ಕರ್ನಾಟಕ

karnataka

ರಾಜ್ಯದಲ್ಲಿರುವ ಕೆರೆಗಳ ಜಿಲ್ಲಾವಾರು ವಿವರ ಕೇಳಿದ ಹೈಕೋರ್ಟ್

By

Published : Jan 17, 2021, 1:55 AM IST

ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸಲು ಜಿಲ್ಲಾ ಸಮಿತಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಹೈಕೋರ್ಟ್ ಆದೇಶದಂತೆ 2013ರ ಡಿ.9ರಂದು ರಚಿಸಲಾಗಿರುವ ರಾಜ್ಯ ಮಟ್ಟದ ಅಪೆಕ್ಸ್ ಕಮಿಟಿ ಈವರೆಗೆ ಎಷ್ಟು ಸಭೆಗಳನ್ನು ನಡೆಸಿದೆ, ಸಮಿತಿಗೆ ಬಂದ ದೂರುಗಳೆಷ್ಟು, ಅದಕ್ಕೆ ಸಮಿತಿ ನೀಡಿದ ಮಾರ್ಗದರ್ಶನವೇನು ಎಂಬ ವಿವರಗಳನ್ನು ಒಳಗೊಂಡಂತೆ ಸಮಿತಿಯ ಸಭೆಗಳ ನಡಾವಳಿಗಳ ವಿವರಗಳನ್ನು ಪ್ರಮಾಣಪತ್ರದ ರೂಪದಲ್ಲಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

High Court asked the report of district level lakes
ರಾಜ್ಯದಲ್ಲಿರುವ ಕೆರೆಗಳ ಜಿಲ್ಲಾವಾರು ವಿವರ ಕೇಳಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿರುವ ಒಟ್ಟು ಕೆರೆಗಳ ಜಿಲ್ಲಾವಾರು ವಿವರಗಳನ್ನು ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕುರಿತು ‘ಸಿಟಿಜನ್ ಆ್ಯಕ್ಷನ್ ಗ್ರೂಪ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಿದ ಪೀಠ, ರಾಜ್ಯದಲ್ಲಿರುವ ಎಲ್ಲಾ ಕೆರೆ-ಕಟ್ಟೆಗಳ ಸರ್ವೆ ನಡೆಸಿ ಅದರ ಭೌಗೋಳಿಕ ಗಡಿ ಗುರುತಿಸಿ ಬೇಲಿ ಹಾಕಲು 2012ರ ಏಪ್ರಿಲ್‌ನಲ್ಲಿ ನ್ಯಾಯಾಲಯ ಆದೇಶಿಸಿದೆ.

ಈ ಸರ್ವೆ ವರದಿಯ ಪ್ರತಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತೆ 2019ರ ಜೂ.18ರಂದು ನಿರ್ದೇಶನ ನೀಡಲಾಗಿತ್ತು. ಸರ್ಕಾರ ಸಲ್ಲಿಸಿರುವ ಅನುಪಾಲನಾ ವರದಿಗಳಲ್ಲಿ ಈ ಬಗ್ಗೆ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿತು.ಅಲ್ಲದೇ, ರಾಜ್ಯದಲ್ಲಿರುವ ಒಟ್ಟು ಕೆರೆಗಳೆಷ್ಟು, ಅವುಗಳ ಒಟ್ಟು ವಿಸ್ತೀರ್ಣ ಎಷ್ಟು, ಒತ್ತುವರಿಯಾಗಿರುವ ಕೆರೆಗಳು ಮತ್ತು ಅವುಗಳ ವಿಸ್ತೀರ್ಣ ಎಷ್ಟು, ಆ ಪೈಕಿ ತೆರವುಗೊಳಿಸಿದ ಕೆರೆಗಳು ಮತ್ತದರ ವಿಸ್ತೀರ್ಣದ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನೊಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿತು.

ಜಿಲ್ಲಾವಾರು ಮಾಹಿತಿ ಒದಗಿಸುವ ಕೆಲಸ ಮೊದಲು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆರಂಭವಾಗಲಿ. ಎರಡು ವಾರಗಳಲ್ಲಿ ಈ ಜಿಲ್ಲೆಗಳ ಕುರಿತ ಪ್ರಮಾಣಪತ್ರ ಸಲ್ಲಿಸಿ ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸಲು ಜಿಲ್ಲಾ ಸಮಿತಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಹೈಕೋರ್ಟ್ ಆದೇಶದಂತೆ 2013ರ ಡಿ.9ರಂದು ರಚಿಸಲಾಗಿರುವ ರಾಜ್ಯ ಮಟ್ಟದ ಅಪೆಕ್ಸ್ ಕಮಿಟಿ ಈವರೆಗೆ ಎಷ್ಟು ಸಭೆಗಳನ್ನು ನಡೆಸಿದೆ, ಸಮಿತಿಗೆ ಬಂದ ದೂರುಗಳೆಷ್ಟು, ಅದಕ್ಕೆ ಸಮಿತಿ ನೀಡಿದ ಮಾರ್ಗದರ್ಶನವೇನು ಎಂಬ ವಿವರಗಳನ್ನು ಒಳಗೊಂಡಂತೆ ಸಮಿತಿಯ ಸಭೆಗಳ ನಡಾವಳಿಗಳ ವಿವರಗಳನ್ನು ಪ್ರಮಾಣಪತ್ರದ ರೂಪದಲ್ಲಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿತು. ಜೊತೆಗೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿತು.

ABOUT THE AUTHOR

...view details