ಕರ್ನಾಟಕ

karnataka

By

Published : Jul 25, 2021, 9:45 PM IST

ETV Bharat / state

ರಾಜಧಾನಿಯಲ್ಲಿ ಧಾರಾಕಾರ ಮಳೆಗೆ ಅವಾಂತರ: ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಹೈ ಅಲರ್ಟ್

ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಜಾರ್ಖಂಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 29ರವರೆಗೆ ಭಾರಿ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

heavy-rain
ಧಾರಾಕಾರ ಮಳೆ

ಬೆಂಗಳೂರು: ರಾಜಧಾನಿಯಲ್ಲಿ ಸಂಜೆಯಿಂದ ರಾತ್ರಿವರೆಗೆ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿತು. ಸುಮಾರು ಸಂಜೆ 4 ಗಂಟೆಗೆ ವರ್ಷಧಾರೆ ಪ್ರಾರಂಭವಾಗಿ 9 ಗಂಟೆಯಾದರೂ ಮುಂದುವರೆಯಿತು. ಈಗಲೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ವಾಹನ ಸಾವರರು ಪರದಾಡುತ್ತಿದ್ದದ್ದು ಕಂಡು ಬಂತು.

ಜಲಮಂಡಳಿ ಕಾಮಗಾರಿ ಹಿನ್ನಲೆಯಲ್ಲಿ ನ್ಯಾಷನಲ್ ಗೇಮ್ಸ್ ವಿಲೇಜ್‌ನಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿತು. ನಗರದ ಹಲವೆಡೆ ಸುರಿದ ಧಾರಾಕಾರ ಮಳೆಗೆ ನಲುಗಿದ ಬೆಂಗಳೂರು ಮಂದಿ ಬದುಕು ಮೂರಾಬಟ್ಟೆಯಾಗಿದೆ. ಶಾಂತಿನಗರ, ವಿಲ್ಸನ್ ಗಾರ್ಡನ್ ಭಾರಿ ಮಳೆ ಸುರಿದಿದ್ದು, ವಿಲ್ಸನ್ ಗಾರ್ಡನ್ ಪಿ.ಡಬ್ಲ್ಯೂ.ಡಿ ಕ್ವಾಟರ್ಸ್ ತಳ ಮಹಡಿಗೆ ನೀರು ನುಗ್ಗಿತು. ಮನೆಯೊಳಗೆ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ವಿಲ್ಸನ್ ಗಾರ್ಡನ್ ಹತ್ತನೆಯ ಕ್ರಾಸ್ ರಸ್ತೆ ಕೆರೆಯಂತಾಗಿದೆ.

ಧಾರಾಕಾರ ಮಳೆ ದೃಶ್ಯ

ಸಂಜೆ ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕರು ಹಾಗೂ ಸಂಜೆಯ ವ್ಯಾಪಾರ ಮಾಡುವವರು ಪಡಿಪಾಟಲು ಪಡುವಂತಾಯ್ತು. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ತಗ್ಗು ಪ್ರದೇಶದಲ್ಲಿ ವಾಸಿಸುವ ಜನರ ಸ್ಥಿತಿ ಅಧೋಗತಿ ತಲುಪಿದೆ. ಶ್ರೀನಿವಾಸನಗರಲ್ಲಿ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ನಗರದ ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಕಾರ್ಪೊರೇಷನ್, ಕೆ.ಆರ್. ಮಾರುಕಟ್ಟೆ, ಯಶವಂತಪುರದ, ಮಲ್ಲೇಶ್ವರ, ಇಂದಿರಾನಗರ ಇನ್ನಿತರ ಕಡೆ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡಿತು. ವಾಯುಭಾರ ಕುಸಿತದಿಂದ ನಗರದಲ್ಲಿ ವರ್ಷಧಾರೆ ಮುಂದುವರೆಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಕೂಡ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ: ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಜಾರ್ಖಂಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 29ರವರೆಗೆ ಭಾರಿ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 25ರಿಂದ 29ರವರೆಗೆ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 26 ಮತ್ತು 27ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಜುಲೈ 26ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನೈರುತ್ಯ ಮುಂಗಾರು ಭಾನುವಾರ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಎಲ್ಲಾ ಕಡೆ, ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಹಾಗೂ ಉತ್ತರ ಒಳನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ಮಳೆಯಾಗಿದೆ ಇಲಾಖೆ ಹೇಳಿದೆ.

ಮುಖ್ಯವಾಗಿ, ಶಿವಮೊಗ್ಗದ ಆಗುಂಬೆ, ತೀರ್ಥಹಳ್ಳಿಯಲ್ಲಿ ತಲಾ 10 ಸೆಂ.ಮೀ, ಉಡುಪಿಯ ಕೊಲ್ಲೂರಿನಲ್ಲಿ 8 ಸೆಂ.ಮೀ, ಬೆಳಗಾವಿಯ ಲೊಂಡ, ಮಡಿಕೇರಿ, ಚಿಕ್ಕಮಗಳುರಿನ ಕೊಪ್ಪದಲ್ಲಿ 6 ಸೆಂ.ಮೀ, ದಕ್ಷಿಣ ಕನ್ನಡದ ಸುಬ್ರಮಣ್ಯ, ಉಡುಪಿಯ ಸಿದ್ದಾಪುರ, ಶಿರಾಲಿ, ಕದ್ರಾ, ಭಟ್ಕಳ, ಶಿವಮೊಗ್ಗದ ತಾಳಗುಪ್ಪ, ಶೃಂಗೇರಿ, ಜಯಪುರ, ಹಾಸನದ ಸಕಲೇಶಪುರದಲ್ಲಿ ತಲಾ 5 ಸೆಂ.ಮೀ, ಧರ್ಮಸ್ಥಳ, ಸುಳ್ಯ, ಬೆಳಗಾವಿಯ ಖಾನಪುರ, ಶಿವಮೊಗ್ಗದ ಲಿಂಗನಮಕ್ಕಿ, ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಮಳೆ ಅನಾಹುತ: ನಾಳೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುವರೇ ಸಿಎಂ?

ABOUT THE AUTHOR

...view details