ಕರ್ನಾಟಕ

karnataka

ETV Bharat / state

ಟ್ರೇಡ್ ಲೈಸೆನ್ಸ್ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಲ್ತ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ

ವಿರೂಪಾಕ್ಷಪ್ಪ ಮಾಡಾಳ್​ ಲಂಚ ಪ್ರಕರಣದ ಬೆನ್ನಲ್ಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿಗಳನ್ನು ನಡೆಸುತ್ತಿದ್ದಾರೆ.

By

Published : Mar 4, 2023, 7:58 PM IST

Health Inspector Ramaiah
ಹೆಲ್ತ್ ಇನ್ಸ್‌ಪೆಕ್ಟರ್ ರಾಮಯ್ಯ

ಬೆಂಗಳೂರು:ವ್ಯಾಪಾರ ಪರವಾನಗಿ ನವೀಕರಣಗೊಳಿಸಲು ಸ್ಪಾ ಮಾಲೀಕನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಿಬಿಎಂಪಿ ಹೆಲ್ತ್ ಇನ್ಸ್‌ಪೆಕ್ಟರ್​ ಅನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ಪಾ ಮಾಲೀಕನಿಂದ 18 ಸಾವಿರ ರೂ. ಸ್ವೀಕರಿಸುತ್ತಿದ್ದಾಗಲೇ ಸಿ.ವಿ. ರಾಮನ್ ನಗರ ವಾರ್ಡ್​ನ ಹೆಲ್ತ್ ಇನ್ಸ್‌ಪೆಕ್ಟರ್ ರಾಮಯ್ಯರ ಅವರನ್ನ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.

ಇಂದಿರಾನಗರದಲ್ಲಿ ವೆಲ್​ನೆಸ್ ಹೆಸರಿನ ಸ್ಪಾ ಹೊಂದಿದ್ದ ಸುಬ್ರಹ್ಮಣ್ಯ ಎಂಬುವವರು ಟ್ರೇಡ್ ಲೈಸೆನ್ಸ್ ನವೀಕರಣಕ್ಕಾಗಿ ಮನವಿ ಸಲ್ಲಿಸಿದ್ದರು. ಆದರೆ, ಹೆಲ್ತ್ ಇನ್ಸ್‌ಪೆಕ್ಟರ್ ರಾಮಯ್ಯ ಇದಕ್ಕೆ ಪ್ರತಿಯಾಗಿ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇದರಿಂದಾಗಿ ಸುಬ್ರಹ್ಮಣ್ಯ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು 18 ಸಾವಿರ ರೂ‌ ಲಂಚ ಸ್ವೀಕರಿಸುತ್ತಿದ್ದಾಗಲೇ ರಾಮಯ್ಯ ಅವರನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತದಿಂದ ಸರಣಿ ದಾಳಿಗಳು:ಇತ್ತೀಚೆಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಹಾಗೂ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರ ಪುತ್ರ ಪ್ರಶಾಂತ್​ ಮಾಡಾಳ್​ ತಮ್ಮ ಕಚೇರಿಯಲ್ಲಿ ಟೆಂಡರ್​ಗೆ ಸಂಬಂಧಿಸಿದಂತೆ ಟೆಂಡರ್​ ಆಕಾಂಕ್ಷಿಯೊಬ್ಬರಿಂದ 40 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೆ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್​ ಮಾಡಾಳ್​ ಮನೆಗಳ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ಕೋಟಿಗಟ್ಟಲೆ ಹಣ ಹಾಗೂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಪ್ರಕರಣ ಹಿನ್ನೆಲೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪ್ರಶಾಂತ್​ ಮಾಡಾಳ್​ ಸೇರಿ ಆರು ಮಂದಿಯ ಮೇಲೆ ಎಫ್​ಐಆರ್​ ದಾಖಲಾಗಿತ್ತು. ಇದರಲ್ಲಿ ವಿರೂಪಾಕ್ಷಪ್ಪ ಮಾಡಾಳ್​ ಮೊದಲ ಆರೋಪಿಯಾಗಿದ್ದು, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಾಪತ್ತೆಯಾಗಿದ್ದಾರೆ. ಪೊಲೀಸರು ಅವರ ಹುಡುಕಾಟದಲ್ಲಿದ್ದಾರೆ. ಉಳಿದಂತೆ ಐವರಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಇದರ ನಂತರದಲ್ಲಿ ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್ ಅವರು ಕಾರ್ಖಾನೆಯೊಂದರ ಪರವಾನಗಿ ರದ್ದುಪಡಿಸಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರು. ರಾಕೇಶ್​ ಪಟೇಲ್​ ಎಂಬವರ ಪಟೇಲ್​ ಟೆಕ್​ ಪ್ರೈ. ಲಿ ಎಂಬ ಕಾರ್ಖಾನೆಯ ಪರವಾನಗಿ ರದ್ದು ಮಾಡಲು ಲಂಚ ಪಡೆಯುತ್ತಿದ್ದರು.

ಇಂದು ಮಧ್ಯಾಹ್ನ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉದ್ಯಮಿ ಕೇಶ್ವಾಪುರದ ರಮೇಶ್​​ ಬೊಣಗೇರಿ ಎಂಬವರ ಮನೆ ಹಾಗೂ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 3 ಕೋಟಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ಕೆಎಸ್​ಡಿಎಲ್ ನಿಗಮದ ಅಧಿಕಾರಿಗಳ ವಿರುದ್ಧ ಒಂದು ತಿಂಗಳ ಹಿಂದೆಯೇ ದೂರು ದಾಖಲು: ತನಿಖೆ ಚುರುಕು

ABOUT THE AUTHOR

...view details