ಬೆಂಗಳೂರು:ಯಾರನ್ನೋ ಮೆಚ್ಚಿಸಲು ತೀರ್ಮಾನ ಬದಲಿಸಲು ಸಾಧ್ಯವಿಲ್ಲ. ನಮಗೆ ರಾಜ್ಯದ ಜನರ ಆರೋಗ್ಯ ಮುಖ್ಯ. ಕೆಲವರು ನನ್ನನ್ನು ಟೀಕೆ ಮಾಡುತ್ತಿದ್ದಾರೆ. ಅದರ ಬಗ್ಗೆ ಬೇಜಾರಿಲ್ಲ. ರಾಜ್ಯದ ಜನರ ಆರೋಗ್ಯ ಕಾಪಾಡೋದು ಮೊದಲ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟ ಪಡಿಸಿದ್ದಾರೆ.
ಸದಾಶಿವನಗರದಲ್ಲಿ ಮಾತನಾಡಿದ ಅವರು, ಚಿತ್ರರಂಗಕ್ಕೆ ಮೂರು ದಿನ ಪೂರ್ಣ ರಿಯಾಯಿತಿ ಕೊಟ್ಟಿದ್ದಾರೆ. ಅದರ ಬಗ್ಗೆ ಹೆಚ್ಚು ಮಾತನಾಡೋದಿಲ್ಲ. ಜನರ ಜೀವನ, ಜೀವನೋಪಾಯ ಎರಡೂ ಮುಖ್ಯ. ಸಿಎಂ ಯಡಿಯೂರಪ್ಪ ಅವರಿಗೂ ಒತ್ತಡ ಬಂದಿದೆ. ಎಲ್ಲರ ಜೊತೆ ಸಮಾಲೋಚಿಸಿ ಸರಿದೂಗಿಸಬೇಕಾಗುತ್ತದೆ. ಹಾಗಾಗಿಯೇ ಸಿಎಂ ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ ಎಂದರು.
ಶಿಕ್ಷಣ ಸಂಸ್ಥೆಗಳು, ಚಿತ್ರರಂಗದ ಅಭಿಮಾನಿಗಳು ಹಾಗೂ ಜಿಮ್ ಮಾಲೀಕರಿಂದ ಒತ್ತಡ ಬಂದಿದೆ. ನನಗೂ ಒತ್ತಡ ಬಂದಿದೆ. ಹಾಗಂತ ಎಲ್ಲರಿಗೂ ರಿಯಾಯಿತಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಕೋವಿಡ್ ಜೊತೆಗೆ ಮಳೆಗಾಲದ ನಿರ್ವಹಣೆಗೂ ಸಿದ್ದರಾಗಿ: ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ
ಕೆ.ಮಂಜುಗೆ ಸಚಿವ ಸುಧಾಕರ್ ತಿರುಗೇಟು:
ಕೆ.ಮಂಜು ಅಂದರೆ ಯಾರೂ ಅಂತಾನೇ ನನಗೆ ಗೊತ್ತಿಲ್ಲ. ಯಾರ ಟೀಕೆಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದಿಲ್ಲ. ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ನಮಗೆ ಜನರ ರಕ್ಷಣೆ ಬಹಳ ಮುಖ್ಯ. ಟೀಕೆಗಳಿಗೆಲ್ಲಾ ತಲೆಕೆಡಿಕೊಳ್ಳೋದಿಲ್ಲ. ಸರ್ಕಾರ ಎಲ್ಲವನ್ನೂ ಸರಿದೂಗಿಸಬೇಕಾಗುತ್ತದೆ. ಹಾಗಾಗಿ ಸಿಎಂ ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ. ಇದು ತಪ್ಪು ಅಂತಾನೂ ಹೇಳೋದಿಲ್ಲ. ಆದರೆ, ಈಗ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ನಿರ್ಮಾಪಕ ಕೆ.ಮಂಜುಗೆ ತಿರುಗೇಟು ನೀಡಿದರು.
ಖಳನಾಯಕನಾಗಿ ಕಾಣಿಸುತ್ತಿದ್ದೇನೆ:
ಕೆಲವರಿಗೆ ನಾನು ಖಳನಾಯಕನಾಗಿ ಕಾಣಿಸುತ್ತಿದ್ದೇನೆ. ಆದರೂ ಬಹಳಷ್ಟು ಜನರಿಗೆ ಆರೋಗ್ಯ ಸಚಿವನಾಗಿ ಅಂತಃಕರಣದಿಂದ ಕೆಲಸ ಮಾಡುತ್ತಿದ್ದೇನೆ. ಟೀಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳೋದಿಲ್ಲ. ಒಬ್ಬರಿಗೆ ರಿಯಾಯಿತಿ ಕೊಟ್ಟ ಬಳಿಕ ಮತ್ತೊಬ್ಬರು ಅದನ್ನ ಕೇಳ್ತಾರೆ. ನಾವೇನು ತಪ್ಪು ಮಾಡಿದ್ದೇವೆ ಅಂತಾ ಕೇಳೋದು ಸಹಜ. ಅದು ತಪ್ಪು ಅಂತಾನೂ ಹೇಳೋದಿಲ್ಲ. ಅವರ ಮನವಿಗಳನ್ನ ನಾನು ಸಿಎಂ ಗಮನಕ್ಕೆ ತರುತ್ತೇನೆ ಎಂದರು.