ಬೆಂಗಳೂರು: ಸತತ ಎರಡು ವರ್ಷಗಳ ನೆರೆ ಹಾವಳಿಯಿಂದ ಕಂಗೆಟ್ಟಿರುವ ರಾಜ್ಯದ ರೈತ ಸಮುದಾಯ, ಬೆಳೆದ ಫಸಲು ಕೈಗೆಟುಕದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವ ಆಘಾತಕಾರಿ ಬೆಳವಣಿಗೆ ಹತ್ತಿಕ್ಕಲು ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅನ್ನದಾತರು ಆತ್ಮಹತ್ಯೆಯ ದಾರಿ ತುಳಿಯದಂತೆ ಆರಂಭದಲ್ಲೇ ಸರ್ಕಾರ ಎಚ್ಚೆತ್ತು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ರೈತರ ಹಿಡಿಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದು ಹೇಳಿದ್ದಾರೆ.
ಕಳೆದ 48 ತಾಸುಗಳ ಅವಧಿಯಲ್ಲಿ ರಾಜ್ಯದಲ್ಲಿ ಸಾಲದ ಸುಳಿಗೆ ನಲುಗಿ ಹೋದ ನಾಲ್ವರು ರೈತರು (ಹಾವೇರಿ ಜಿಲ್ಲೆ 2, ಮಂಡ್ಯ, ದಾವಣಗೆರೆ ಜಿಲ್ಲೆ ತಲಾ ಒಂದು) ಆತ್ಮಹತ್ಯೆ ಮಾಡಿಕೊಂಡಿರುವ ವರದಿ ನನ್ನನ್ನು ಅಧೀರನನ್ನಾಗಿಸಿದೆ. ರೈತರ ಆತ್ಮಹತ್ಯೆ ಪ್ರಕರಣಗಳು 'ಸಮೂಹ ಸನ್ನಿ' ಆಗದಂತೆ ಆರಂಭದಲ್ಲೇ ಎಚ್ಚೆತ್ತುಕೊಂಡು ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಅತಿವೃಷ್ಟಿ ನಡುವೆ ಕಾಡುತ್ತಿರುವ ಕೊರೊನಾ ಸೋಂಕು ಸೃಷ್ಟಿಸಿದ ಅವಾಂತರದಲ್ಲಿ ಕೃಷಿಕ ಸಮುದಾಯದ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ನೆರೆ ಹಾವಳಿಯ ಸಂತ್ರಸ್ತರಿಗೆ ಸರ್ಕಾರ ನೀಡಿದ ಕಿಲುಬು ಕಾಸಿನ ಪರಿಹಾರದಿಂದ ರೈತರು ತೀವ್ರ ಹತಾಶರಾಗಿದ್ದಾರೆ. ಕೊರೊನಾ ಸೋಂಕು ವ್ಯಾಪಿಸಿದ ನಂತರ ದೇಶದಲ್ಲಿ ಎಲ್ಲಾ ವಲಯಗಳ ಜಿಡಿಪಿ ನೆಲಕಚ್ಚಿದರೂ ಕೃಷಿ ವಲಯದಿಂದ ಮಾತ್ರ ದೇಶದ ಆರ್ಥಿಕ ಬೆನ್ನೆಲುಬು ಅದಃಪತನವಾಗಿರಲಿಲ್ಲ ಎಂಬುದನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮನಗಾಣಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದ ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುವ ಮುನ್ಸೂಚನೆ ಸಿಗುತ್ತಿರುವ ಬೆನ್ನಲ್ಲೇ ಸರ್ಕಾರ ಅನ್ನದಾತನ ಕೈಹಿಡಿಯಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯೆ ಸಂಕೋಲೆ ಪುನರಾವರ್ತನೆ ಆಗುವುದಕ್ಕೆ ಬಿಡಬಾರದು ಎಂದು ಹೇಳಿದ್ದಾರೆ.
ಆಗ ವಿರೋಧ ಪಕ್ಷದಲ್ಲಿದ್ದರೂ ನಾನು ರಾಜ್ಯದ ಸುಮಾರು 500 ಮಂದಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡಿದ್ದೆ. ನಂತರ ನಾನು ಮುಖ್ಯಮಂತ್ರಿಯಾದಾಗ ನೀಡಿದ್ದ ವಾಗ್ದಾನದಂತೆ ರಾಜ್ಯದ ರೈತರ 25,000 ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದೆ. ಬರೀ ಸಾಲ ಮನ್ನಾದಿಂದ ರೈತರ ಬದುಕು ಹಸನಾಗದು ಎಂಬುದನ್ನು ಅರಿತಿದ್ದೆ. ಆದರೆ ಆರ್ಥಿಕ ಚೈತನ್ಯ ನೀಡುವ ಕಾರ್ಯಕ್ರಮ ರೂಪಿಸುವ ಕನಸು ಸಾಕಾರವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳೆ ಹಾನಿ, ಆಸ್ತಿಪಾಸ್ತಿ ನಷ್ಟ, ಎರಡು ಹೊತ್ತು ಊಟಕ್ಕೂ ಪರದಾಡುವಂತಹ ಪರಿಸ್ಥಿತಿಗೆ ಬಂದಿರುವ ಅನ್ನದಾತರು ಆತ್ಮಹತ್ಯೆಗೆ ಶರಣಾಗದಂತೆ ಎಚ್ಚರ ವಹಿಸುವ ಮೂಲಕ ಸಂಭವನೀಯ ಸರಣಿ ಆತ್ಮಹತ್ಯೆಯ ಅನಾಹುತಕಾರಿ ಬೆಳವಣಿಗೆಯನ್ನು ಆರಂಭದಲ್ಲೇ ಚಿವುಟಿ ಹಾಕಬೇಕು ಎಂದು ಹೆಚ್ಡಿಕೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.