ಬೆಂಗಳೂರು: ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳನ್ನು ಆಧರಿಸಿ ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಳಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಆದೇಶಿಸಬೇಕು ಎಂದು ಅನಾರೋಗ್ಯಪೀಡಿತ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಆದರೆ, ಕೇಂದ್ರ ಸರ್ಕಾರ 2013ರ ಫೆಬ್ರವರಿ 26ರಂದು ಹೊರಡಿಸಿರುವ ಕಚೇರಿ ಪತ್ರದಂತೆ ಅರ್ಜಿದಾರ ವಿದ್ಯಾರ್ಥಿ ಅಥವಾ ಆತನ ಪರಿಸ್ಥಿತಿಯಲ್ಲಿರುವ ಮಕ್ಕಳು ಪರೀಕ್ಷೆ ಬರೆಯುವಾಗ ನಿಗದಿತ ಸಮಯಕ್ಕಿಂತ 2ಗಂಟೆ ಹೆಚ್ಚುವರಿ ಸಮಯ ನೀಡಬೇಕು ಎಂದಿದೆ. ಹಾಗೆಯೇ, ವಿದ್ಯಾರ್ಥಿಯ ಅಂಗವೈಕಲ್ಯದ ಪ್ರಮಾಣ ಪರಿಗಣಿಸಿ ಹೆಚ್ಚುವರಿ ಸಮಯ ಮಂಜೂರು ಮಾಡುವುದು ಪ್ರಾಧಿಕಾರಗಳ ವಿವೇಚನೆಗೆ ಬಿಟ್ಟಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಗೊಳಿಸಲು ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಿಸಬೇಕು ಎಂದು ಕೋರಿ ಮೂಳೆ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನಗರದ ಹತ್ತನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಈ ನಿರ್ದೇಶನಗಳನ್ನು ನೀಡಿದೆ.