಪ್ರವಾಸ ರದ್ದುಗೊಳಿಸಿದ್ದರಿಂದ ಉಂಟಾದ 3.89 ಲಕ್ಷ ರೂಪಾಯಿ ನಷ್ಟದ ಹಣವನ್ನು ಮರುಪಾವತಿ ಮಾಡುವಂತೆ ವಿಧಾನಸಭಾ ಸಚಿವಾಲಯ ಹೆಚ್.ಡಿ.ಕೋಟೆ ಕ್ಷೇತ್ರದ ಮಾಜಿ ಶಾಸಕ ಚಿಕ್ಕಣ್ಣ ವಿರುದ್ಧ ಹೊರಡಿಸಿದ್ದ ಆದೇಶ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ.

ವಿಧಾನಸಭಾ ಕಾರ್ಯದರ್ಶಿಯ ಆದೇಶ ರದ್ದು ಕೋರಿ ಚಿಕ್ಕಣ್ಣ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ.ಆರ್.ನಟರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿತು. ಅಧ್ಯಯನ ಪ್ರವಾಸ 2009ರ ಆ.23 ರಂದು ನಿಗದಿಯಾಗಿತ್ತು. ಆ ದಿನಕ್ಕೆ ತೀರಾ ಹತ್ತಿರದಲ್ಲಿ ಅಂದರೆ 5 ದಿನಗಳ ಮುನ್ನ ಪ್ರವಾಸ ರದ್ದುಗೊಳಿಸಲು ಮನವಿ ಸಲ್ಲಿಸಿದ್ದರು. ಪ್ರವಾಸ ಆಯೋಜಕರು ಮೊದಲೇ ವಿಮಾನ ಪ್ರಯಾಣ, ವಸತಿ ಮತ್ತಿತರ ವ್ಯವಸ್ಥೆಗಾಗಿ ಖರ್ಚು ಮಾಡಿದ್ದು, ಅದನ್ನು ಶಾಸಕರು ಮರುಪಾವತಿಸಲಿಲ್ಲ. ಅರ್ಜಿದಾರರು ಗಂಭೀರ ಕಾರಣದಿಂದ ಪ್ರವಾಸ ಮಾಡಲಿಲ್ಲ ಎಂದು ಈಗ ಹೇಳುತ್ತಿರುವುದನ್ನು ಒಪ್ಪಲಾಗದು. ಸಚಿವಾಲಯದ ಆದೇಶದಂತೆ 3,89,800 ರೂ. ಮರುಪಾವತಿ ಮಾಡಲು ಸಾಧ್ಯವಿಲ್ಲ ಎನ್ನಲಾಗದು ಎಂದು ನ್ಯಾಯಪೀಠ ಹೇಳಿತು.

ಪ್ರಕರಣದ ಎಲ್ಲ ಅಂಶಗಳು ಸ್ಪಷ್ಟವಾಗಿವೆ. ಹಾಗಾಗಿ ಸ್ಪೀಕರ್ ಚಿಕ್ಕಣ್ಣ ಅವರ ಭತ್ಯೆ ಮತ್ತಿತರವುಗಳಿಂದ ಆಗಿರುವ ನಷ್ಟವನ್ನು ಕಡಿತಗೊಳಿಸುವಂತೆ ಮಾಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗದು. ಸ್ವಾಭಾವಿಕ ನ್ಯಾಯದ ತತ್ವದಂತೆ 3,89,800 ರೂ. ಮರುಪಾವತಿ ಮಾಡಲೇಬೇಕಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:2009ರಲ್ಲಿ ವಿದೇಶದಲ್ಲಿ ಕಾನೂನು ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸುವ ಸಮಿತಿಗೆ ಶಾಸಕ ಚಿಕ್ಕಣ್ಣ ಸದಸ್ಯರಾಗಿ ನೇಮಕಗೊಂಡಿದ್ದರು. ಸಮಿತಿಯು ಅಧ್ಯಯನಕ್ಕಾಗಿ 2009ರ ಆ.23 ರಿಂದ ಸೆ.10 ರವರೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹಾಂಕಾಂಗ್ ಮತ್ತು ಬ್ಯಾಂಕಾಕ್ ಪ್ರವಾಸ ಆಯೋಜಿಸಿತ್ತು. ರಾಜ್ಯ ಸರ್ಕಾರ ಸಮಿತಿಯ ಸದಸ್ಯರ ಪ್ರವಾಸದ ಖರ್ಚು ವೆಚ್ಚವನ್ನು ಭರಿಸುವುದಾಗಿ ಒಪ್ಪಿ, ಚಿಕ್ಕಣ್ಣ ಪರವಾಗಿ ಪ್ರವಾಸ ಆಯೋಜಕ ಕಾಕ್ಸ್ ಆ್ಯಂಡ್ ಕಿಂಗ್ಸ್‌ಗೆ 3,89,800ರೂ. ಪಾವತಿ ಮಾಡಿತ್ತು.

ಅದರಂತೆ ಚಿಕ್ಕಣ್ಣ 2009ರ ಆ.23ರಂದು ಆಸ್ಟ್ರೇಲಿಯಾಕ್ಕೆ ತೆರಳಬೇಕಿತ್ತು. ಆದರೆ ಅದಕ್ಕೂ ಐದು ದಿನ ಮುಂಚೆ ತಮಗೆ ಅನಾರೋಗ್ಯದಿಂದ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ. ಪ್ರವಾಸ ಆಯೋಜಕ ಸಂಸ್ಥೆಗೆ ನೀಡಿರುವ 4.15 ಲಕ್ಷ ರೂ.ಗಳನ್ನು ವಾಪಸ್ ಪಡೆದುಕೊಳ್ಳುವಂತೆ ಅರ್ಜಿದಾರರು ಸ್ಪೀಕರ್​​ಗೆ ತಿಳಿಸಿದ್ದರು. ಪ್ರವಾಸ ಆಯೋಜಕ ಸಂಸ್ಥೆ, ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಿರುವುದರಿಂದ ವೆಚ್ಚದ ಶೇ.20ರಷ್ಟು ಮಾತ್ರ ಮರುಪಾವತಿ ಪಡೆಯಲು ಅರ್ಹರು ಎಂದು ಹೇಳಿತ್ತು. ವಿಧಾನಸಭೆಯ ಸ್ಪೀಕರ್, ಚಿಕ್ಕಣ್ಣ ಪ್ರವಾಸವನ್ನು ಕೊನೆ ಗಳಿಗೆಯಲ್ಲಿ ರದ್ದುಗೊಳಿಸಿರುವುದರಿಂದ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲು 3,89,800 ರೂ.ಗಳ ಮರು ಪಾವತಿಗೆ ಚಿಕ್ಕಣ್ಣ ಅವರಿಗೆ ಸೂಚನೆ ನೀಡಿತ್ತು. ಅದನ್ನು ಪ್ರಶ್ನಿಸಿ ಚಿಕ್ಕಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ:ಕ್ರೆಡಿಟ್​ ಕಾರ್ಡ್ ಹಣ ಪಾವತಿ ಬಳಿಕವೂ ಇನ್ನೂ ಬಾಕಿಯಿದೆ ಎಂದ ಬ್ಯಾಂಕ್​ಗೆ 5 ಸಾವಿರ ದಂಡ ವಿಧಿಸಿದ ಕೋರ್ಟ್

ABOUT THE AUTHOR

...view details