ಬೆಂಗಳೂರು: ನೆರೆ ರಾಜ್ಯಗಳ ಜೊತೆ ನೀರಿಗಾಗಿ ಗುದ್ದಾಡುವ ಸರ್ಕಾರಕ್ಕೆ ಮಳೆ ನೀರಿನ ಬಗ್ಗೆ ಕನಿಷ್ಠ ಪ್ರಜ್ಞೆಯೂ ಇಲ್ಲ. ಬದಲಿಗೆ ಬೆಂಗಳೂರಿನ ವಿಷತ್ಯಾಜ್ಯ ನೀರನ್ನು ಅರೆಬರೆ ಸಂಸ್ಕರಿಸಿ ಹರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಭವಿಷ್ಯದಲ್ಲಿ ರಾಜ್ಯದ ಅತಿದೊಡ್ಡ 'ಅನಾರೋಗ್ಯ ಕೂಪ'ವನ್ನಾಗಿ ಮಾಡಲು ಸರ್ಕಾರ ಹೊರಟಂತಿದೆ. ಇದರಲ್ಲಿ ಈ ಜಿಲ್ಲೆಯ ಸ್ವಯಂಘೋಷಿತ ಭಗೀರಥರ ಹುನ್ನಾರವೂ ಇದೆ ಎಂದು ಕಿಡಿಕಾರಿದ್ದಾರೆ.
ಜನವಿರೋಧಿ ಸರ್ಕಾರಗಳಿಂದ ಹಣ ಲೂಟಿ:ಕೆಲ ವರ್ಷದಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಸಮೃದ್ಧ ಮಳೆ ಆಗುತ್ತಿದೆ. ಕೆರೆಗಳಲ್ಲಿ ಮಳೆನೀರು ನಿಲ್ಲದೆ, ಪಕ್ಕದ ಆಂಧ್ರ, ತಮಿಳುನಾಡು ಪಾಲಾಗುತ್ತಿದೆ. ಗುತ್ತಿಗೆದಾರರ ಜೇಬು ತುಂಬಿಸಲು ರಾಷ್ಟ್ರೀಯ ಪಕ್ಷಗಳ ಜನವಿರೋಧಿ ಸರ್ಕಾರಗಳು ಕೆಸಿ ವ್ಯಾಲಿ, ಎಚ್ ಎನ್ ವ್ಯಾಲಿಯಂಥ ಕೆಟ್ಟ ಯೋಜನೆಗಳನ್ನು ರೂಪಿಸಿ ಹಣ ಲೂಟಿ ಹೊಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಕೆರೆಕಟ್ಟೆ, ಕಾಲುವೆ, ಗೋಕುಂಟೆಗಳಂಥ ಸಾಂಪ್ರದಾಯಿಕ ಜಲಮೂಲಗಳನ್ನು ನಾಶಗೊಳಿಸಿ ಕಾಗದದ ಮೇಲಷ್ಟೇ ಬಣ್ಣಬಣ್ಣವಾಗಿ ಕಾಣುವ, ದುಡ್ಡು ಹೊಡೆಯುವ ಯೋಜನೆಗಳು ಇನ್ನಾದರೂ ನಿಲ್ಲಲಿ. ಈ ಜಿಲ್ಲೆಗಳನ್ನು ಶಾಶ್ವತ ಮರುಭೂಮಿ ಮಾಡುವುದು ಬೇಡ. ಮಳೆ ನೀರನ್ನು ಸದ್ಬಳಕೆ ಮಾಡಿಕೊಂಡರೆ ಬರಪೀಡಿತ ಜಿಲ್ಲೆಗಳ ಬವಣೆ ನೀಗುತ್ತದೆ ಎಂದು ಹೆಚ್ಡಿಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:'ನನ್ನ ಕೈ ಹಿಡಿದು ಕೈ ಎತ್ತಿರಲಿಲ್ಲವೇ?': ಸಿದ್ದರಾಮಯ್ಯ- ಡಿಕೆಶಿ ಒಗ್ಗಟ್ಟು ಪ್ರದರ್ಶನಕ್ಕೆ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ