ಕರ್ನಾಟಕ

karnataka

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನ ಚರಿತ್ರೆ ಪುಸ್ತಕ ಬಿಡುಗಡೆಗೆ ಕಾಲ ಸನ್ನಿಹಿತ

By

Published : Nov 11, 2021, 10:42 PM IST

1994ರಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಸಲುವಾಗಿ ಹೆಚ್​.ಡಿ.ದೇವೇಗೌಡ (H.D.Devegowda)ರು ಸುದೀರ್ಘ ಕಾಲಗಳ ಹೋರಾಟ ನಡೆಸಿದ್ದರು. ರಾಜಕೀಯದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದ ದೇವೇಗೌಡರಿಗೆ ಪ್ರಧಾನಿ ಹುದ್ದೆ ಅರಸಿ ಬಂದಿತ್ತು.

h-d-devegowda
ಹೆಚ್. ಡಿ ದೇವೇಗೌಡರು

ಬೆಂಗಳೂರು: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಜೀವನ ಚರಿತ್ರೆ ಪುಸ್ತಕ (H.D.Deve Gowda Biography Book) ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ.

ಸಾಮಾನ್ಯ ಹಳ್ಳಿಯಿಂದ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಮಟ್ಟಕ್ಕೆ ದೇವೇಗೌಡರು ಬೆಳೆದಿದ್ದರು. ಗೌಡರ ಆರು ದಶಕಗಳ ರಾಜಕೀಯ ಜೀವನದ ಏಳುಬೀಳುಗಳನ್ನು ದಾಖಲಿಸುವ ಅವರ ಜೀವನ ಚರಿತ್ರೆ ಸಿದ್ದವಾಗಿದ್ದು, ಶೀಘ್ರದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ.

ನವೆಂಬರ್ 29 ರಂದು ಹಿರಿಯ ಪತ್ರಕರ್ತ, ಲೇಖಕ ಸುಗತ ಶ್ರೀನಿವಾಸರಾಜು ಅವರು ರಚಿಸಿರುವ ಹೆಚ್. ಡಿ. ದೇವೇಗೌಡರ ಜೀವನ ಚರಿತ್ರೆ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸುತ್ತಿದೆ. 600 ಪುಟಗಳ ಈ ಪುಸ್ತಕದಲ್ಲಿ ದೇವೇಗೌಡರ ಆರು ದಶಕಗಳ ರಾಜಕೀಯ ಜೀವನವನ್ನು ದಾಖಲಿಸಲಾಗಿದೆ.

ಉನ್ನತ ಹುದ್ದೆಯನ್ನು ಅಲಂಕರಿಸಲು ಹಿಂಜರಿದಿದ್ದ ಗೌಡರು:

1996ರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ದೇವೇಗೌಡರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯಲು, ತಮ್ಮ ವೃತ್ತಿಜೀವನವನ್ನು ಕರ್ನಾಟಕದಲ್ಲೇ ಮುಂದುವರಿಸಲು ಬಯಸಿದ್ದ ಗೌಡರು ಉನ್ನತ ಹುದ್ದೆಯನ್ನು ಅಲಂಕರಿಸಲು ಹಿಂಜರಿದಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಈ ವಿಷಯವೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

"ನಾನು ಮುಖ್ಯಮಂತ್ರಿಯಾಗಿ ಎರಡು ವರ್ಷ ಕಳೆದಿಲ್ಲ. ನನ್ನ ರಾಜಕೀಯ ವೃತ್ತಿ ಜೀವನ ದಿಢೀರನೆ ಮುಗಿದು ಹೋಗುತ್ತದೆ. ಕಾರಣ, ಕಾಂಗ್ರೆಸ್ ಪಕ್ಷ ನಮಗೆ ಹೆಚ್ಚು ಕಾಲ ಸರ್ಕಾರ ನಡೆಸಲು ಬಿಡುವುದಿಲ್ಲ. ನಿಮ್ಮಂತೆ ನಾನು ಇರುತ್ತೇನೆ. ನಾನು ಕರ್ನಾಟಕವನ್ನು ಹಲವು ವರ್ಷಗಳ ಕಾಲ ಆಳಲು ಬಯಸುತ್ತೇನೆಂದು" ಅಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರಲ್ಲಿ ವಿನಂತಿ ಮಾಡಿಕೊಂಡಿದ್ದರಂತೆ.

1994 ರಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಸಲುವಾಗಿ ದೇವೇಗೌಡರು ಸುದೀರ್ಘ ಕಾಲಗಳ ಹೋರಾಟ ನಡೆಸಿದ್ದರು. ರಾಜಕೀಯದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದ ದೇವೇಗೌಡರಿಗೆ ಪ್ರಧಾನಿ ಹುದ್ದೆ ಅರಸಿ ಬಂದಿತ್ತು. 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು, ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ದೇವೇಗೌಡರ ಜನತಾ ದಳ ಪಕ್ಷವು ಲೋಕಸಭೆ ಚುನಾವಣೆಯಲ್ಲಿ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಯುನೈಟೆಡ್ ಫ್ರಂಟ್ ನಾಯಕರು ತಮ್ಮ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಪ್ರಸ್ತಾಪಿಸಿದಾಗ ದೇವೇಗೌಡರು ಆಘಾತಕ್ಕೊಳಗಾದರು. ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ತನ್ನ ಬೆಂಬಲವನ್ನು ದೀರ್ಘಕಾಲದವರೆಗೆ ಮುಂದುವರಿಸುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅದು ನಿಜವೂ ಆಯಿತು. ಗೌಡರ ರಾಜಕೀಯ ಚಾಣಾಕ್ಷತೆಯನ್ನು ಸಾಬೀತು ಪಡಿಸಿತ್ತು. ಭಾರತ-ಪಾಕಿಸ್ತಾನದ ಸಮಸ್ಯೆಗಳನ್ನು ಪರಿಹರಿಸುವ ಬಯಕೆ ಮತ್ತು ಉದ್ದೇಶವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.

2ನೇ ಬಾರಿಗೆ ಅಂದರೆ 1996 ಆಗಸ್ಟ್ 5 ರಂದು ದೇವೇಗೌಡರು ಜಮ್ಮು ಕಾಶ್ಮೀರಕ್ಕೆ ರಜೌರಿ ವಿಮಾನ ನಿಲ್ದಾಣದಿಂದ ತೆರೆದ ಜೀಪಿನಲ್ಲಿ ಪ್ರಯಾಣಿಸಲು ಬಯಸಿದ್ದರು. ಆದರೆ, ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಧಿಲ್ಲನ್ ಇದಕ್ಕೆ ವಿರೋಧಿಸಿದ್ದರು. ನೀವು ಹೇಳಿದ್ದನ್ನು ನಾನು ಮಾಡಿದರೇ ದೇಶ ನನ್ನನ್ನು ನೇಣಿಗೆ ಹಾಕುತ್ತದೆ ಎಂದು ಗೌಡರಿಗೆ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ದೇವೇಗೌಡರು, ಏನು ಆಗದು, ನಿಮಗೆ ಆತಂಕ ಬೇಡ, ನೀವು ಗಾಡಿ ಓಡಿಸಿ ನಾನು ನಿಮ್ಮ ಪಕ್ಕ ಕೂರುತ್ತೇನೆ. ಒಂದು ವೇಳೆ ಯಾರಾದರೂ ನಮ್ಮ ಮೇಲೆ ಗ್ರೆನೇಡ್​ ಎಸೆದರೂ ಎಂದು ಕಲ್ಪಿಸಿಕೊಳ್ಳಿ, ಆಗ ಇಬ್ಬರು ಸಾಯುತ್ತೇವೆ. ನಿಮ್ಮನ್ನು ಗಲ್ಲಿಗೇರಿಸುವ ಪ್ರಶ್ನೆ ಎಲ್ಲಿ ಬರುತ್ತದೆ? ಎಂದಿದ್ದರು. ಈ ವಿಷಯವನ್ನು ಸ್ವಾರಸ್ಯಕರವಾಗಿ ವಿವರಿಸಲಾಗಿದೆ.

ಇದನ್ನೂ ಓದಿ:ಮೊದಲನೇ ದಿನದ ಕೃಷಿ ಮೇಳಕ್ಕೆ ಮಳೆರಾಯನ ಅಡ್ಡಿ: ವ್ಯಾಪಾರಿಗಳಲ್ಲಿ ನಿರಾಸೆ

ABOUT THE AUTHOR

...view details