ಬೆಂಗಳೂರು:ಅಬಕಾರಿ ಇಲಾಖೆಯ ಮರುವಿನ್ಯಾಸ, ವರ್ಗಾವಣೆ ಆದೇಶ ಬಳಿಕದ ಆದೇಶ ರದ್ಧತಿ ಮೇಲೆ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಅಬಕಾರಿ ಇಲಾಖೆಯ ಮರುವಿನ್ಯಾಸ, ವರ್ಗಾವಣೆ ಆದೇಶ ಮಾಜಿ ಸಿಎಂ ಕುಮಾರಸ್ವಾಮಿ ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆ ಮತ್ತು ವರ್ಗಾವಣೆ ಆದೇಶ ರದ್ಧತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಲಂಚದ ಆರೋಪ ಮಾಡಿದ್ದಾರೆ. ಮೇ 8ರಂದು ಅಬಕಾರಿ ಇಲಾಖೆ ಆಯಕ್ತರು ಇಲಾಖೆಯ ಮರುವಿನ್ಯಾಸ ಹಿನ್ನೆಲೆ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಇನ್ನು ಕೆಲ ವೃಂದದ ಅಧಿಕಾರಿಗಳ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು. ಆದರೆ ಮೇ 9ಕ್ಕೆ ಆ ವರ್ಗಾವಣೆ ಆದೇಶವನ್ನು ತಡೆ ಹಿಡಿದು ಅಬಕಾರಿ ಆಯುಕ್ತರು ಮರು ಆದೇಶ ಹೊರಡಿಸಿದ್ದರು. ಈ ವರ್ಗಾವಣೆ ಆದೇಶ ಬಳಿಕ ಒಂದು ದಿನದಲ್ಲೇ ಹಠಾತ್ ತಡೆ ಆದೇಶ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ವರ್ಗಾವಣೆ ಆದೇಶ ಮತ್ತು ಅದರ ರದ್ದತಿ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಏನಿದು ಅಬಕಾರಿ ಇಲಾಖೆಯ ಮರುವಿನ್ಯಾಸ?
2015ರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮಂಜುನಾಥ್ ನಾಯಕ್ ಅಬಕಾರಿ ಇಲಾಖೆಯನ್ನು ಜಿಲ್ಲಾವಾರು ಮರು ಹಂಚಿಕೆ ಹಾಗೂ ಅಬಕಾರಿ ಜಿಲ್ಲೆಗಳ ಮರು ಹಂಚಿಕೆಗೆ ಶಿಫಾರಸು ಮಾಡಿ ವರದಿ ನೀಡಿದ್ದರು.
ಭೌಗೋಳಿಕ ಮತ್ತು ಅಬಕಾರಿ ಚಟುವಟಿಕೆಗಳು ಹಾಗೂ ಸನ್ನದುಗಳ ಸಂಖ್ಯೆಗಳನ್ನು ಆಧರಿಸಿ ವಿಶ್ಲೇಷಣೆ ಮಾಡಿ 48 ವಲಯಗಳ ಪೈಕಿ 38 ವಲಯಗಳಲ್ಲಿ ಕಡಿಮೆ ಕಾರ್ಯ ಹಾಗೂ ಒತ್ತಡವಿದೆ. ಇನ್ನು 10 ವಲಯಗಳಲ್ಲಿ ಅತಿ ಹೆಚ್ಚಿನ ಕಾರ್ಯಭಾರ ಹಾಗೂ ಒತ್ತಡ ಇದ್ದು, ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಅಡಚಣೆ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಅದರಂತೆ ಅಬಕಾರಿ ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ 5 ಉಪ ವಿಭಾಗಗಳನ್ನು 16 ಉಪ ವಿಭಾಗಳನ್ನಾಗಿ ವಿಂಗಡಿಸಲು ಸೂಚಿಸಲಾಗಿತ್ತು. ಜೊತೆಗೆ 48 ವಲಯಗಳನ್ನು 53 ವಲಯಗಳಾಗಿ ಪುನರ್ ವಿಂಗಡೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಜೊತೆಗೆ ರಾಜ್ಯ ಅಬಕಾರಿ ವಿಚಕ್ಷಣಾ ದಳ ರದ್ದುಗೊಳಿಸಿ ವಿಚಕ್ಷಣಾ ದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊಸದಾಗಿ ರಚನೆಯಾಗಿರುವ ವಿಭಾಗ ಕಚೇರಿಗೆ ಮರು ವಿನ್ಯಾಸಗೊಳಿಸಿ ನಿಯುಕ್ತಿಗೊಳಿಸಲಾಗಿತ್ತು. ವಿಚಕ್ಷಣಾ ದಳವನ್ನು ರದ್ದುಗೊಳಿಸಿ ಬೆಂಗಳೂರು ಅಬಕಾರಿ ಉಪ ಆಯುಕ್ತರ ಹುದ್ದೆಗಳನ್ನು ಪುನರ್ ವಿಂಗಡಿಸಿ ಎಲ್ಲಾ 8 ಜಿಲ್ಲೆಗಳಿಗೆ ಸಮಾನವಾಗಿ ಅಧಿಕಾರ ಮತ್ತು ಕಾರ್ಯವ್ಯಾಪ್ತಿ ಹಂಚಿಕೆ ಮಾಡಲಾಗಿತ್ತು.
ಸಿದ್ದರಾಮಯ್ಯ ಸರ್ಕಾರದಿಂದ ಮೈತ್ರಿ ಸರ್ಕಾರದ ಅವಧಿವರೆಗೂ ಅಬಕಾರಿ ಜಿಲ್ಲಾ ಮರು ಹಂಚಿಕೆಗೆ ಕೈ ಹಾಕಿರಲಿಲ್ಲ. ಆದರೆ ಲಾಕ್ಡೌನ್ ಹಿನ್ನೆಲೆ ಮದ್ಯ ಮಾರಾಟ ನಿಷೇಧ ತೆರವುಗೊಳಿಸಿದ ಕೂಡಲೇ ಸರ್ಕಾರ ಮರುವಿನ್ಯಾಸ ಹಾಗೂ ವರ್ಗಾವಣೆ ಆದೇಶ ಹೊರಡಿಸಿತ್ತು.
ಆದೇಶ ರದ್ಧತಿಗೆ ಕಾರಣ ಏನು?:
ಇಲಾಖೆ ಮರುವಿನ್ಯಾಸ ಹಾಗೂ ವಲಯ ಹಂಚಿಕೆ ಹಾಗೂ ವರ್ಗಾವಣೆಯಲ್ಲಿ ತಾರತಮ್ಯ ಮಾಡಾಗಿದೆ ಎಂಬ ಕೂಗು ಇಲಾಖೆಯ ಅಧಿಕಾರಿ ವರ್ಗದಲ್ಲಿ ಕೇಳಿ ಬಂದಿತ್ತು.
ವರ್ಗಾವಣೆ ಹಾಗೂ ವಲಯ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ. ತಾರತಮ್ಯ ಮಾಡಲಾಗಿದೆ ಎಂದು ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿ, ಆದೇಶ ರದ್ದುಗೊಳಿಸುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇದರ ಹಿಂದೆ ರಾಜಕೀಯ ಒತ್ತಡವೂ ಇದೆ ಎಂದು ಹೇಳಲಾಗುತ್ತಿದೆ.