ಕರ್ನಾಟಕ

karnataka

By

Published : Aug 26, 2020, 2:38 PM IST

Updated : Aug 26, 2020, 10:27 PM IST

ETV Bharat / state

ಟಿಪ್ಪುಗೆ ಬಹುಪರಾಕ್​ ಹೇಳಿದ ಹೆಚ್.ವಿಶ್ವನಾಥ್​: ಮೈಸೂರು ಹುಲಿ ಈ ನೆಲದ‌ ಮಗ ಎಂದ ಹಳ್ಳಿ ಹಕ್ಕಿ!

ಟಿಪ್ಪು ಸುಲ್ತಾನ್​ ಈ ನೆಲದ ಮಗ, ಗಾಂಧೀಜಿಯಿಂದ ಹಿಡಿದು ಟಿಪ್ಪು ತನಕ ವಿದ್ಯಾರ್ಥಿಗಳು ಎಲ್ಲವನ್ನೂ ಓದಬೇಕೆಂದು ವಿಧಾನ ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

H vishwanath talks about tipu sultan
ಹೆಚ್.ವಿಶ್ವನಾಥ್

ಬೆಂಗಳೂರು: ವಿಧಾನ ಪರಿಷತ್​ ಸದಸ್ಯ ಹೆಚ್. ವಿಶ್ವನಾಥ್ ಅವರು ಟಿಪ್ಪು ಸುಲ್ತಾನ್​ನನ್ನು ಹೊಗಳುವ ಮೂಲಕ ಬಿಜೆಪಿ ನಿಲುವಿಗೆ ಬಿಸಿ ತುಪ್ಪದಂತಾಗಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಟಿಪ್ಪು ಈ ನೆಲದ ಮಗ, ಗಾಂಧೀಜಿಯಿಂದ ಹಿಡಿದು ಟಿಪ್ಪು ತನಕ ವಿದ್ಯಾರ್ಥಿಗಳು ಎಲ್ಲವನ್ನೂ ಓದಬೇಕು ಎಂದು ತಿಳಿಸಿದರು. ನಿಮ್ಮ ಪಕ್ಷದವರು ಟಿಪ್ಪು ವಿರೋಧಿಗಳು ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೆಲ್ಲ ಹೇಳಬಾರದು. ಟಿಪ್ಪು ಈ ನೆಲದ ಮಗ. ವೀರ ಹೋರಾಟಗಾರ ಎಂದು ಬಣ್ಣಿಸಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವ ಹೋರಾಟದ ಬಗ್ಗೆ ಮಾತಾಡುವಾಗ ಟಿಪ್ಪು ಹೊಗಳಿದ ವಿಶ್ವನಾಥ್, ಸಂಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಹೋರಾಡಿದ ಕಮಾಂಡರ್ ಇನ್ ಚೀಫ್. ಅದೇ ರೀತಿ ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಕೂಡ. ಇವರು ಸ್ವಾತಂತ್ರ್ಯದ ಕಹಳೆ ಊದಿದವರು ಎಂದು ಹೊಗಳಿದರು. ಟಿಪ್ಪು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ. ಪಠ್ಯದಲ್ಲಿ ಟಿಪ್ಪು ಪಾಠ ಕೈಬಿಟ್ಟಿಲ್ಲ. ಐದನೇ ತರಗತಿಯಿಂದ ಏಳನೇ ತರಗತಿಗೆ ಹಾಕಿದ್ದಾರೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಸಚಿವ ಸ್ಥಾನಕ್ಕೆ ಪರೋಕ್ಷ ಬೇಡಿಕೆ:ಸಚಿವ ಸ್ಥಾನಕ್ಕೆ ‌ಮತ್ತೊಮ್ಮೆ ಪರೋಕ್ಷವಾಗಿ ಹೆಚ್.ವಿಶ್ವನಾಥ್ ಬೇಡಿಕೆ ಇಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ನಾನು ಸಿಎಂ ಮುಂದೆ ಬೇಡಿಕೆ ಇಟ್ಟಿಲ್ಲ. ಅವರೇ ತಿಳಿದು ಸಚಿವ ಸ್ಥಾನ ಕೊಡಬೇಕು. ನಾನು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ. 1978ರಲ್ಲೇ ನಾನು ರಾಜಕೀಯ ಪ್ರವೇಶ ಮಾಡಿದವನು. ನನಗೆ ಸುದೀರ್ಘ ಆಡಳಿತದ ಅನುಭವ ಇದೆ. ಈ‌ ಅನುಭವವನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಹೆಚ್.ವಿಶ್ವನಾಥ್, ಮಾಜಿ ಸಚಿವ

ಸಚಿವನಾಗಬೇಕೆಂದು ನಾವು ಬಿಜೆಪಿಗೆ ಬೆಂಬಲ ಕೊಟ್ಟಿಲ್ಲ. ಉತ್ತಮ ಬದಲಾವಣೆಗಾಗಿ ಬೆಂಬಲ ನೀಡಿದ್ದೇವೆ. ರಾಜ್ಯದಲ್ಲಿ ನಾಲಿಗೆ ಮೇಲೆ ನಿಂತ ನಾಯಕನೆಂದರೆ ಅದು ಬಿಎಸ್​ವೈ. ಅವರು ಕೊಟ್ಟ ಮಾತು ತಪ್ಪಲ್ಲ ಎಂಬ ನಂಬಿಕೆ ಇದೆ. ಯಡಿಯೂರಪ್ಪ ಸಿಎಂ ಆಗುವುದಕ್ಕೆ ನನ್ನ ಪಾತ್ರವೂ ಇದೆ ಎಂದು ತಿಳಿಸಿದರು.

ಸಿದ್ದರಾಮಯ್ಯ, ಹೆಚ್​ಡಿಕೆಗೆ ಟಾಂಗ್: ಬಿಜೆಪಿ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್​ ವಿಶ್ವನಾಥ್​, ಆ ವಿಚಾರ ಸೋನೆ ಮಳೆ ಇದ್ದ ಹಾಗೆ ಎಂದರು. ಪದೇ‌ ಪದೆ ಬರುತ್ತಾ ಇರುತ್ತೆ, ಹೋಗ್ತಾ ಇರುತ್ತೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್​ಡಿಕೆ ಅವರಿಗೆ ಈಗ ಏನು ಕೆಲಸ ಇಲ್ಲ. ಅದಕ್ಕೆ ಈ ರೀತಿಯ ಹೇಳಿಕೆ ಕೊಡ್ತಾ ಇರುತ್ತಾರೆ. ಅದಕ್ಕೆ ಬೆಲೆ ಕೊಡುವ ಅಗತ್ಯ ಇಲ್ಲವೆಂದು ಟಾಂಗ್ ನೀಡಿದರು.

ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್​ನಲ್ಲಿದ್ದಾಗಲೇ ಈ ಬಗ್ಗೆ ಮಾತನಾಡಿದ್ದೆ. ರಾಹುಲ್ ಗಾಂಧಿ ಬದಲಾಗಿ ಪ್ರಿಯಾಂಕ ಗಾಂಧಿಗೆ ನಾಯಕತ್ವ ನೀಡುವಂತೆ ಸಲಹೆ ನೀಡಿದ್ದೆ. ಅತ್ಯಂತ ದೊಡ್ಡ ಗಣತಂತ್ರ ರಾಷ್ಟ್ರ ಭಾರತ. ಈ ದೇಶದ ರಾಷ್ಟ್ರೀಯ ಪಕ್ಷದ ನಾಯಕನಾಗುವ ಸಾಮರ್ಥ್ಯ ರಾಹುಲ್ ಗೆ ಇಲ್ಲ. ಪ್ರಿಯಾಂಕ ಗಾಂಧಿಗೆ ಕೊಡುವುದು ಒಳಿತು ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ರಾಯಣ್ಣ ಪ್ರತಿಮೆ ಆಗಲೇಬೇಕು:ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಆಗಲೇಬೇಕು ಎಂದು ಒತ್ತಾಯಿಸಿದರು. ರಾಯಣ್ಣ ಸ್ವಾತಂತ್ರ್ಯಕ್ಕೆ ಹೋರಾಡಿದ ಅಪ್ರತಿಮ ವೀರ. ಅವರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅವರ ಪ್ರತಿಮೆ ಸ್ಥಾಪಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

Last Updated : Aug 26, 2020, 10:27 PM IST

ABOUT THE AUTHOR

...view details