ಕರ್ನಾಟಕ

karnataka

ETV Bharat / state

ಟೇಕ್ ಆಫ್ ಕಾಣಲು ತಿಣುಕುತ್ತಿದೆ ಹೆಚ್​​​ಡಿಕೆ ಕನಸಿನ 'ಕಾಂಪೀಟ್ ವಿತ್ ಚೀನಾ'.. ಯೋಜನೆಯ ಸ್ಥಿತಿಗತಿ ಹೀಗಿದೆ.. - ಕಾಂಪೀಟ್ ವಿತ್ ಚೀನಾ ಯೋಜನೆ

ಚೀನಾದ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ಸಿಎಂ ಆಗಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು 'ಕಾಂಪೀಟ್​ ವಿತ್​ ಚೀನಾ' ಎಂಬ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ತಂದಿದ್ದರು. ಆದ್ರೆ, ಸರ್ಕಾರ ಪತನದ ಬೆನ್ನಲ್ಲೇ ಈ ಯೋಜನೆ ಈವರೆಗೂ ಟೇಕ್​ ಆಫ್​ ಆಗಿಲ್ಲ. ಸದ್ಯ ಹೆಚ್​​ಡಿಕೆಯ ಕಾಂಪೀಟ್​​ ವಿತ್​ ಚೀನಾ ಸ್ಥಿತಿ ಗತಿ ಹೇಗಿದೆ ಎಂಬುದರ ಕುರಿತ ವರದಿ ಇಲ್ಲಿದೆ ನೋಡಿ..

hd-kumarswamy-compete-with-china-project-details
ಹೆಚ್​​​ಡಿಕೆ

By

Published : Sep 7, 2021, 9:13 PM IST

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಹತ್ವಾಕಾಂಕ್ಷೆಯ 'ಕಾಂಪಿಟ್ ವಿತ್ ಚೈನಾ' ಯೋಜನೆ ಘೋಷಿಸಿದ್ದರು. ಚೀನಾದ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕಾಂಪೀಟ್ ವಿತ್ ಚೀನಾ ಪರಿಕಲ್ಪನೆಯೊಂದಿಗೆ 2018ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದರು. ಆದರೆ, ವಾಸ್ತವದಲ್ಲಿ ಈ ಯೋಜನೆ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಟೇಕ್ ಆಫ್ ಕಾಣಲು ಸಾಧ್ಯವಾಗಿಲ್ಲ.

ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ 2018ರ ಬಜೆಟ್‌ನಲ್ಲಿ 'ಕಾಂಪಿಟ್ ವಿತ್ ಚೈನಾ' ಯೋಜನೆ ಘೋಷಿಸಿದ್ದರು. 9 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ತಲಾ 2 ಸಾವಿರ ಕೋಟಿ ರೂ. ಸರ್ಕಾರದಿಂದ ನೀಡಲು ನಿರ್ಧರಿಸಲಾಗಿತ್ತು. ಖಾಸಗಿಯಿಂದ ತಲಾ 3 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು.

ಆಟಿಕೆ, ಮೊಬೈಲ್ ಉಪಕರಣಗಳು, ಬಾಥ್‌ರೂಂ ಫಿಟ್ಟಿಂಗ್ಸ್, ವಿದ್ಯುತ್ ಉಪಕರಣಗಳಂತಹ ಉತ್ಪನ್ನಗಳನ್ನು ಕ್ಲಸ್ಟರ್‌ವಾರು ಅಭಿವೃದ್ಧಿಪಡಿಸುವು ಗುರಿ ಹೊಂದಲಾಗಿತ್ತು. ಕೌಶಲ ಆಧರಿತ ಉದ್ಯಮಗಳ ಸ್ಥಾಪನೆ ಮೂಲಕ ಚೀನಾದ ಕಂಪನಿಗಳೊಂದಿಗೆ ಪೈಪೋಟಿ ನಡೆಸುವುದು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ನೆರವಾಗುವುದು ಯೋಜನೆಯ ಮೂಲ ಉದ್ದೇಶವಾಗಿದೆ.

ಕಾಂಪೀಟ್ ವಿತ್ ಚೀನಾ ಮೂಲಕ ಎಲ್ಲೆಲ್ಲಿ ಕೈಗಾರಿಕಾ ಕ್ಲಸ್ಟರ್?:ಕಾಂಪೀಟ್ ವಿತ್ ಚೀನಾ ಮೂಲಕ ಕಲಬುರಗಿ, ಕೊಪ್ಪಳ, ಮೈಸೂರು, ತುಮಕೂರು, ಚಿತ್ರದುರ್ಗ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಬೀದರ್‌ನಲ್ಲಿ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಕಲಬುರಗಿ ವಲಯದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಅಗತ್ಯ ಬಿಡಿ ಭಾಗಗಳನ್ನು ಉತ್ಪಾದಿಸುವ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿತ್ತು.

ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹೋಪಯೋಗಿ ಎಲ್‌ಇಡಿ ಲೈಟ್‌ಗಳನ್ನು ಉತ್ಪಾದಿಸುವ ಉದ್ಯಮವನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿತ್ತು. ಹಾಸನ ಜಿಲ್ಲೆಯನ್ನು ಸ್ನಾನಗೃಹ, ನೆಲಹಾಸು ಹಾಗೂ ಸ್ಯಾನಿಟರಿ ಉಪಕರಣಗಳ ಉತ್ಪಾದಕ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸುವುದು, ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ತಯಾರಿಕಾ ಉದ್ಯಮ ಹುಟ್ಟು ಹಾಕುವ ಗುರಿ ಹೊಂದಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ICB ಚಿಪ್‌ಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು, ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಬಿಡಿ ಭಾಗಗಳ ತಯಾರಿಕೆಯ ಉದ್ಯಮ ಹಾಗೂ ತುಮಕೂರು ಜಿಲ್ಲೆಯಲ್ಲಿ ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್ ವಸ್ತುಗಳ ತಯಾರಿಕೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿತ್ತು. ಇನ್ನು ಬೀದರ್ ಜಿಲ್ಲೆಯಲ್ಲಿ ಯಂತ್ರೋಪಕರಣಗಳ ಉತ್ಪಾದನೆಗೆ ಯೋಜನೆ ರೂಪಿಸಲಾಗಿತ್ತು.

ಈ ಯೋಜನೆ ‌ಮೂಲಕ ಉತ್ಪಾದನಾ ಸಂಬಂಧಿತ ಚಟುವಟಿಕೆಗಳನ್ನು ಗ್ರಾಮ ಮಟ್ಟದಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದವರೆಗೆ ಕೊಂಡೊಯ್ಯಲು ಉದ್ದೇಶಿಲಾಗಿದೆ. ಯೋಜನೆ ಜಾರಿ ಮಾಡಿ ಪ್ರತಿ ಕ್ಲಸ್ಟರ್‌ಗೆ ವಿಷನ್ ಗ್ರೂಪ್ ಹಾಗೂ ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆಯಾ ಉದ್ಯಮ ವಲಯಗಳ ವಿಷನ್‌ ಗ್ರೂಪ್‌ಗಳನ್ನು ರಚಿಸಲಾಗಿದೆ. ಇವುಗಳು ನೀಡುವ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತಿದೆ.

ಪೂರ್ಣ ಪ್ರಮಾಣದಲ್ಲಿ ಟೇಕ್ ಆಫ್ ಆಗದ ಯೋಜನೆ :ಹೆಚ್​ಡಿಕೆ ಅಧಿಕಾರದಿಂದ ಕೆಳಗೆ ಇಳಿದ ಬಳಿಕ ಯೋಜನೆ ಅನುಷ್ಠಾನದ ಪ್ರಗತಿ ಅಷ್ಟಕಷ್ಟೇ.. ರಾಜತಾಂತ್ರಿಕ ಕಾರಣದಿಂದ ಕಾಂಪೀಟ್ ವಿತ್ ಚೀನಾ ಹೆಸರನ್ನು ಕೈಬಿಡಲಾಗಿದೆ. ಅದರ ಬದಲು ಕ್ಲಸ್ಟರ್ ಆಧಾರಿತ ಅಭಿವೃದ್ಧಿ ಯೋಜನೆ ಎಂದು ಬದಲಾಯಿಸಲಾಗಿದೆ.

ಯೋಜನೆಯಡಿ ಒಂಬತ್ತು ಕೈಗಾರಿಕಾ ಕ್ಲಸ್ಟರ್ ವಲಯವಾಗಿ ಆಯ್ಕೆಯಾದ ಜಿಲ್ಲೆಗಳ ಪೈಕಿ ಕೊಪ್ಪಳದಲ್ಲಿ ಆಟಿಕೆ ವಸ್ತು ತಯಾರಿಕಾ ಘಟಕ‌ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಚಾಲನೆ ನೀಡಿದ್ದರು. ಕೊಪ್ಪಳದಲ್ಲಿನ ಕೈಗಾರಿಕಾ ಕ್ಲಸ್ಟರ್‌ಗೆ ಹೂಡಿಕೆದಾರರಿಂದ ಸಣ್ಣಮಟ್ಟಿನ ಸ್ಪಂದನೆ ಸಿಗುತ್ತಿದೆ ಎಂದು ಯೋಜನೆಯ ನೋಡಲ್ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ಬಹುತೇಕ ಎಲ್ಲಾ ಕ್ಲಸ್ಟರ್‌ಗಳಲ್ಲಿ ವಿಷನ್ ಗ್ರೂಪ್‌ಗಳು ಅನುಷ್ಠಾನ ಸಂಬಂಧ ಸಭೆಗಳನ್ನು ನಡೆಸುತ್ತಿದ್ದು, ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಎಲ್ಲವೂ ಆರಂಭಿಕ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹೂಡಿಕೆದಾರರು ಮುಂದೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕಾಂಪೀಟ್ ವಿತ್ ಚೀನಾ ಪರಿಕಲ್ಪನೆಗೆ ಸ್ಪಂದನೆ ಸಿಗುತ್ತಿಲ್ಲ ಎಂದರು.

ಕ್ಲಸ್ಟರ್‌ ವಲಯವಾಗಿ ಹಾಸನ, ತುಮಕೂರು ಕೈಬಿಟ್ಟ ಸರ್ಕಾರ :ಉತ್ತಮ ಸ್ಪಂದನೆ ಸಿಗದೇ ಇರುವ ಕಾರಣ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಹಾಸನ‌ ಮತ್ತು ತುಮಕೂರನ್ನು ಕಾಂಪೀಟ್ ವಿತ್ ಚೀನಾದಡಿ ಕೈಗಾರಿಕಾ ಕ್ಲಸ್ಟರ್ ವಲಯ ಜಿಲ್ಲೆಯ ಪಟ್ಟಿಯಿಂದ ಕೈಬಿಟ್ಟಿದೆ.

ಹಾಸನದಲ್ಲಿ ಸ್ನಾನಗೃಹ, ನೆಲಹಾಸು ಹಾಗೂ ಸ್ಯಾನಿಟರಿ ಉಪಕರಣಗಳ ತಯಾರಿಕಾ ಕೇಂದ್ರವನ್ನಾಗಿ ಮಾಡಲು ಉದ್ದೇಶಿಸಲಾಗಿತ್ತು. ತುಮಕೂರು ಜಿಲ್ಲೆಯಲ್ಲಿ ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್ ವಸ್ತುಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಈ‌ ಎರಡೂ ಜಿಲ್ಲೆಗಳಲ್ಲಿ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಗದ ಕಾರಣ ಅದನ್ನು ಕೈಬಿಡಲು ನಿರ್ಧರಿಸಲಾಗಿದೆ.

ಅದರ ಬದಲಿಗೆ ಕಾಂಪೀಟ್ ವಿತ್ ಚೀನಾದಡಿ ಧಾರವಾಡ ಮತ್ತು ಶಿವಮೊಗ್ಗವನ್ನು ಆಯ್ಕೆ ಮಾಡಲು ಅಧಿಕಾರಿಗಳು ಪ್ರಸ್ತಾಪ ಸಲ್ಲಿಸಿದ್ದಾರೆ. ಧಾರವಾಡದಲ್ಲಿ ಗೃಹೋಪಯೋಗಿ, ಗ್ರಾಹಕ ಸರಕು ಉತ್ಪಾದನಾ (FMCG) ಕ್ಲಸ್ಟರ್ ಮಾಡಲು ಉದ್ದೇಶಿಸಲಾಗಿದ್ದರೆ, ಶಿವಮೊಗ್ಗದಲ್ಲಿ ಆರೋಗ್ಯ ಮತ್ತು ಬೈಯೋ ಫಾರ್ಮಾ ಮತ್ತು ಕ್ಷೇಮ ಕೇಂದ್ರವನ್ನಾಗಿ‌ ಮಾಡಲು ಉದ್ದೇಶಿಸಲಾಗಿದೆ.

ಇತ್ತ ಬಳ್ಳಾರಿಯಲ್ಲಿ ಜವಳಿ ಉತ್ಪಾದನಾ ಕೇಂದ್ರವನ್ನಾಗಿ ಈ ಮೊದಲು ಆಯ್ಕೆ ಮಾಡಲಾಗಿತ್ತು. ಆದರೆ, ಅಲ್ಲಿಯೂ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಗದ ಕಾರಣ, ಚಾಮರಾಜನಗರವನ್ನು ಜವಳಿ ಉತ್ಪಾದನಾ ಕ್ಲಸ್ಟರ್ ಆಗಿ ಮಾಡಲು ಚಿಂತನೆ ನಡೆದಿದೆ.‌‌ ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಉಳಿದಂತೆ ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಲಬುರ್ಗಿ ಕ್ಲಸ್ಟರ್ ಜಿಲ್ಲೆಗಳ ಅಭಿವೃದ್ಧಿಯನ್ನು ಐಟಿಬಿಟಿ ಇಲಾಖೆಗೆ ವಹಿಸಲಾಗಿದೆ. ಸದ್ಯಕ್ಕೆ ಕೊಪ್ಪಳ, ಶಿವಮೊಗ್ಗ, ಧಾರವಾಡ, ಚಾಮರಾಜನಗರಕ್ಕೆ ಹೂಡಿಕೆದಾರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇನ್ನು, ಹೂಡಿಕೆದಾರರ ಜೊತೆ ಮಾತುಕತೆ ನಡೆಯುತ್ತಿದ್ದು, ಸರ್ಕಾರ ಅವರಿಗೆ ಸಹಾಯಧನ ನೀಡಲಿದೆ ಎಂದು ನೋಡಲ್ ಅಧಿಕಾರಿ ತಿಳಿಸಿದರು.

ABOUT THE AUTHOR

...view details