ಕರ್ನಾಟಕ

karnataka

By ETV Bharat Karnataka Team

Published : Sep 19, 2023, 7:20 PM IST

ETV Bharat / state

ಮತದಾನದಂತೆ ಸಾಮಾಜಿಕ ಜಾಲತಾಣ ಬಳಕೆಗೂ ವಯೋಮಿತಿ ನಿಗದಿಗೆ ಹೈಕೋರ್ಟ್ ಸಲಹೆ

ಸಾಮಾಜಿಕ ಜಾಲತಾಣ ಬಳಕೆಗೂ ವಯೋಮಿತಿ ನಿಗದಿಗೆ ಚಿಂತನೆ ನಡೆಸುವಂತೆ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು :ಮತದಾನಕ್ಕೆ ನಿಗದಿ ಮಾಡಿರುವಂತೆ ಸಾಮಾಜಿಕ ಜಾಲತಾಣ ಬಳಸಲು ವಯೋಮಿತಿ ನಿಗದಿ ಮಾಡಲು ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ ನೀಡಿದೆ.

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ ಕಾರ್ಪ್ (ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ವಿಜಯಕುಮಾರ್‌ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ಸಲಹೆ ನೀಡಿತು.

ಸಾಮಾಜಿಕ ಮಾಧ್ಯಮ ನಿಷೇಧಿಸುವುದು ಉತ್ತಮ. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈಗ ಶಾಲೆಗೆ ಹೋಗುವ ಮಕ್ಕಳೂ ಅದಕ್ಕೆ ದಾಸರಾಗಿದ್ದಾರೆ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು. 17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು, ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ? ಪೀಠ ಪ್ರಶ್ನಿಸಿತು.

ಇದೇ ವೇಳೆ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಕೆಲವು ಆನ್‌ಲೈನ್‌ ಗೇಮ್‌ ಆಡಲು ಕಾನೂನಿನ ಪ್ರಕಾರ ಈಗ ಆಧಾರ್‌ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಾಗಾದರೆ ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ. ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಿಮ್ಮ ಕಕ್ಷಿದಾರರು (ಎಕ್ಸ್‌ ಕಾರ್ಪ್) ಇದಕ್ಕೆ ಒಪ್ಪದಿರಬಹುದು ಎಂದಿತು.

ಇದಕ್ಕೂ ಮುನ್ನ ಪೀಠ, ಎಕ್ಸ್‌ ಕಾರ್ಪ್ ಬಳಕೆದಾರರಿಗೆ ಯಾವುದೇ ಮಾಹಿತಿ ನೀಡದೇ ಖಾತೆ ನಿರ್ಬಂಧಿಸಿದರೆ ಏನಾಗಲಿದೆ. ವಿಚಾರ ಸಾರ್ವಜನಿಕವಾಗಿದ್ದರೆ ಅದು ಜನರಿಗೆ ತಿಳಿಯುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿ, ಮಾನಹಾನಿ ದಾವೆ ಹೂಡಿದರೆ ಎಕ್ಸ್‌ ಕಾರ್ಪ್‌ಗೆ ಪರಿಹಾರವೇನು? ಇದಕ್ಕಾಗಿ ನಿಯಮದಲ್ಲಿ ನೀವು ಸಡಿಲಿಕೆ ಮಾಡಬೇಕಿದೆ. ಎಕ್ಸ್‌ ಕಾರ್ಪ್‌ಗೆ ವಿನಾಯಿತಿ ನೀಡಬೇಕು. ನಿಮ್ಮ ಎಚ್ಚರಿಕೆಗೆ ಅನುಗುಣವಾಗಿ ಖಾತೆ ನಿರ್ಬಂಧವನ್ನು ಎಕ್ಸ್‌ ಕಾರ್ಪ್‌ ಮಾಡುತ್ತಿದೆ. ನೀವು (ಕೇಂದ್ರ ಸರ್ಕಾರ) ಅವರ (ಎಕ್ಸ್‌ ಕಾರ್ಪ್) ಕೈಬಿಟ್ಟರೆ?” ಎಂದು ಪೀಠ ಹೇಳಿತು.

ಅಲ್ಲದೆ, ದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂದು ಟ್ವೀಟ್‌ ಹೇಳಿದರೆ, ಅದು ದೇಶದ್ರೋಹಿ ಅಥವಾ ವೈದ್ಯ ವಿರೋಧಿ ಎಂದು ನೀವು ಹೇಳಬಹುದೇ?. ನಾಳೆ ನೀವು ಅದನ್ನು ವೈದ್ಯ ಸಮೂಹದ ವಿರೋಧಿ ಎಂದು ವ್ಯಾಖ್ಯಾನಿಸುತ್ತೀರಿ. ಇದು ದೇಶದ ಹಿತಾಸಕ್ತಿಗೆ ವಿರುದ್ಧವೇ- ಅದನ್ನು ಒಪ್ಪಲಾಗುತ್ತದೆಯೇ?” ಎಂದು ಪೀಠ ಪ್ರಶ್ನಿಸಿತು.

ಆಕ್ಷೇಪಾರ್ಹವಾದ ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 69ಎ (1) ಮತ್ತು (2) ಉಲ್ಲಂಘಿಸುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಇದನ್ನು ಉಲ್ಲಂಘಿಸುವುದು ಕಂಡುಬಂದರೆ ಎಕ್ಸ್‌ ಕಾರ್ಪ್‌ ನಿರ್ಬಂಧ ಆದೇಶಗಳನ್ನು ಪಾಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

ಎಕ್ಸ್ ಕಾರ್ಪ್‌ ಪ್ರತಿನಿಧಿಸಿದ್ದ ವಕೀಲರು, ಈ ಹಿಂದೆ ಪ್ರಶ್ನಿಸಿದ್ದ ಎಲ್ಲಾ ನಿರ್ಬಂಧ ಆದೇಶಗಳನ್ನು ಪಾಲಿಸಲಾಗಿದೆ. ಸಕಾರಣವಿಲ್ಲದೇ 1,000 ಟ್ವೀಟ್‌ಗಳನ್ನು ತೆಗೆಯುವಂತೆ ಹೇಳಲಾಗಿದೆ ಎಂದರು.

ಈ ವೇಳೆ ನ್ಯಾಯಪೀಠ, ಕೇಂದ್ರ ಸರ್ಕಾರವು ತಾನು ನಿರ್ಬಂಧ ಆದೇಶ ಮಾಡುವಾಗ ಅದಕ್ಕೆ ಸಮರ್ಥನೆ ನೀಡಬೇಕು. ಇಲ್ಲವಾದಲ್ಲಿ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವನ್ನು ಅದರ ಬಳಕೆದಾರರು ನ್ಯಾಯಾಲಯಕ್ಕೆ ಎಳೆಯಬಹುದು ಎಂದು ಪೀಠವು ಮೌಖಿಕವಾಗಿ ತಿಳಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ವೈಯಕ್ತಿಕ ಖಾತೆಗಳ ನಿರ್ಬಂಧ: ಹೈಕೋರ್ಟ್​ನಲ್ಲಿ 25 ಲಕ್ಷ ರೂ. ಠೇವಣಿ ಇಟ್ಟ ಎಕ್ಸ್ ಕಾರ್ಪ್

ABOUT THE AUTHOR

...view details