ಕರ್ನಾಟಕ

karnataka

ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತೆರವಿಗೆ ಹೈಕೋರ್ಟ್ ಆದೇಶ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸ್ಥಿತಿಗತಿ ಕುರಿತಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮ ಮತ್ತು ನ್ಯಾ.ಸಚಿನ್ ಶಂಕರ ಮಗದಂ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

By

Published : Sep 6, 2021, 10:43 PM IST

Published : Sep 6, 2021, 10:43 PM IST

High Court order for clearing of electrical wires which on school
ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತೆರವಿಗೆ ಹೈ ಕೋರ್ಟ್ ಆದೇಶ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ವೇಳೆ ತುಮಕೂರಿನ ಕರೀಕೆರೆ ಗ್ರಾಮದಲ್ಲಿ ಧ್ವಜಸ್ತಂಭ ಅಳವಡಿಸುವಾಗ ವಿದ್ಯುತ್ ಅವಘಡದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಹೈಕೋರ್ಟ್, ರಾಜ್ಯಾದ್ಯಂತ ಶಾಲೆಗಳ ಮೇಲೆ ಹಾದು ಹೋಗುವ ಎಲ್ಲಾ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಆದೇಶಿಸಿದೆ.

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಪಾಲಕರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಅದೇಶ ನೀಡಿದೆ. 2019ರ ಆ.18 ರಂದು ಇಂತಹದೇ ಘಟನೆ ನಡೆದಾಗ ಪ್ರತಿ ವಿದ್ಯಾರ್ಥಿಯ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರವನ್ನು ಸರ್ಕಾರ ನೀಡಿತ್ತು. ಇದೀಗ ಕೇವಲ 1 ಲಕ್ಷ ರೂ ನೀಡಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿ ಈ ಪ್ರಕರಣದಲ್ಲೂ ಸಮಾನ ಪರಿಹಾರ ಮೊತ್ತ 10 ಲಕ್ಷ ರೂ.ಗಳನ್ನು ಮೃತ ಬಾಲಕನ ಕುಟುಂಬಕ್ಕೆ 30 ದಿನಗಳಲ್ಲಿ ನೀಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಅಲ್ಲದೆ, ಘಟನೆಯಲ್ಲಿ ಗಾಯಾಳುಗಳಿಗೂ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಸೂಚಿಸಿ, ಈ ಸಂಬಂಧ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸ್ಥಿತಿಗತಿ ಕುರಿತಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮ ಮತ್ತು ನ್ಯಾ. ಸಚಿನ್ ಶಂಕರ ಮಗದಂ ವಿಭಾಗೀಯಪೀಠ ಇಂದು ವಿಚಾರಣೆ ನಡೆಸಿತು.

ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿ ಸಾವು: ಕುಟುಂಬಸ್ಥರಿಗೆ ಪರಿಹಾರ ನೀಡಿ, ಸಾಂತ್ವನ ಹೇಳಿದ ಸಚಿವ ನಾಗೇಶ್

ವಿಚಾರಣೆಯಲ್ಲಿ ತುಮಕೂರು ಘಟನೆ ಬಗ್ಗೆ ಜಿಲ್ಲಾಕಾರಿ ಸಲ್ಲಿಸಿದ ವಾಸ್ತವಾಂಶ ವರದಿಯನ್ನು ಗಮನಿಸಿ, ಅದರಲ್ಲಿ ಮಕ್ಕಳೇ ಉತ್ಸಾಹದಿಂದ ತಾವೇ ಧ್ವಜವನ್ನು ಹಾರಿಸಲು ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ. ಆದರೆ, ಇದನ್ನು ಗಮನಿಸಿದರೆ ಡಿಸಿ, ಶಾಲಾ ಅಧಿಕಾರಿಗಳ ಜೊತೆ ಸೇರಿ ಘಟನೆಗೆ ಬೇರೆ ಬಣ್ಣ ನೀಡಲು ಯತ್ನಿಸಿದಂತಿದೆ ಎಂದು ಕಟುವಾಗಿ ಪ್ರಶ್ನಿಸಿತು. ಅಪ್ರಾಪ್ತ ಮಕ್ಕಳು ಪ್ರಾಂಶುಪಾಲರು ಅಥವಾ ಶಿಕ್ಷಕಕರ ನೇರ ನಿರ್ದೇಶನವಿಲ್ಲದೆ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿ, ಜಿಲ್ಲಾಧಿಕಾರಿ ವರದಿಯಲ್ಲಿ ಶಾಲೆಯ ಮೇಲೆ ಹಾದು ಹೋದ 11 ಕೆ.ವಿ. ವಿದ್ಯುತ್ ಮಾರ್ಗವನ್ನು ಭಾಗಶಃ ತೆರವು ಮಾಡಲಾಗಿದೆ. ಹಾಗೆಂದರೇನು ಎಂಬುದು ಅರ್ಥವಾಗುತ್ತಿಲ್ಲ. 11 ಕೆ.ಬಿ. ವಿದ್ಯುತ್ ಮಾರ್ಗವನ್ನು 30 ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿತು.

ಇದನ್ನೂ ಓದಿ:ಧ್ವಜ ಸ್ತಂಭ ನೆಡುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು, ಶಿಕ್ಷಣ ಸಚಿವರ ಸಂತಾಪ

ಕೆಪಿಟಿಸಿಎಲ್ ಪರ ವಕೀಲ ಶ್ರೀರಂಗ, 11 ಕೆ.ವಿ ವಿದ್ಯುತ್ ಮಾರ್ಗಗಳ ನಿರ್ವಹಣೆ ಹೊಣೆ ವಿದ್ಯುತ್ ಸರಬರಾಜು ಕಂಪನಿಗೆಳಿಗೆ ಬರುತ್ತದೆ. ಇದು ನೇರ ಕೆಪಿಟಿಸಿಎಲ್ ವ್ತಾಪ್ತಿಗೆ ಬರುವುದಿಲ್ಲ. ಎಸ್ಕಾಂಗಳಿಗೆ ನೋಟಿಸ್ ನೀಡಿದರೆ ಅವುಗಳ ಮೂಲಕ ಕೋರ್ಟ್ ಆದೇಶ ಪಾಲನೆ ಮಾಡಲಾಗುವುದು ಎಂದು ವಿವರಿಸಿದರು. ಆಗ ನ್ಯಾಯಪೀಠ ಎಸ್ಕಾಂಗಳಿಗೂ ನೋಟಿಸ್ ಜಾರಿಗೊಳಿಸಿತು.

ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ವಕೀಲೆ ಬಿ.ವಿ.ವಿದ್ಯುಲ್ಲತ ವಾದ ಮಂಡಿಸಿ ಹಿಂದೆ ಕಾನೂನು ಸೇವಾ ಪ್ರಾಧಿಕಾರ ಸಮೀಕ್ಷೆಯಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಶೌಚಾಲಯಗಳ ಕೊರತೆ ಇದೆ, ವಿದ್ಯಾರ್ಥಿಗಳು ಬಯಲಿನಲ್ಲೇ ಸ್ನಾನ ಮಾಡುತ್ತಾರೆ. ಜೊತೆಗೆ ಕುಡಿಯುವ ನೀರು, ಆಹಾರವಿಲ್ಲ ಎಂಬುದು ಸೇರಿದಂತೆ ಹಲವು ನ್ಯೂನತೆಗಳನ್ನು ಪಟ್ಟಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಸಮಗ್ರ ಸರ್ವೇ ನಡೆಸಿ ವರದಿ ಸಲ್ಲಿಕೆಗೆ ಸರಕಾರಕ್ಕೆ ಆದೇಶ ನೀಡಿತ್ತು. ಆದರೆ ಸರಕಾರ ಈವರೆಗೂ ಸಮೀಕ್ಷಾ ವರದಿಯನ್ನು ಸಲ್ಲಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ABOUT THE AUTHOR

...view details