ಕರ್ನಾಟಕ

karnataka

ETV Bharat / state

ಕ್ರಿಮಿನಲ್ ಪ್ರಕರಣ: ದೂರುದಾರನಿಗೆ ಅಂತಿಮ ತನಿಖಾ ವರದಿಯ ಮಾಹಿತಿ ನೀಡುವುದು ಕಡ್ಡಾಯ - case against private bank

ಕ್ರಿಮಿನಲ್ ಪ್ರಕರಣಗಳ ಅಂತಿಮ ತನಿಖಾ ವರದಿ ಬಗ್ಗೆ ದೂರುದಾರನಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ.

high-court-directs-to-inform-final-report-to-complainant-in-criminal-cases
ಕ್ರಿಮಿನಲ್ ಪ್ರಕರಣಗಳಲ್ಲಿ ಅಂತಿಮ ವರದಿಯ ಮಾಹಿತಿ ದೂರುದಾರನಿಗೆ ನೀಡುವಂತೆ ಹೈಕೋರ್ಟ್ ನಿರ್ದೇಶನ

By

Published : May 4, 2023, 7:30 AM IST

ಬೆಂಗಳೂರು :ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಿ ಸಿದ್ಧಪಡಿಸಿದ ಪ್ರಕರಣದ ಅಂತಿಮ ವರದಿ ಕುರಿತು ಮಾಹಿತಿಯನ್ನು ಪ್ರಕರಣದ ಪ್ರಥಮ ವರ್ತಮಾನ ಮಾಹಿತಿದಾರನಿಗೆ (ದೂರುದಾರ) ಕಡ್ಡಾಯವಾಗಿ ನೀಡುವಂತೆ ಎಲ್ಲಾ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬಿ.ಪ್ರಶಾಂತ್ ಹೆಗ್ಡೆ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 173 (2) ಪ್ರಕಾರ ತನಿಖಾಧಿಕಾರಿಯು ತನಿಖೆ ಪೂರ್ಣಗೊಳಿಸಿ ಅದರ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸೆಕ್ಷನ್ 173 (2)(2) ಪ್ರಕಾರ ಅಂತಿಮ ವರದಿ ಸಲ್ಲಿಕೆಯ ಕುರಿತು ದೂರುದಾರನಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಈ ಕುರಿತು ಸುಪ್ರಿಂ ಕೋರ್ಟ್ ಸಹ ಆದೇಶ ಮಾಡಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ತನಿಖೆಯ ಅಂತಿಮ ವರದಿ ಸಲ್ಲಿಕೆ ಕುರಿತು ತನಿಖಾಧಿಕಾರಿ ದೂರುದಾರನಿಗೆ ಮಾಹಿತಿ ನೀಡಿದರೆ, ತನಿಖೆ ಬಗ್ಗೆ ತಿಳಿಯಲು ಮತ್ತು ಪ್ರಕರಣವನ್ನು ಅನುಸರಿಸಲು (ಫಾಲೋ ಅಪ್) ಆತನಿಗೆ ಅನುಕೂಲವಾಗುತ್ತದೆ. ಆದರೆ, ಪ್ರಕರಣದಲ್ಲಿ ಎರಡು ಖಾಸಗಿ ಬ್ಯಾಂಕ್ ಅಧಿಕಾರಿಗಳಿಂದ ಹಣ ದುರ್ಬಳಕೆ ಮತ್ತು ವಂಚನೆ ಆರೋಪ ಸಂಬಂಧ ಅರ್ಜಿದಾರ ನೀಡಿದ್ದ ದೂರಿನ ಮೇಲೆ ಸಿಐಡಿ ತನಿಖೆ ನಡೆಸಿದೆ. ಜೊತೆಗೆ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ತನಿಖೆಯ ಅಂತಿಮ ವರದಿ ಕುರಿತು ದೂರುದಾರನಿಗೆ ಮಾಹಿತಿ ನೀಡಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಅಂತಿಮವಾಗಿ 'ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ತನಿಖೆಯ ಅಂತಿಮ ವರದಿ ಬಗ್ಗೆ ಪ್ರಕರಣದ ದೂರುದಾರರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು' ಎಂಬುದಾಗಿ ನಿರ್ದೇಶಿಸುವಂತೆ ಡಿಜಿಪಿಗೆ ನ್ಯಾಯಪೀಠ ನಿರ್ದೇಶಿಸಿದೆ.

ಅಲ್ಲದೆ, ಪ್ರಕರಣದ ಆರೋಪಿಗಳು ಬ್ಯಾಂಕ್ ಉದ್ಯೋಗಿಗಳಾಗಿದ್ದಾರೆ. ಕೇವಲ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ, ಬ್ಯಾಂಕ್​ಗಳನ್ನು ಆರೋಪಿಯನ್ನಾಗಿ ಮಾಡಿಲ್ಲ. ಬ್ಯಾಂಕ್ ಮೂಲಕ ಅಧಿಕಾರಿಗಳು ಅಪರಾಧ ಎಸಗಿರುವುದರಿಂದ ಸಿಆರ್​​ಪಿಸಿ ಸೆಕ್ಷನ್ 174 (8) ಅನುಸಾರ ಪ್ರಕರಣದಲ್ಲಿ ಬ್ಯಾಂಕ್​ನ್ನು ಆರೋಪಿಯನ್ನಾಗಿ ಮಾಡಿ, ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ತನಿಖಾಧಿಕಾರಿಗೆ ವಿಚಾರಣಾ ನ್ಯಾಯಾಲಯವು ನಿರ್ದೇಶಿಸಬಹುದು. ಹಾಗೆಯೇ, ಎರಡೂ ಬ್ಯಾಂಕ್​ಗಳ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ಹಣ ದುರ್ಬಳಕೆ, ವಂಚನೆ, ಅಪರಾಧಿಕ ಒಳಸಂಚು, ಕಳ್ಳತನ, ನಂಬಿಕೆ ದ್ರೋಹ ಮತ್ತು ಅತಿಕ್ರಮ ಪ್ರವೇಶ ಸೇರಿದಂತೆ ಇನ್ನಿತರ ಕ್ರಿಮಿನಲ್ ಆರೋಪಗಳ ಸಂಬಂಧ ನಗರದ ಎರಡು ಖಾಸಗಿ ಬ್ಯಾಂಕ್​ಗಳ ವಿರುದ್ಧ ಅರ್ಜಿದಾರರು ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.

ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಕಾರಿ, ಎರಡು ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಮಾತ್ರ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಬ್ಯಾಂಕ್​ಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿ, ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲು ಮತ್ತು ತನಿಖಾ ವರದಿಯನ್ನು ತಮಗೆ ಒದಗಿಸಲು ಆದೇಶಿಸಬೇಕು ಎಂದು ಕೋರಿ ಪ್ರಶಾಂತ್ ಹೆಗ್ಡೆ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ABOUT THE AUTHOR

...view details