ಕರ್ನಾಟಕ

karnataka

ನಿರ್ದೇಶಕ ಸ್ಥಾನದಿಂದ ಪ್ರೊಪೆಸರ್​ ಹುದ್ದೆಗೆ ಮುಂದುವರಿಕೆ: ಈ ಬಗ್ಗೆ ಸಲ್ಲಿಕೆಯಾದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

By ETV Bharat Karnataka Team

Published : Nov 6, 2023, 8:58 PM IST

ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿ ಪ್ರೊಪೆಸರ್​ ಸ್ಥಾನಕ್ಕೆ ಮುಂದುವರೆಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಪ್ರೊಫೆಸರ್​ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಪ್ರೊಫೆಸರ್​ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಪ್ರೊಫೆಸರ್‌ ಸ್ಥಾನಕ್ಕೆ ಮುಂದುವರೆಸಿದ ಕ್ರಮ ಪ್ರಶ್ನಿಸಿ ಡಾ.ಉದಯ್ ಮುಳುಗುಂದ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ರದ್ದುಪಡಿಸಿದೆ. ಡಾ.ಉದಯ್ ಮುಳಗುಂದ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಯಾವುದೇ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಡೀನ್ ಕಮ್ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡುವಾಗ ಯಾವುದೇ ಸಂದರ್ಭದಲ್ಲೂ ಅರ್ಹತೆಗಳನ್ನು ಗಾಳಿಗೆ ತೂರುವಂತಿಲ್ಲ ಎಂದು ಆದೇಶ ನೀಡಿದೆ.

ಅಲ್ಲದೇ, ವೈದ್ಯಕೀಯ ಸಂಸ್ಥೆಗೆ ನಿರ್ದೇಶಕರನ್ನು ನೇಮಕ ಮಾಡುವಾಗ ಅರ್ಹತೆಯಲ್ಲಿ ರಾಜೀ ಮಾಡಿಕೊಳ್ಳಲಾಗದು ಎಂದು ತಿಳಿಸಿದೆ. ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಯಮ ಮತ್ತು ನಿಬಂಧನೆಗಳು 2017ರ ಪ್ರಕಾರ ಸೇವಾ ಷರತ್ತು ಅಥವಾ ನೇಮಕ ನಿಯಮಗಳನ್ನು ಪಾಲನೆ ಮಾಡಿಯೇ ಸರ್ಕಾರ ಆದೇಶಿಸಿದೆ. ಜತೆಗೆ ಭಾರತೀಯ ವೈದ್ಯಕೀಯ ಮಂಡಳಿಯ ನಿಬಂಧನೆಗಳ ಅನ್ವಯ ನಿರ್ದೇಶಕ ಸ್ಥಾನಕ್ಕೆ ಕನಿಷ್ಠ ಅರ್ಹತೆಗಳನ್ನು ಆಧರಿಸಿಯೇ ಮಾಡಬೇಕು. ಅದರಂತೆ ಹೊಸ ನೇಮಕಾತಿ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ನಿಯಮದಂತೆ ನಿರ್ದೇಶಕ ಸ್ಥಾನಕ್ಕೆ ಪ್ರೊಫೆಸರ್ ಆಗಿ ಐದು ವರ್ಷ ಪೂರೈಸಿರುವ ಅರ್ಹತೆ ಇರಬೇಕಾಗಿತ್ತು. ಆದರೆ ಆ ಅರ್ಹತೆ ಅರ್ಜಿದಾರರಿಗೆ ಇರಲಿಲ್ಲ. ಅವರು ಪ್ರೊಫೆಸರ್ ಆಗಿದ್ದೇ 2019ರಲ್ಲಿ, ಹಾಗಾಗಿ ಅವರು ನಿರ್ದೇಶಕ ಸ್ಥಾನಕ್ಕೆ ಅರ್ಹರಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರಿಗೆ 2019ರಲ್ಲಿ ಪ್ರೊಫೆಸರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಅವರು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಮೂರು ವರ್ಷ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ನಂತರ, ಅವರನ್ನು ಹಾವೇರಿಯಲ್ಲಿ ಹೊಸದಾಗಿ ಆರಂಭವಾಗಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆನಂತರ 2022ರ ಜು.12ರಂದು ನಾಲ್ಕು ವರ್ಷಗಳ ಅವಧಿಗೆ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಆದರೆ ಅದಕ್ಕೂ ಮುನ್ನವೇ 2023ರ ಸೆ.12ರಂದು ವೈದ್ಯಕೀಯ ನಿರ್ದೇಶನಾಲಯ ಎಂ.ವಿ. ಪ್ರದೀಪ್ ಕುಮಾರ್ ಅವರನ್ನು ಹಾವೇರಿ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರನ್ನಾಗಿ ನೇಮಕ ಮಾಡಿ, ಉದಯ್ ಮುಳಗುಂದ್ ಅವರನ್ನು ಮತ್ತೆ ಹುಬ್ಬಳ್ಳಿಯ ಪ್ರೊಫೆಸರ್ ಹುದ್ದೆಗೆ ವಾಪಸ್ ಕಳುಹಿಸಿತ್ತು.

ಅರ್ಜಿದಾರರು, ತನಗೆ ನಿರ್ದೇಶಕ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆಗಳಿವೆ. ನೇರ ನೇಮಕಾತಿಗೆ ಮಾತ್ರ ನಿಗದಿತ ಮಾನದಂಡಗಳನ್ನು ಪಾಲಿಸಬೇಕು. ಆದರೆ, ಸರ್ಕಾರ ಮಾಡುವ ನೇಮಕಗಳಿಗೆ ಅದು ಅನ್ವಯವಾಗುವುದಿಲ್ಲ. ತಾವು ನಾಲ್ಕು ವರ್ಷ ಮತ್ತು ಆನಂತರ ಮುಂದಿನ ಆದೇಶದವರೆಗೆ ಎಂದು ತಮ್ಮನ್ನು ನೇಮಕ ಮಾಡಿ ಅವಧಿಗೂ ಮುನ್ನವೇ ಆ ಸ್ಥಾನದಿಂದ ಪದಚ್ಯುತಿಗೊಳಿಸಿರುವುದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ:ಸಾರ್ವಜನಿಕ ಹಿತಾಸಕ್ತಿಯ ಕುಟುಕು ಕಾರ್ಯಾಚರಣೆಗೆ ಹೈಕೋರ್ಟ್ ಸಮ್ಮತಿ

ABOUT THE AUTHOR

...view details