ಬೆಂಗಳೂರು/ಶಿವಮೊಗ್ಗ :ಸಮಾಜವಾದಿ ಚಳವಳಿಯ ಭಾಗವಾಗಿ ರಾಜಕಾರಣ ಪ್ರವೇಶಿದ್ದ ಮಾಜಿ ಸಿಎಂ ಎಸ್.ಬಂಗಾರಪ್ಪನವರ 87ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
ಬಂಗಾರಪ್ಪನವರು ಅಕ್ಷಯ, ಆಶ್ರಯ, ಆರಾಧನದಂತಹ ಜನಪರ ಯೋಜನೆಗಳನ್ನು ತಂದು ಬಡವ ಬಲ್ಲಿದರ ನಡುವಿನ ಅಂತರವನ್ನು ಕಡಿಮೆ ಮಾಡಲು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾವೇರಿ ಹೋರಾಟದ ಸಂದರ್ಭದಲ್ಲಿ ತೋರಿದ ಬದ್ಧತೆ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು.
ಮಾಜಿ ಸಿಎಂ ಎಸ್. ಬಂಗಾರಪ್ಪನವರ ಜನ್ಮದಿನ ಆಚರಣೆ..
ಇನ್ನು, ಶಿವಮೊಗ್ಗದಲ್ಲಿಯೂ ದಿವಂಗತ ಎಸ್.ಬಂಗಾರಪ್ಪನವರ ಹುಟ್ಟು ಹಬ್ಬವನ್ನು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬಂಗಾರಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಜೆಡಿಎಸ್ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚಿದರು.
ಬಂಗಾರಪ್ಪನವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಅಚ್ಚಳಿಯದ ಅಕ್ಷರವಾಗಿ, ತುಂಗಾ, ರೈತರಿಗೆ ಉಚಿತ ವಿದ್ಯುತ್ ಹೀಗೆ ಹಲವು ಯೋಜನೆಗಳನ್ನು ರೂಪಿಸಿ ಮನೆ ಮಾತಾಗಿದ್ದರು. ಇಂತಹ ಅಪರೂಪದ ರಾಜಕಾರಣಿ ಇಹಲೋಕ ತ್ಯಜಿಸಿದ್ದರೂ ಸಹ ಅವರ ಆದರ್ಶ ಇಂದಿಗೂ ನಮಗೆ ದಾರಿದೀಪ ಎಂದು ಜಿಲ್ಲಾ ಯುವ ಜೆಡಿಎಸ್ನ ಅಧ್ಯಕ್ಷ ಜೆ ಡಿ ಮಂಜುನಾಥ್ ಹೇಳಿದರು.ಈ ವೇಳೆ ಜೆಡಿಎಸ್ನ ನರಸಿಂಹ, ಬಸವರಾಜ್ ಸೇರಿ ಇತರರು ಹಾಜರಿದ್ದರು. ಇನ್ನು, ಜಿಲ್ಲಾದ್ಯಾಂತ ಎಸ್.ಬಂಗಾರಪ್ಪನವರ ಅಭಿಮಾನಿಗಳು ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ.