ಕರ್ನಾಟಕ

karnataka

ETV Bharat / state

ಪಂಚಮಸಾಲಿ ಲಿಂಗಾಯತ, ಕುರುಬ ಸಮುದಾಯದ ಬೇಡಿಕೆ... ಬಿಜೆಪಿಗೆ ಆತಂಕ? - ಕುರುಬ ಸಮುದಾಯ ಹೋರಾಟ

ತಮ್ಮನ್ನು 2 ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಪಂಚಮಸಾಲಿ ಲಿಂಗಾಯತರು ಬೇಡಿಕೆ ಮುಂದಿಟ್ಟು ಹೋರಾಡುತ್ತಿದ್ದರೆ, ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮುದಾಯ ಹೋರಾಟ ಮಾಡುತ್ತಿದೆ.

Has reservation demand created anxiety around BJP
ಬಿಜೆಪಿ ಸುತ್ತಾ ಆತಂಕ ಸೃಷ್ಟಿಸಿದೆಯೇ ಪಂಚಮಸಾಲಿ ಲಿಂಗಾಯತ

By

Published : Oct 18, 2022, 9:22 PM IST

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಹೆಚ್ಚಳ ಮಾಡಿದ ಬಿಜೆಪಿ ಸರ್ಕಾರದ ಸುತ್ತ ಇದೀಗ ಪಂಚಮಸಾಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಬೇಡಿಕೆ ಆತಂಕ ಸೃಷ್ಟಿಸತೊಡಗಿದೆ. ನ್ಯಾ.ನಾಗಮೋಹನದಾಸ್ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇನೋ ಆಯಿತು. ಈಗ ಅವರ ಬೇಡಿಕೆ ಈಡೇರಿಸಿ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಪಂಚಮಸಾಲಿ ಲಿಂಗಾಯತರು ಮತ್ತು ಕುರುಬರು ಆಕ್ರೋಶಗೊಳ್ಳುತ್ತಾರೆ ಎಂಬ ವರದಿ ಬಿಜೆಪಿಗೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತಮ್ಮನ್ನು 2 ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಪಂಚಮಸಾಲಿ ಲಿಂಗಾಯತರು ಬೇಡಿಕೆ ಮುಂದಿಟ್ಟು ಹೋರಾಡುತ್ತಿದ್ದರೆ, ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮುದಾಯ ಹೋರಾಟ ಮಾಡುತ್ತಿದೆ. ಈ ಪೈಕಿ ಪಂಚಮಸಾಲಿ ಲಿಂಗಾಯತರ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ನಲವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷಕ್ಕೆ ದೊಡ್ಡ ಘಾಸಿಯಾಗಲಿದೆ ಎಂಬುದು ಈಗ ಬಿಜೆಪಿಗೆ ತಲುಪಿರುವ ವರದಿ. ಆದರೆ ಈ ವಿಷಯ ಬಿಜೆಪಿಗೆ ಎರಡು ಕಡೆಯಿಂದ ತಲೆಬಿಸಿ ತರುತ್ತಿದ್ದು, ಪಂಚಮಸಾಲಿ ಲಿಂಗಾಯತರ ಬೇಡಿಕೆಯನ್ನು ಒಪ್ಪದಿದ್ದರೂ ಕಷ್ಟ. ಒಪ್ಪಿದರೂ ಕಷ್ಟ ಎಂಬಂತಿದೆ.

ಯಾಕೆಂದರೆ ಪಂಚಮಸಾಲಿ ಲಿಂಗಾಯತರನ್ನು ಹಿಂದುಳಿದ ಪ್ರವರ್ಗ 2ಎ ಗೆ ಸೇರಿಸಿದರೆ ಈಗ ಆ ಪ್ರವರ್ಗದಲ್ಲಿರುವವರು ತಮಗೆ ಸಿಗುವ ಮೀಸಲಾತಿಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ಬೀದಿಗಿಳಿಯುತ್ತಾರೆ. ಇನ್ನು ಕುರುಬ ಸಮುದಾಯದ ಬೇಡಿಕೆ ವಿಷಯವೂ ಬಿಜೆಪಿ ಪಾಲಿಗೆ ತಲೆನೋವಾಗಿದ್ದು, ಈ ಬೇಡಿಕೆಯನ್ನು ಒಪ್ಪಿದರೂ ಕಷ್ಟ, ಒಪ್ಪದಿದ್ದರೂ ಕಷ್ಟ ಎಂಬುದು ಅದರ ಯೋಚನೆ.

ಒಂದು ವೇಳೆ ಒಪ್ಪದೆ ಇದ್ದರೆ ಕುರುಬ ಸಮುದಾಯವನ್ನು ಬಿಜೆಪಿ ಕಡೆ ಸೆಳೆಯಬೇಕು. ಆ ಮೂಲಕ ಪ್ರತಿ ವಿಧಾನಸಭಾ ಚುನಾವಣೆಯ ನಂತರ ಎದುರಿಸುತ್ತಿರುವ ಬಹುಮತದ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಶುರುವಿನಲ್ಲಿ ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆದರೆ ಅವರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ಈಗಷ್ಟೇ ಮೀಸಲಾತಿ ಹೆಚ್ಚಳದಿಂದ ಸಮಾಧಾನಗೊಂಡಿರುವ ಪರಿಶಿಷ್ಟ ಪಂಗಡದಲ್ಲಿ ಆಕ್ರೋಶ ಕಾಣಿಸಿಕೊಳ್ಳಬಹುದು.

ರಾಜ್ಯದ ಶೇ 7ರಷ್ಟು ಜನಸಂಖ್ಯೆ ಇರುವ ತಮಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವುದು ನ್ಯಾಯ. ಆದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳಗೊಳಿಸಿ, ಶೇ 8ರಷ್ಟಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ಈಗಿರುವವರಿಗೆ ಅನ್ಯಾಯವಾಗುತ್ತದೆ. ಆಗ ಶೇ.15ರಷ್ಟು ಜನ ಶೇ.7ರಷ್ಟು ಮೀಸಲಾತಿಗಾಗಿ ಪೈಪೋಟಿ ನಡೆಸಬೇಕಾಗುತ್ತದೆ.

ಇದು ಯಾವ ದೃಷ್ಟಿಯಿಂದಲೂ ಸಮರ್ಪಕವಲ್ಲ ಎಂಬುದು ಪರಿಶಿಷ್ಟ ಪಂಗಡದ ವಾದವಾಗಿದ್ದರೆ, ಈ ಪಟ್ಟಿಗೆ ತಮ್ಮನ್ನು ಸೇರಿಸಲೇಬೇಕು ಎಂದು ಬಿಗಿ ಪಟ್ಟು ಹಾಕಿರುವ ಕುರುಬ ಸಮುದಾಯ, ತನ್ನ ಬೇಡಿಕೆ ಈಡೇರದಿದ್ದರೆ ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಬಹುದು. ಹೀಗಾಗಿ ಯಾವ ದೃಷ್ಟಿಯಿಂದ ನೋಡಿದರೂ ಪಂಚಮಸಾಲಿ ಲಿಂಗಾಯತ ಮತ್ತು ಕುರುಬರ ಬೇಡಿಕೆ ಬಿಜೆಪಿ ಪಾಲಿಗೆ ತಲೆಬಿಸಿಯಾಗಿದ್ದು, ಇದನ್ನು ನಿಭಾಯಿಸುವುದು ಹೇಗೆ? ಎಂಬ ಗೊಂದಲದಲ್ಲಿ ಸರ್ಕಾರ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಬೇರೆ ಸಮುದಾಯಕ್ಕೆ ಅನ್ಯಾಯವಾಗದಂತೆ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕು: ಸಿ ಟಿ ರವಿ

ABOUT THE AUTHOR

...view details