ಕರ್ನಾಟಕ

karnataka

ETV Bharat / state

ಇಡೀ ರಾತ್ರಿ ಸುರಿದ ಮಳೆಗೆ ರಾಜಧಾನಿ ಹೈರಾಣ: ಕೆರೆಯಂತಾದ ರಸ್ತೆಗಳು; ಇನ್ನೂ ಮೂರು ದಿನ ಮುಂದುವರಿಯಲಿದೆ ವರುಣಾರ್ಭಟ

Bengaluru Rain: ಬೆಂಗಳೂರಲ್ಲಿ ಭಾರೀ ಮಳೆಯಾಗಿದ್ದು, ಕೆಲವೆಡೆ ರಸ್ತೆಗಳು ಜಲಾವೃತವಾಗಿವೆ. ಇನ್ನು ಅಂಡರ್​ಪಾಸ್​ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

By ETV Bharat Karnataka Team

Published : Oct 10, 2023, 11:02 AM IST

Updated : Oct 10, 2023, 11:21 AM IST

Bengaluru Rain
Bengaluru Rain

ಬೆಂಗಳೂರಲ್ಲಿ ಧಾರಾಕಾರ ಮಳೆ

ಬೆಂಗಳೂರು:ಸೋಮವಾರ ಸಂಜೆಯಿಂದ ಇಡೀ ರಾತ್ರಿ ಸುರಿದ ಮಳೆಗೆ ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳು ಸೇರಿದಂತೆ ಹೊರ ವಲಯಗಳಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜಾಗರಣೆ ಮಾಡುವಂತಾಗಿತ್ತು.

ಪ್ರಮುಖ ರಸ್ತೆಗಳೆಲ್ಲವೂ ನೀರುಮಯವಾಗಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ ಕಿಮೀಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸೋಮವಾರ ಸಂಜೆ 5 ಗಂಟೆಗೆ ಆರಂಭವಾದ ಮಳೆ ರಾತ್ರಿ 10 ಗಂಟೆವರೆಗೂ ಅಬ್ಬರಿಸಿತು. ನಂತರ ರಾತ್ರಿ ಪೂರ್ತಿ ಜಿಟಿ ಜಿಟಿ ಮಳೆಯು ಮುಂದುವರೆಯಿತು. ವರುಣನ ಅಬ್ಬರಕ್ಕೆ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಕೆಲವೆಡೆ ಮರಗಳೂ ಧರೆಗುರುಳಿ ಬಿದ್ದವು.

ರಾಜಧಾನಿಯಲ್ಲಿ ಹೆಚ್ಚು ಮಳೆ ಸುರಿದ ಪ್ರದೇಶಗಳು:ಬೊಮ್ಮನಹಳ್ಳಿಯಲ್ಲಿ 30 ಮಿ.ಮೀ, ಬಿಟಿಎಂ ಲೇಔಟ್‌ 30 ಮಿ.ಮೀ, ಕೋಣನಕುಂಟೆ 27 ಮಿ.ಮೀ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 28 ಮಿ.ಮೀ, ಅಟ್ಟೂರು 27 ಮಿ.ಮೀ, ಯಲಹಂಕ 25 ಮಿ.ಮೀ, ಹೊರಮಾವು 40 ಮಿ.ಮೀ, ಬಾಗಲಗುಂಟೆ 43 ಮಿ.ಮೀ, ದೊಡ್ಡಬಿದರಕಲ್ಲು 42 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 54 ಮಿ.ಮೀ, ಕೆಂಗೇರಿ 65 ಮಿ.ಮೀ, ನಾಗಪುರ 50 ಮಿ.ಮೀ, ಕೊಟ್ಟಿಗೆಪಾಳ್ಯ 48 ಮಿ.ಮೀ, ರಾಜಮಹಲ್‌ ಗುಟ್ಟಹಳ್ಳಿ 25 ಮಿ.ಮೀ, ವಿ.ವಿ.ಪುರಂ 20 ಮಿ.ಮೀ, ಆರ್‌.ಆರ್‌.ನಗರ 35 ಮಿ.ಮೀ, ಉತ್ತರಹಳ್ಳಿ 27 ಮಿ.ಮೀ, ಹೆಚ್‌.ಗೊಲ್ಲಹಳ್ಳಿ 62 ಮಿ.ಮೀ, ಹೊರಮಾವು 38 ಮಿ.ಮೀ ಮಳೆಯಾಗಿದೆ.

ಇನ್ನೂ ಮೂರು ದಿನ ಮಳೆ: ​​ಕಳೆದ ಎರಡು ದಿನಗಳಿಂದ ಬೆಂಗಳೂರಿನ ಕೆಲವು ಕಡೆ ಸಾಧಾರಣ ಮಳೆಯಾಗುತ್ತಿದ್ದು, ಕೆಲ ಕಡೆ ಜೋರು ಮಳೆಯಾಗಿದೆ. ಇನ್ನೂ ಮೂರು ದಿನ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಂಡರ್ ಪಾಸ್​​ಗಳಲ್ಲಿ ಅಡಿಯಷ್ಟು ನೀರು: ಕೆ.ಆರ್‌.ಮಾರುಕಟ್ಟೆ ಜಂಕ್ಷನ್‌, ಚಿಕ್ಕಪೇಟೆ ವೃತ್ತ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆ, ಪಣತ್ತೂರು ರೈಲ್ವೆ ಅಂಡರ್‌ಪಾಸ್‌, ಬನ್ನೇರುಘಟ್ಟ ರಸ್ತೆಯ ನಾಗಾರ್ಜುನ ಜಂಕ್ಷನ್‌, ಎಂ.ಜಿ.ರಸ್ತೆಯ ಅನಿಲ್‌ ಕುಂಬ್ಳೆ ವೃತ್ತ, ಕಲ್ಯಾಣನಗರ ಮೇಲ್ಸೇತುವೆ, ಹೆಸರಘಟ್ಟ ಕ್ರಾಸ್‌, ನಾಗವಾರ, ಹೆಣ್ಣೂರು ಜಂಕ್ಷನ್‌, ಕುಂದಲಹಳ್ಳಿಯ ಸ್ಪೈಸ್‌ ಗಾರ್ಡನ್‌, ಕಾಡುಬೀಸನಹಳ್ಳಿ, ಮಾರತ್‌ಹಳ್ಳಿ, ಹೊರವರ್ತುಲ ರಸ್ತೆಯ ಕಾರ್ತಿಕ್‌ನಗರ ಜಂಕ್ಷನ್‌ನಿಂದ ದೇವರಬೀಸನಹಳ್ಳಿ ಜಂಕ್ಷನ್‌, ದೊಡ್ಡನೆಕ್ಕುಂದಿ, ಕನಕಪುರ ರಸ್ತೆಯ ತಲಘಟ್ಟಪುರ, ಹುಳಿಮಾವು, ರೂಪೇನ ಅಗ್ರಹಾರ, ಮಾನ್ಯತಾ ಟೆಕ್‌ಪಾರ್ಕ್, ಮೈಕೋ ಲೇಔಟ್‌, ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್‌, ವಿಜಯನಗರ, ಮೈಸೂರು ರಸ್ತೆಯ ನಾಯಂಡಹಳ್ಳಿ, ಹರಳೂರು ಜಂಕ್ಷನ್‌, ಹೆಬ್ಬಾಳ ವೃತ್ತದಲ್ಲಿ ಅಡಿಗಟ್ಟಲೇ ನೀರು ನಿಂತಿತ್ತು.

ಚಿಕ್ಕಪೇಟೆ, ಕಾಟನ್ ಪೇಟೆ, ಕೆ.ಆರ್‌.ಮಾರುಕಟ್ಟೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ, ಹೊರವರ್ತುಲ ರಸ್ತೆ, ನಾಯಂಡಹಳ್ಳಿ, ಮಾರತ್‌ಹಳ್ಳಿ, ಬೆಳ್ಳಂದೂರು, ಎಚ್‌ಎಸ್‌ಆರ್‌ ಲೇಔಟ್‌, ರಾಜರಾಜೇಶ್ವರಿನಗರ, ಜಯನಗರ, ಯಲಹಂಕ, ತುಮಕೂರು ರಸ್ತೆ ಸೇರಿದಂತೆ ಹಲವೆಡೆ ಮಳೆ ಜೋರಿತ್ತು.

ಬಸವೇಶ್ವರನಗರ ಹಾವನೂರು ಲೇಔಟ್‌, ಹೆಬ್ಬಾಳ ಸಮೀಪದ ವಿ.ನಾಗೇನಹಳ್ಳಿ, ಯಲಹಂಕ ಉಪನಗರದ ಬಳಿ ಮರಗಳು ನೆಲಕ್ಕುರುಳಿ ಬಿದ್ದಿದ್ದವು. ಇದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಮರಗಳನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ತೀವ್ರ ಪರದಾಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

Last Updated : Oct 10, 2023, 11:21 AM IST

ABOUT THE AUTHOR

...view details