ಕರ್ನಾಟಕ

karnataka

ತಂದೆಯ ಸಾಲಕ್ಕೆ ಖಾತ್ರಿಯಾಗಿ ಮಗ ಚೆಕ್​ ನೀಡಿದ್ದಲ್ಲಿ ಮಗನೇ ಹಣ ಹಿಂದಿರುಗಿಸಬೇಕು : ಹೈಕೋರ್ಟ್

By

Published : Jan 16, 2023, 8:40 PM IST

ತಂದೆ ಮಾಡಿದ್ದ ಸಾಲದ ಹಣಕ್ಕೆ ಭದ್ರತೆಯಾಗಿ ಆತನ ಮಗ ಚೆಕ್ ನೀಡಿದರೆ, ಅವನೂ ಸಹ ಸಾಲಕ್ಕೆ ಜವಾಬ್ದಾರ ಆಗುತ್ತಾನೆ. ಅಲ್ಲದೆ, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯಿದೆಯಂತೆ ಮರುಪಾವತಿ ಮಾಡಲೇಬೇಕು ಎಂದು ಹೈಕೋರ್ಟ್ ಹೇಳಿದೆ.

high-court-order-on-loan-repayment-case
ಹೈಕೋರ್ಟ್

ಬೆಂಗಳೂರು : ತಂದೆಯ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್ ನೀಡಿದರೆ, ಆತ ಕೂಡ ಸಾಲಕ್ಕೆ ಜವಾಬ್ದಾರ ಆಗಲಿದ್ದು, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯಿದೆಯ ಪ್ರಕಾರ ಮಗ ಮರುಪಾವತಿ ಮಾಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ. ದಾವಣಗೆರೆಯ ಪ್ರಸಾದ್ ರಾಯ್ಕರ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

ಅಲ್ಲದೇ, ಪ್ರಕರಣದಲ್ಲಿ ಆರೋಪಿ, ಮೃತ ವ್ಯಕ್ತಿಯ ಮಗನಾಗಿದ್ದಾರೆ. ಮೃತ ತಂದೆಯು ದೂರುದಾರರಿಂದ ಸಾಲ ಪಡೆದಿದ್ದಾರೆ ಮತ್ತು ಮರುಪಾವತಿಸಲು ಒಪ್ಪಿ ಅದಕ್ಕೆ ಖಾತ್ರಿಯನ್ನೂ ನೀಡಿದ್ದಾರೆ. ಜೊತೆಗೆ, ಮಗ ತಂದೆಯ ಕಾನೂನುಬದ್ಧ ವಾರಸುದಾರರಾಗಿದ್ದು, ಪುತ್ರ ಸಾಲದ ಹಣವನ್ನು ಮರುಪಾವತಿ ಮಾಡಲೇಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ನಿಯಮದಂತೆ ಸಾಲಕ್ಕೆ ಖಾತ್ರಿ ನೀಡಿರುವ (ಗ್ಯಾರೆಂಟರ್​ ಹೇಗೆ ಬಾಧ್ಯಸ್ಥರಾಗುತ್ತಾರೋ ಅದೇ ರೀತಿಯಲ್ಲಿ ಚೆಕ್ ನೀಡಿದ ಪುತ್ರನೂ ಬಾಧ್ಯಸ್ಥನಾಗುತ್ತಾನೆ. ಹೀಗಾಗಿ ಹಣ ಮರುಪಾವತಿ ಮಾಡಬೇಕು ಎಂದು ದಾವಣಗೆರೆಯ ಜೆಎಂಎಫ್‌ಸಿ ನ್ಯಾಯಾಲಯ ನೀಡಿರುವ ಆದೇಶವನ್ನು ನ್ಯಾಯಪೀಠ​ ಎತ್ತಿ ಹಿಡಿದಿದೆ.

ಇದನ್ನೂ ಓದಿ:ನಮ್ಮದು ಈಸ್ಟ್​ ಇಂಡಿಯಾ ಕಂಪನಿ ಆಡಳಿತ ಅಲ್ಲ: ಕಲ್ಯಾಣ ರಾಜ್ಯ ಎಂದಿರುವ ಹೈಕೋರ್ಟ್

ಆರೋಪಿಯು ತನ್ನ ತಂದೆಯ ಸಾಲವನ್ನು ಮರುಪಾವತಿಸುವುದಾಗಿ ದೂರುದಾರರ ಬಳಿ ಒಪ್ಪಿಕೊಂಡು ಆನಂತರ 10 ಸಾವಿರ ರೂ. ಮರುಪಾವತಿಯನ್ನೂ ಮಾಡಿದ್ದಾರೆ. ಬಳಿಕ ತನ್ನ ತಂದೆಯ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿದರೆ ಅದನ್ನು ಒಪ್ಪಲಾಗದು ಎಂದು ನ್ಯಾಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಆರೋಪಿ ದಿನೇಶ್ ತಂದೆ ಭರಮಪ್ಪ ಅವರು ತಮ್ಮ ಕುಟುಂಬದ ಅಗತ್ಯತೆಗಳು ಮತ್ತು ವೈಯಕ್ತಿಕ ಖರ್ಚಿಗಾಗಿ ಪ್ರಸಾದ್ ಅವರಿಂದ 2003ರ ಮಾರ್ಚ್​ 7ರಂದು 2.6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಶೇಕಡಾ 2ರ ಬಡ್ಡಿ ಸೇರಿಸಿ ಹಣ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದ ದೂರುದಾರರ ಪರವಾಗಿ ಪ್ರಾಮಿಸರಿ ನೋಟ್ ಬರೆದು ಕೊಟ್ಟಿದ್ದರು. ಆದರೆ, 2005ರಲ್ಲಿ ಭರಮಪ್ಪ ಮೃತಪಟ್ಟಿದ್ದರು. ಆ ವೇಳೆಗೆ ಸಾಲದ ಮೊತ್ತವು ಬಡ್ಡಿ ಸೇರಿ 4.5 ಲಕ್ಷ ರೂ. ಆಗಿತ್ತು. ಆನಂತರ ದಿನೇಶ್ ದೂರುದಾರರಿಗೆ 10 ಸಾವಿರ ರೂಪಾಯಿ ಮರುಪಾವತಿ ಮಾಡಿ, ಉಳಿದ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಹೇಳಿ ತಲಾ 2.25 ಲಕ್ಷ ರೂ.ಗಳ ಚೆಕ್‌ಗಳನ್ನು ನೀಡಿದ್ದರು. ಆದರೆ ಎರಡೂ ಚೆಕ್​​ಗಳು ಬೌನ್ಸ್​ ಆಗಿದ್ದವು.

ಇದನ್ನೂ ಓದಿ:ಮುಂದಿನ ಜೀವನ ದೇವರೇ ಗತಿ.. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಪುರುಷೋತ್ತಮ ಪೂಜಾರಿ ಅಳಲು

ಇದನ್ನು ಪ್ರಶ್ನಿಸಿ ಪ್ರಸಾದ್​​​ ಅವರು ನೆಗೋಷಿಯಬಲ್ ಇನ್ಸಟ್ರುಮೆಂಟ್​​ ಕಾಯಿದೆ ಪ್ರಕಾರ ದೂರು ಸಲ್ಲಿಸಿದ್ದರು. ಆ ಕುರಿತು ವಿಚಾರಣೆ ನಡೆಸಿದ್ದ ದಾವಣೆಗೆರೆ ಜೆಎಂಎಫ್‌ಸಿ ನ್ಯಾಯಾಲಯ, ದಿನೇಶ್‌ಗೆ ಸಾಲದ ಹಣ ಮರುಪಾವತಿ ಮಾಡುವಂತೆ ಆದೇಶಿಸಿತ್ತು. ಆದರೆ, ಸೆಷನ್ಸ್​ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿ ಹಣ ಮರುಪಾವತಿಸುವ ಅಗತ್ವ ಇಲ್ಲವೆಂದು ತೀರ್ಪು ನೀಡಿತ್ತು. ಹೀಗಾಗಿ ಪ್ರಸಾದ್ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ:'ವೈವಾಹಿಕ ಅತ್ಯಾಚಾರ': ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್‌

ABOUT THE AUTHOR

...view details