ಕರ್ನಾಟಕ

karnataka

ವಸತಿ ರಹಿತರಿಗೆ 1017 ಕೋಟಿ ರೂ. ಮೊತ್ತದ ಯೋಜನೆ ಪ್ರಶ್ನಿಸಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

By ETV Bharat Karnataka Team

Published : Nov 17, 2023, 7:25 PM IST

ವಸತಿ ರಹಿತರಿಗೆ ಮನೆ ನಿರ್ಮಿಸುವ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಹಾಸನ ಜಿಲ್ಲೆಯ ಭುವನಹಳ್ಳಿ, ಕೆಂಚನಹಳ್ಳಿ, ಸಮುದ್ರದಳ್ಳಿ ಮತ್ತಿತರ ಗ್ರಾಮಗಳಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸುವ 1,017 ಕೋಟಿ ರೂ. ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಅಡುವಳ್ಳಿಯ ಅಭಿಷೇಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ, ಅರ್ಜಿದಾರರು ನಿಯಮವನ್ನು ಪಾಲಿಸಿಲ್ಲ ಜತೆಗೆ, ತಮ್ಮ ಬಗ್ಗೆೆ ವಿವರ ನೀಡಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 2018ರಲ್ಲಿ ನಿಯಮಗಳನ್ನು ರೂಪಿಸಿದೆ. ಅವು 2019ರಿಂದ ಜಾರಿಗೆ ಬಂದಿವೆ. ಅದರಂತೆ ಅರ್ಜಿದಾರರು ತಮ್ಮ ಹೆಸರು, ಇಮೇಲ್ ವಿಳಾಸ, ವೃತ್ತಿ, ಹಿನ್ನೆಲೆ, ಆದಾಯದ ಮೂಲ ಸೇರಿದಂತೆ ಸಮಗ್ರ ವಿವರಗಳುಳ್ಳ ಪ್ರಮಾಣಪತ್ರವನ್ನು ಸಲ್ಲಿಸಬೇಕಿತ್ತು. ಆದರೆ, ಅರ್ಜಿಯಲ್ಲಿ ಹೆಸರು ಬಿಟ್ಟರೆ ಬೇರೆ ಯಾವುದೇ ವಿವರಗಳನ್ನು ನೀಡಿಲ್ಲ ಎಂದು ತಿಳಿಸಿ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಅಲ್ಲದೇ, ಅರ್ಜಿದಾರರು ಯಾವ ಹಿನ್ನೆಲೆಯನ್ನೂ ವಿವರಗಳನ್ನು ನೀಡದ ಕಾರಣ ಅವರು ಯಾವ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ, ಅವರ ಹಿತಾಸಕ್ತಿ ಏನು ಎಂಬ ಮಾಹಿತಿ ದೊರಕಿಲ್ಲ. ಜತೆಗೆ ನಿಯಮದ ಪ್ರಕಾರ ಈ ರೀತಿಯಲ್ಲಿ ಅರ್ಜಿ ಸಲ್ಲಿಸುವ ಮುನ್ನ, ಅರ್ಜಿದಾರರು ಯಾವ ವಿಷಯದ ಬಗ್ಗೆೆ ಅರ್ಜಿ ಸಲ್ಲಿಸಲು ಬಯಸುತ್ತಾರೋ ಆ ವಿಷಯದ ಬಗ್ಗೆೆ ಸಂಬಂಧ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿರಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿಯನ್ನು ಪ್ರಾಸಂಗಿಕ ಧೋರಣೆಯಲ್ಲಿ ಸಲ್ಲಿಸಲಾಗಿದೆ. ಸ್ವಲ್ಪವೂ ನಿಯಮಗಳನ್ನು ಪಾಲಿಸಿಲ್ಲ. ಹಾಗಾಗಿ ಅರ್ಜಿಯಲ್ಲಿ ಯಾವುದೇ ವಿಚಾರಣಾ ಅರ್ಹ ಅಂಶಗಳಿಲ್ಲ. ಜತೆಗೆ, ನಿಯಮಗಳನ್ನು ಪಾಲನೆ ಮಾಡದ ಕಾರಣ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ಆದೇಶ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಭುವನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ವಸತಿ ರಹಿತರಿಗಾಗಿ 1070 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಅದನ್ನು ರದ್ದುಗೊಳಿಸಬೇಕು. ಆ ಸಂಬಂಧ ಕೈಗೊಂಡಿರುವ ನಿರ್ಣಯಗಳನ್ನು ಅನೂರ್ಜಿತಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಇದನ್ನೂ ಓದಿ:ಸಂಚಾರಿ ನಿಯಮ ಪಾಲಿಸದ ಚಾಲಕರಿಂದ ಅಪಘಾತ ಹೆಚ್ಚಳ: ಹೈಕೋರ್ಟ್ ಕಳವಳ

ABOUT THE AUTHOR

...view details