ಕರ್ನಾಟಕ

karnataka

By ETV Bharat Karnataka Team

Published : Sep 22, 2023, 8:58 PM IST

ETV Bharat / state

ಕಾವೇರಿ ಸಂಕಷ್ಟದ ಬಗ್ಗೆ ಅಮಿತ್ ಶಾ ಜೊತೆ ಚರ್ಚೆ.. ಮಹತ್ವದ ಪರಿಹಾರೋಪಾಯ ಸೂಚಿಸಿದ ಹೆಚ್​ಡಿಕೆ

ರಾಜ್ಯದ ಕಾವೇರಿ ಕುರಿತ ವಾಸ್ತವ ಸ್ಥಿತಿಯನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದೇನೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಅಮಿತ್ ಶಾ ಜೊತೆ ಚರ್ಚೆ ನಡೆಸಿದ ಹೆಚ್ ಡಿ ಕುಮಾರಸ್ವಾಮಿ
ಅಮಿತ್ ಶಾ ಜೊತೆ ಚರ್ಚೆ ನಡೆಸಿದ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು :ರಾಜ್ಯವು ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಅಮಿತ್ ಶಾ ಅವರಿಗೆ ರಾಜ್ಯದ ಕಾವೇರಿ ಕುರಿತ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇನೆ. ಕಾವೇರಿ ಸಮಸ್ಯೆ, ಬರ ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ ಎಂದರು.

ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಹಳ ಅಸಡ್ಡೆ ಪ್ರದರ್ಶಿಸಿದೆ. ಕನ್ನಡನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದೆ. ಒಂದು ಕಡೆ ನೀರಿಲ್ಲ ಎಂದು ಸರ್ಕಾರವೇ ಹೇಳುತ್ತದೆ. ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತದೆ. ಸುಪ್ರೀಂ ಕೋರ್ಟ್ ಮುಂದೆ ಅತ್ಯಂತ ತಡವಾಗಿ ಅರ್ಜಿಯನ್ನು ಹಾಕಿದೆ ಸರ್ಕಾರ. ರೈತರ ಬಗ್ಗೆ ಇವರಿಗೆ ಬದ್ಧತೆ ಎನ್ನುವುದು ಇದ್ದಿದ್ದರೆ, ಅರ್ಜಿ ಸಲ್ಲಿಸುವ ಬಗ್ಗೆ ವಿಳಂಬ ಮಾಡುತ್ತಿರಲಿಲ್ಲ ಎಂದು ದೂರಿದರು. ರೈತರ ಹಿತರಕ್ಷಣೆ ಮಾಡುವ ಕೆಲಸ ಮಾಡಬೇಕು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯವಿದೆ. ಕನ್ನಡಿಗರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡಬೇಡಿ ಎಂದು ನಾನು ಸಲಹೆ ಮಾಡಿದ್ದೆ. ಆದರೆ ಸರ್ಕಾರ ನನ್ನ ಮಾತನ್ನು ಕೇಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೋರ್ಟ್ ಆದೇಶದಿಂದ ಪಾರಾಗಲು ಮಾರ್ಗವಿದೆ : ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ಒಂದು ಆದೇಶವನ್ನು ಗಮನಿಸಿದ್ದೇನೆ. ಒಂದು ವೇಳೆ ಕೋರ್ಟ್ ಪಾಲಿಸಲಾಗದ ಕಠಿಣ ಆದೇಶವನ್ನೇನಾದರೂ ನೀಡಿದರೆ, ಅಂತಹ ಸಂಕಷ್ಟ ಸಮಯದಲ್ಲಿ ಆಯಾ ರಾಜ್ಯ ಸರ್ಕಾರ ಜನರ ಪರವಾಗಿ ಕೈಗೊಳ್ಳುವ ನಿರ್ಧಾರವು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗುವುದಿಲ್ಲ. ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಒಂದು ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಪಡೆದು ದಿಟ್ಟ ಕ್ರಮ ಕೈಗೊಳ್ಳಲಿ ಎಂದು ಹೆಚ್​ಡಿಕೆ ಒತ್ತಾಯಿಸಿದರು.

ಗ್ಯಾರಂಟಿಗಳ ನಿತ್ಯ ಭಜನೆ : ರಾಜ್ಯದ ಜನರ ಹಿತ ರಕ್ಷಣೆಗೆ ಇಂಥ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡದೆ, ಕಾಂಗ್ರೆಸ್ ಸರ್ಕಾರ ಕೇವಲ ಐದು ಗ್ಯಾರಂಟಿಗಳ ಬಗ್ಗೆ ನಿತ್ಯವೂ ಭಜನೆ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿದ ಮೂವರು ನ್ಯಾಯಮೂರ್ತಿಗಳಿದ್ದಾರೆ. ಅದೇ ಸುಪ್ರೀಂ ಕೋರ್ಟ್​ನ ಹಲವಾರು ವಿಶ್ರಾಂತ ನ್ಯಾಯಮೂರ್ತಿಗಳು ರಾಜ್ಯದಲ್ಲಿದ್ದಾರೆ. ಅಡ್ವೋಕೇಟ್ ಜನರಲ್​ಗಳಾಗಿ ಕೆಲಸ ಮಾಡಿದ ಆರು ಜನ ಕಾನೂನು ತಜ್ಞರಿದ್ದಾರೆ. ಇವರೆಲ್ಲರನ್ನೂ ಆಹ್ವಾನಿಸಿ ಚರ್ಚೆ ಮಾಡಬೇಕಿತ್ತಲ್ಲವೇ? ಅಂಥವರನ್ನು ಕರೆದು ಸಭೆ ಮಾಡುವ ಸಾಮಾನ್ಯ ಜ್ಞಾನ ಇವರಿಗೆ ಇಲ್ಲ ಎಂದು ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಂದ್​ಗೆ ನಮ್ಮ ಬೆಂಬಲವಿದೆ:ಕಾಂಗ್ರೆಸ್ ಸರ್ಕಾರದಿಂದಲೇ ಬೆಂಗಳೂರು ಹಾಳಾಗಿದೆ. ಈ ಜನರಿಗೆ ನೀರು ಎಲ್ಲಿಂದ ತಂದು ಕೊಡುತ್ತಾರೆ. ನಮ್ಮ ರೈತರು ಒಂದು ಬೆಳೆಯನ್ನೂ ಬೆಳೆಯಲಾಗಿಲ್ಲ. ಸಂಕಷ್ಟ ಸೂತ್ರ ರಚನೆ, ರೈತರ ಹಿತ ಕಾಪಾಡುವ ನಾನು ನೀಡಿದ ಯಾವುದೇ ಸಲಹೆಯನ್ನೂ ಕಾರ್ಯರೂಪಕ್ಕೆ ತಂದಿಲ್ಲ. ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದನ್ನು ಪ್ರತಿಭಟಿಸಿ ಮಂಡ್ಯ ಜಿಲ್ಲೆಯ ಜನರು ನಡೆಸುತ್ತಿರುವ ಬಂದ್​ಗೆ ತಮ್ಮ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ತಾವು ವಾಪಸ್ಸಾಗಲಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ನೇರವಾಗಿ ಮಂಡ್ಯಕ್ಕೆ ತೆರಳುವುದಾಗಿ ಹೇಳಿದ್ದಾರೆ. ಸರ್ಕಾರದ ತಪ್ಪಿನಿಂದ ರಾಜ್ಯದ ಜನರು ದೊಡ್ಡ ಪ್ರಮಾಣದ ಜಲ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಈಗಾಗಲೇ ಭೀಕರ ಜಲಕ್ಷಾಮದ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಆದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಹೀಗಾಗಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ. ಜನರ ಜತೆ ನಿಲ್ಲುವುದು ನನ್ನ ಕರ್ತವ್ಯ. ಹೀಗಾಗಿ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಗೇಮ್ ಚೇಂಜರ್ ಆಗಲಿದೆ : ಜೆಡಿಎಸ್ ಪಕ್ಷ ಎನ್​ಡಿಎ ಭಾಗವಾಗುವುದರಿಂದ ರಾಜ್ಯದಲ್ಲಿ ರಾಜಕೀಯವಾಗಿ ಗೇಮ್ ಚೇಂಜರ್ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ‌‌. ಚಾಮರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷಗಳು ಒಟ್ಟಿಗೆ ಹೋಗಬೇಕೆನ್ನುವ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ಮಾತುಕತೆಯಾಗಿದೆ. ವರಿಷ್ಠರು ತೆಗೆದುಕೊಂಡ ತೀರ್ಮಾನ ಸ್ವಾಗತಾರ್ಹ ಎಂದು ಹೇಳಿದರು.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಅನಿಷ್ಠ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ವಿರುದ್ದ ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬೇಕು ಎನ್ನುವುದು ಜನರ ಬಯಕೆಯಾಗಿತ್ತು. ಮುಂದಿನ ದಿನಗಳಲ್ಲಿ ಎರಡು ಪಕ್ಷಗಳು ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು. ಮೈತ್ರಿ ಕುರಿತು ಎರಡೂ ಪಕ್ಷಗಳ ಕೆಲವರಲ್ಲಿ ಅಸಮಾಧಾನ ಇದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇದು ಗೇಮ್ ಚೇಂಜರ್ ಆಗುತ್ತದೆ. ಸೀಟು ಹಂಚಿಕೆ ಮುಂದಿನ ದಿನಗಳಲ್ಲಿ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ:BJP-JDS alliance: ಎನ್​ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್​ - ಹೊಸ ರಾಜಕೀಯ ಶಕೆ ಆರಂಭ ಎಂದ ಕುಮಾರಸ್ವಾಮಿ

ABOUT THE AUTHOR

...view details