ಕರ್ನಾಟಕ

karnataka

By

Published : Sep 25, 2019, 8:09 PM IST

ETV Bharat / state

ಆನೆಗಳ ಸಾವಿನ ಪ್ರಕರಣ.. ಅಕ್ಟೋಬರ್ ಅಂತ್ಯದೊಳಗೆ ವರದಿ ಸಲ್ಲಿಕೆಗೆ ಹೈಕೋರ್ಟ್‌ ಆದೇಶ..

ನ್ಯಾಯವಾದಿ ಎನ್ ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠವು ಆನೆ ಶಿಬಿರಗಳ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಬೇರೆ ಬೇರೆ ಕಾರಣ ಹೇಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ವಿನಾಕಾರಣ ಕಾಲಹರಣ ಮಾಡದೆ ಅಕ್ಟೋಬರ್ 30ರೊಳಗೆ ಅಧ್ಯಯನ ನಡೆಸಿ ವಿವರಣೆ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್

ಬೆಂಗಳೂರು: ರಾಜ್ಯದ ಆನೆಗಳ ಶಿಬಿರಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಅಕ್ಟೋಬರ್ ಅಂತ್ಯದೊಳಗೆ ಯಾವುದೇ ಕಾರಣಗಳನ್ನು ನೀಡದೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ನ್ಯಾಯವಾದಿ ಎನ್.ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠ,ಆನೆ ಶಿಬಿರಗಳ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಬೇರೆಬೇರೆ ಕಾರಣ ಹೇಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿದಾರರು ರಾಜ್ಯದ ಆನೆ ಶಿಬಿರದಲ್ಲಿ ಆನೆಗಳ ಸಾವನ್ನ ತಡೆಗಟ್ಟಲು ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದ್ದು, ಈ ಸಮಿತಿಯಲ್ಲಿ ಇಬ್ಬರು ತಜ್ಞರು ಅಧ್ಯಯನ ನಡೆಸಲು ನಿರಾಕರಿಸಿದ್ದು, ಈಗ ಅವರನ್ನ ಬದಲಾವಣೆ ಮಾಡಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ತಜ್ಞರ ಸಮಿತಿಯಲ್ಲಿ ಪ್ರೊ.ಆರ್ ಸುಕುಮಾರ್, ಥಾಮಸ್ ಮ್ಯಾಥ್ಯೂ, ಸುರೇಂದ್ರ ವರ್ಮ ಮತ್ತು ಕೆ ಎಂ ಚಿನ್ನಪ್ಪ ಇವರುಗಳು ಇದ್ದಾರೆ. ಆದರೆ, ಪ್ರೊ. ಆರ್. ಸುಕುಮಾರ್ ಹಾಗೂ ಥಾಮಸ್ ಮ್ಯಾಥ್ಯೂ ವೈಯಕ್ತಿಕ ಕಾರಣಗಳಿಂದಾಗಿ ತಮ್ಮನ್ನ ಬದಲಾವಣೆ ಮಾಡಬೇಕೆಂದು ಕೋರಿದ್ದಾರೆ. ಈ ಹಿನ್ನೆಲೆ ಇವರ ಬದಲಾಗಿ ಡಾ. ಕಲೈವಣ್ಣನ್ ಹಾಗೂ ಡಾ. ಅಶ್ರಫ್‌ ಅವರನ್ನು ನೇಮಕ ಮಾಡಲಾಗಿದೆ ಎಂದರು. ಈ ವೇಳೆ ಸರ್ಕಾರಿ ಪರ ವಕೀಲರು‌ ಆನೆಗಳು ದಸರಾಕ್ಕೆ ಹೋದರೆ ಶಿಬಿರಕ್ಕೆ ಹೋಗಿ ಅಧ್ಯಯನ ನಡೆಸಲು ಸಾಧ್ಯವಿಲ್ಲವೆಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ವಿನಾಕಾರಣ ಕಾಲಹರಣ ಮಾಡುವ ವಿಚಾರ ಇದಲ್ಲ. ಅಕ್ಟೋಬರ್ 30ರೊಳಗೆ ಅಧ್ಯಯನ ನಡೆಸಿ ವಿವರಣೆ ನೀಡಬೇಕು. ಇಲ್ಲಸಲ್ಲದ ಕಾರಣ ನೀಡಬೇಡಿ ಎಂದು ಸರ್ಕಾರಕ್ಕೆ ಆದೇಶಿಸಿ ನ.5ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.

ಪ್ರಕರಣದ ಹಿನ್ನೆಲೆ:ರಾಜ್ಯದ ಎಂಟು ಆನೆ ಶಿಬಿರಗಳಲ್ಲಿನ ಆನೆಗಳ ಸರಣಿ ಸಾವು ಪ್ರಕರಣದ ಸಮಗ್ರ ಅಧ್ಯಯನಕ್ಕೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ಕೋರಿ ವಕೀಲ ಎನ್ ಪಿ ಅಮೃತೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಹೀಗಾಗಿ ಸರ್ಕಾರ ತಜ್ಞರ ಸಮೀತಿ ನೇಮಕ ಮಾಡುವಂತೆ ಸೂಚಿಸಿ ಅಲ್ಲಿನ ಸ್ಥಿತಿಗತಿ, ಸ್ವಚ್ಛತೆ-ನೈರ್ಮಲ್ಯ, ಆನೆಗಳ ಆರೋಗ್ಯ, ಅವುಗಳಿಗೆ ಒದಗಿಸುತ್ತಿರುವ ಆಹಾರ ಹಾಗೂ ವೈದ್ಯಕೀಯ ಸೌಕರ್ಯ, ಆನೆಗಳ ಸರಣಿ ಸಾವಿಗೆ ಕಾರಣಗಳ ಕುರಿತ ಅಧ್ಯಯನ ನಡೆಸಬೇಕು. ಪ್ರಕರಣದಲ್ಲಿ ಸರ್ಕಾರ ಏನೆಲ್ಲಾ ಮಾಡಬೇಕಿದೆ ಎಂಬುದರ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಸರ್ಕಾರವು ಆನೆ ಶಿಬಿರಗಳಿಗೆ ಭೇಟಿ ನೀಡಲು ಸಮಿತಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಾಗೆಯೇ, ಆನೆ ಶಿಬಿರಗಳಿಗೆ ತಲಾ ಒಬ್ಬ ಪಶು ವೈದ್ಯನನ್ನು ನೇಮಿಸಬೇಕು ಎಂದು ಕಳೆದ ವಿಚಾರಣೆ ವೇಳೆ ಸರ್ಕಾರಕ್ಕೆ ನಿರ್ದೇಶಿಸಿತ್ತು.

ABOUT THE AUTHOR

...view details