ಬೆಂಗಳೂರು :ಬೇರೆ ರಾಷ್ಟ್ರಗಳಲ್ಲಿ 10 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲು 114 ನ್ಯಾಯಾಲಯಗಳು ಇವೆ. ಆದರೆ, ದೇಶದಲ್ಲಿ ಕೇವಲ 13 ನ್ಯಾಯಾಲಯಗಳು ಇವೆ. ಹಾಗಾಗಿ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಕಷ್ಟಕರವಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ (H. Shashidhar Shetty) ತಿಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿ(Bangalore university law college)ನಲ್ಲಿಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ 'ಕಾನೂನು ಅರಿವು' ದಿನವನ್ನ ಆಚರಿಸಲಾಯ್ತು. ಈ ವೇಳೆ ಕಾನೂನು ಸೇವೆ ಸ್ವಯಂಸೇವಕರ ತರಬೇತಿ ಕಾರ್ಯಕ್ರಮ ಹಾಗೂ ಉಚಿತ ಕಾನೂನು ನೆರವು ಅರಿವಿನ ಬೈಕ್ ರ್ಯಾಲಿ ಜಾಥಾವನ್ನು ಅವರು ಉದ್ಘಾಟಿಸಿದರು.
ನಂತರ ಈ ಕುರಿತು ಮಾತನಾಡಿದ ಅವರು, ರಾಜಿ ಸಂಧಾನಗಳ ಮೂಲಕ, ಕಾನೂನು ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ, ಉಚಿತ ಕಾನೂನು ಅರಿವು ನೆರವುಗಳ ಬಗ್ಗೆ ಜನಜಾಗೃತಿಯನ್ನು ವಹಿಸಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.