ಕರ್ನಾಟಕ

karnataka

By

Published : Aug 3, 2023, 9:55 PM IST

ETV Bharat / state

ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗೆ ಅರ್ಧದಷ್ಟು ಅನುದಾನ ಬಿಡುಗಡೆ ಮಾಡಿಲ್ಲ: ಸಚಿವ ರಾಮಲಿಂಗಾ ರೆಡ್ಡಿ

ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗೆ ವೆಚ್ಚದ ಅರ್ಧದಷ್ಟು ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

half-grant-not-released-to-road-transport-corporation-minister-ramalinga-reddy
ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗೆ ಅರ್ಧದಷ್ಟು ಅನುದಾನ ಬಿಡುಗಡೆ ಮಾಡಿಲ್ಲ: ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗೆ ಅರ್ಧದಷ್ಟು ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಅವರು ಬುಧವಾರ ಸಾರಿಗೆ ಸಿಬ್ಬಂದಿಗಳಿಗೆ ಅರ್ಧ ವೇತನ ಪಾವತಿ ಎಂದು ಹೇಳಿದ್ದರು, ಇಂದು ಅರ್ಧದಷ್ಟು ಅನುದಾನ ಎಂದು ಹೇಳುತ್ತಿರುವಿರಿ. ಸಾರಿಗೆ ಇಲಾಖೆ ಆದೇಶದಲ್ಲಿ Ad-hoc ಆಧಾರದಲ್ಲಿ ಎಂದು ನಮೂದಿಸಲಾಗಿದ್ದು, ಎಲ್ಲಿಯೂ ಕೂಡ ಅರ್ಧದಷ್ಟು ಅನುದಾನ ಮಂಜೂರು ಎಂದು ನಮೂದಾಗಿಲ್ಲ. ತಾವು ಆದೇಶದ‌ ಪ್ರತಿಯನ್ನು ಮತ್ತೊಮ್ಮೆ ಅವಗಾಹಿಸುವುದು ಒಳ್ಳೆಯದು ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಆಡಳಿತದ ಅವಧಿಯಲ್ಲಿ, ಸಾರಿಗೆ ಸಿಬ್ಬಂದಿಗಳಿಗೆ ತಿಂಗಳ ವೇತನವನ್ನು ಜೂ.25ನೇ ದಿನಾಂಕದವರೆಗೂ ಹಾಗೂ ಈ ತಿಂಗಳ ವೇತನವನ್ನು ಮುಂದಿನ ತಿಂಗಳು ನೀಡಿರುವಂತಹ ಉದಾಹರಣೆಗಳು ಸಹ ಇವೆ. ತಾವು ಸಾರಿಗೆ ಸಿಬ್ಬಂದಿಗಳೆಡೆಗೆ ತೋರಿದ ಕಾಳಜಿಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ ಎಂದು ಟೀಕಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗದೇ,‌ ನಮ್ಮ ಅವಧಿಯಲ್ಲಿ ಸೇರ್ಪಡೆಗೊಂಡ ಬಸ್ಸುಗಳನ್ನೇ ಕಾರ್ಯಾಚರಣೆ ಮಾಡಿದ್ದೀರಿ. ತಮ್ಮ ಅವಧಿಯಲ್ಲಿ‌ ಒಂದೇ ಒಂದು ನೇಮಕಾತಿ ಆಗಿಲ್ಲ. 16,000 ಸಿಬ್ಬಂದಿಗಳ ಕೊರತೆಯನ್ನು ಸಾರಿಗೆ ಸಂಸ್ಥೆಗಳು ಅನುಭವಿಸುತ್ತಿದ್ದು, ನಾವು 13,000 ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ತಮ್ಮ ಅವಧಿಯಲ್ಲಿ ಬಿಎಂಟಿಸಿ‌ ಹೊರತುಪಡಿಸಿ, ಇತರೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ. 2022-2023ರ ಆರ್ಥಿಕ ವರ್ಷದ ಅವಧಿಗೆ ನಾಲ್ಕೂ ಸಾರಿಗೆ ಸಂಸ್ಥೆಗಳ ಸಾರಿಗೆ ಆದಾಯದ ಮೇಲಿನ ನಷ್ಟ ರೂ. 4330.41 ಕೋಟಿ ಇತ್ತು. ಇದು ತಮ್ಮ ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ :ಇದಕ್ಕೂ ಮುನ್ನ ಟ್ವೀಟ್​ ಮಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿಯವರೇ, ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ನಿಗಮದ ಬಸ್​ಗಳಲ್ಲಿ ಜೂನ್ ತಿಂಗಳಲ್ಲಿ 20 ದಿನ ಉಚಿತ ಪ್ರಯಾಣ ಮಾಡಿರುವುದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ 250 ಕೋಟಿ ರೂ. ವೆಚ್ಚವಾಗಿದೆ. ಈ ಪ್ರಯಾಣ ವೆಚ್ಚದ ಮರು ಪಾವತಿ ಮಾಡಲು ನಾಲ್ಕೂ ನಿಗಮಗಳಿಗೆ ಆಗಸ್ಟ್ 1 ರಂದು 125 ಕೋಟಿ ಬಿಡುಗಡೆ ಮಾಡಿ ನಿಮ್ಮದೇ ಇಲಾಖೆ ಆದೇಶ ಮಾಡಿದೆ.

ಸಾರಿಗೆ ನಿಗಮಗಳ ಬೇಡಿಕೆಗೂ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಕ್ಕೂ ಅರ್ಧದಷ್ಟು ಕಡಿಮೆ ಇದ್ದು, ಹೀಗಿರುವಾಗ ಮೊದಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ನಿಗಮಗಳಿಗೆ ಸಿಬ್ಬಂದಿ ಸಂಬಳ, ಬಸ್​ಗಳ ನಿರ್ವಹಣೆ, ಡಿಸೇಲ್​​ಗೆ ಹಣದ ಕೊರತೆಯಾಗುವುದು ವಾಸ್ತವಿಕ ಸತ್ಯ. ನಿಮ್ಮ ಇಲಾಖೆಯ ಆದೇಶ ನೋಡಿಯೇ ರಾಜ್ಯದ ಜನತೆಗೆ ಸತ್ಯ ಹೇಳುವ ಕೆಲಸ ಮಾಡಿದ್ದೇನೆ. ಜನರ ದಾರಿ ತಪ್ಪಿಸಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ :ದಲಿತ ವರ್ಗಕ್ಕೆ ಮೀಸಲಿಟ್ಟಿದ್ದ 11,130 ಕೋಟಿ ಗ್ಯಾರಂಟಿಗಳಿಗೆ ವಿನಿಯೋಜನೆ: ಪುರುಷೋತ್ತಮ್

ABOUT THE AUTHOR

...view details