ಬೆಂಗಳೂರು: ಕಳ್ಳತನ ಪ್ರಕರಣಗಳ ತನಿಖೆ ವೇಳೆ ಚಿನ್ನಾಭರಣ ಮಳಿಗೆಗಳನ್ನು ಶೋಧಿಸುವಾಗ ಹಾಗೂ ಆರೋಪಿಗಳು ಮಾರಾಟ ಮಾಡಿದ ಚಿನ್ನ-ಬೆಳ್ಳಿ ಆಭರಣ ಹಾಗೂ ವಸ್ತುಗಳನ್ನು ವ್ಯಾಪಾರಿಗಳಿಂದ ವಶಕ್ಕೆ ತೆಗೆದುಕೊಳ್ಳುವಾಗ ರಾಜ್ಯ ಪೊಲೀಸ್ ಮಹಾನಿರ್ದೇಶಕರು ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಚಿನ್ನ-ಬೆಳ್ಳಿ ಆಭರಣಗಳ ತಯಾರಕರು ಹಾಗೂ ವ್ಯಾಪಾರಸ್ಥರ ಮೇಲೆ ಪೊಲೀಸರು ಅನಗತ್ಯವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಿ ಜ್ಯೂವೆಲರ್ರ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಚಿನ್ನ-ಬೆಳ್ಳಿ ಒಡವೆ ಹಾಗೂ ವಸ್ತುಗಳ ಕಳ್ಳತನ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ತಯಾರಕರು ಮತ್ತು ವ್ಯಾಪಾರಿಗಳು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು 2008ರ ಫೆಬ್ರವರಿ 19ರಂದು ಸುತ್ತೋಲೆ ಹೊರಡಿಸಿದ್ದಾರೆ. ಹಾಗೆಯೇ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು 2019ರ ಮಾರ್ಚ್ 6ರಂದು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಅವುಗಳನ್ನು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಪೀಠ ಆದೇಶಿಸಿದೆ.
ಅಲ್ಲದೆ, ಕಳ್ಳತನ ಪ್ರಕರಣಗಳ ತನಿಖೆ ವೇಳೆ ಪೊಲೀಸರು ಆಭರಣ ತಯಾರಕರಿಂದ ಹಾಗೂ ವ್ಯಾಪಾರಿಗಳಿಂದ ಒಡೆವೆಗಳನ್ನು ಬಲವಂತವಾಗಿ ವಶಕ್ಕೆ ಪಡೆದರೆ, ಅವುಗಳನ್ನು ಗೌಪ್ಯವಾಗಿಟ್ಟರೆ ಅಥವಾ ಸ್ವಂತಕ್ಕೆ ಬಳಸಿದ್ದು ಕಂಡುಬಂದರೆ ಅಥವಾ ದೂರು ದಾಖಲಾದರೆ ಪ್ರತ್ಯೇಕವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ನಡೆಸಬೇಕು. ಆ ಕುರಿತ ದೂರುಗಳನ್ನು ಆರು ವಾರದೊಳಗೆ ಕಾನೂನು ರೀತಿ ಇತ್ಯರ್ಥಪಡಿಸಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರ ಪರ ವಾದ ಮಂಡಿಸಿದ್ದ ವಕೀಲ ಸಂಕೇತ್ ಏಣಗಿ ಅವರು, ಪೊಲೀಸರು ಕಳ್ಳತನ ಪ್ರಕರಣಗಳ ತನಿಖೆ ವೇಳೆ ಚಿನ್ನ-ಬೆಳ್ಳಿ ಒಡವೆ-ವಸ್ತುಗಳ ತಯಾರಕರು ಮತ್ತು ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ದೂರಿನಲ್ಲಿ ದಾಖಲಿಸಿರುವ ಪ್ರಮಾಣಕ್ಕಿಂತ ಹೆಚ್ಚು ಒಡವೆ ಜಪ್ತಿ ಮಾಡುತ್ತಿದ್ದಾರೆ. ವಶಕ್ಕೆ ಪಡೆದ ಬಗ್ಗೆ ಯಾವುದೇ ದಾಖಲೆ ನೀಡುವುದಿಲ್ಲ. ಸ್ಥಳ ಪರಿಶೀಲನಾ ವರದಿಯಲ್ಲಿಯೂ ಮಾಹಿತಿ ದಾಖಲಿಸುವುದಿಲ್ಲ. ಇನ್ನೂ ಅನೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಒಡವೆಗಳನ್ನು ಪೊಲೀಸರೇ ಸ್ವಂತಕ್ಕೆ ಉಪಯೋಗಿಸಿದ್ದಾರೆ. ಈ ಕುರಿತು ಹಲವು ದೂರುಗಳು ಅರ್ಜಿದಾರ ಸಂಘಕ್ಕೆ ಬಂದಿವೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ತಂದೆಯನ್ನೇ ಮನೆಯಿಂದ ಹೊರಗಟ್ಟಿ ಕ್ರೌರ್ಯ ಮೆರೆದ ಮಗ ಅರೆಸ್ಟ್