ಕರ್ನಾಟಕ

karnataka

ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೂಲಕ ಗಲಭೆ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಿ: ಪರಮೇಶ್ವರ್

By

Published : Aug 15, 2020, 8:36 PM IST

ಪುಲಕೇಶಿ ನಗರದಲ್ಲಿ ರಾತ್ರಿ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಮಾತನಾಡಿದ ಪರಮೇಶ್ವರ್, ಡಿಜೆ ಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿಯ ನಾಗರಿಕರಿಗೆ ಧೈರ್ಯವಾಗಿ ಬದುಕುವ ವಾತಾವರಣವನ್ನು ರಾಜ್ಯ ಸರ್ಕಾರ ಕಲ್ಪಿಸಬೇಕು ಎಂದರು.

congress
ಪರಮೇಶ್ವರ್

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿಯ ನಾಗರಿಕರಿಗೆ ಧೈರ್ಯವಾಗಿ ಬದುಕುವ ವಾತಾವರಣವನ್ನು ರಾಜ್ಯ ಸರ್ಕಾರ ಕಲ್ಪಿಸಬೇಕು ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಭಾಗದಲ್ಲಿ ಇಂತಹದ್ದೊಂದು ಕಹಿ ಘಟನೆ ಆಗಬಾರದಿತ್ತು. ರಾಜ್ಯ ಸರ್ಕಾರ ಕೂಡಲೇ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. ಸರ್ಕಾರ ಸಮರ್ಥವಾಗಿ ತನಿಖೆ ನಡೆಸುವ ವಿಶ್ವಾಸವಿದೆ. ಆದರೆ ಅಲ್ಲಿನ ಜನರಲ್ಲಿ ಧೈರ್ಯ ತುಂಬುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳಬೇಕು. ಇಲ್ಲಿನ ಅಲ್ಪಸಂಖ್ಯಾತರು ಮಾತ್ರವಲ್ಲ, ಎಲ್ಲಾ ವರ್ಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನರಿಗೆ ಧೈರ್ಯ ತುಂಬುವ ರೀತಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು.

ಪುಲಕೇಶಿ ನಗರದಲ್ಲಿ ರಾತ್ರಿ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ಘಟನೆ ನಡೆಯಬಾರದಿತ್ತು. ಈ ಘಟನೆ ಯಾಕೆ ನಡೆದಿದೆ ಅನ್ನೋದು ತನಿಖೆಯ ಬಳಿಕ ಗೊತ್ತಾಗಲಿದೆ. ಅಖಂಡ ಶ್ರೀನಿವಾಸ್ ಮನೆ ಸಂಪೂರ್ಣ ಸುಟ್ಟು ಹಾಕಿದ್ದಾರೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯನ್ನು ಡ್ಯಾಮೇಜ್ ಮಾಡೋಕೆ ಪ್ರಯತ್ನ ಮಾಡಿದ್ದಾರೆ. ಡಿಜೆ ಹಳ್ಳಿ ಬಳಿ ಎಲ್ಲಾ ವಾಹನ ಸುಟ್ಟಿದ್ದಾರೆ. ರಸ್ತೆಯಲ್ಲಿ ಇದ್ದ ಖಾಸಗಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಮುನೇಗೌಡ ಮನೆ ಬಳಿ ದಾಂಧಲೆ ಮಾಡಿ ಗಾಡಿಗೆ ಬೆಂಕಿ ಹಾಕಿದ್ದಾರೆ. ನವೀನ್ ಎಂಬ ಯುವಕ ಪೈಗಂಬರರ ಬಗ್ಗೆ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಮಾಡಿದಕ್ಕೆ ಗಲಾಟೆ ಮಾಡಿದ್ದಾರೆ ಎನ್ನೋದು ಮೇಲ್ನೋಟಕ್ಕೆ ಕಾಣ್ತಿದೆ. ಅಖಂಡ ಶ್ರೀನಿವಾಸ್, ಅವರ ಅಕ್ಕ, ಸಹೋದರನ ಮನೆ ಸುಟ್ಟಿದ್ದಾರೆ. ರಾಜಕೀಯ ಪರಿಸ್ಥಿತಿಯಲ್ಲಿ ಅವರಿಗೆ ಆಗಿರುವ ತೊಂದರೆ ಬಗ್ಗೆ ಅವರ ಜೊತೆ ಕಾಂಗ್ರೆಸ್ ಪಕ್ಷ ಇದೆ. ಅವರಿಗೆ ನ್ಯಾಯ ಕೊಡೊಕೆ ನಾವೆಲ್ಲಾ ಹೋರಾಟ ಮಾಡ್ತೇವೆ ಎಂದು ಭರವಸೆ ನೀಡಿದರು.

ಡಿಕೆ ಶಿವಕುಮಾರ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ನಮ್ಮ ಶಾಸಕರಿಗೆ ರಕ್ಷಣೆ ಇಲ್ಲ ಹೀಗಾಗಿ ರಾಜ್ಯ ಸರ್ಕಾರಕ್ಕೆ ಬೇಗ ತನಿಖೆ ಮಾಡಲು ಒತ್ತಾಯ ಮಾಡಿದ್ದಾರೆ. ಮಾಜಿ ಗೃಹ ಸಚಿವರ ನೇತೃತ್ವದಲ್ಲಿ ಸತ್ಯಾಶೋಧನಾ ಸಮಿತಿ ರಚನೆ ಆಗಿದೆ. ಜಾರ್ಜ್, ರಾಮಲಿಂಗಾ ರೆಡ್ಡಿ ಮತ್ತು ನಾನು ಅದರ ನೇತೃತ್ವವಹಿಸಲಿದ್ದೇವೆ. ಈಗಾಗಲೇ ಎರಡು ಸಮಿತಿ ಮಾಡಿದ್ದೇವೆ. ಸ್ಥಳೀಯ ಲೀಡರ್ಸ್ ಕರೆಸಿ ಮಾತಾಡಿದ್ದೇವೆ ಎಂದರು.

ಮಾಹಿತಿ ಪಡೆದು, ವರದಿಯನ್ನು ಅಧ್ಯಕ್ಷರಿಗೆ ನೀಡ್ತೇವೆ. ಯಾಕೆ ಈ ಘಟನೆ ಆಯ್ತು ಎಂದು ತನಿಖೆ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಕಾಂಗ್ರೆಸ್ ಪಕ್ಷವೇ ಕಾರಣ ಎಂಬಂತೆ ಸಚಿವರು ಮಾತಾಡ್ತಾ ಇದ್ದಾರೆ. ಕಾಂಗ್ರೆಸ್ ಮಾಡಿಸಿದೆ ಅನ್ನೋದಕ್ಕೆ ಸಚಿವರ ಬಳಿ ಏನು ಆಧಾರ ಇದೆ. ಮೊದಲು ತನಿಖೆ ಮಾಡಲಿ. ಪೊಲೀಸ್ ಸ್ಟೇಷನ್ ಸುಡೋರನ್ನ ನಾವು ಬೆಂಬಲ ಮಾಡಲ್ಲ. ಯಾರೇ ಮಾಡಿದ್ರು ಶಿಕ್ಷೆ ಆಗಲಿ. ಮಹಿಳೆಯರನ್ನು, ಮಕ್ಕಳನ್ನು ಬಂಧಿಸ್ತಾ ಇದ್ದಾರೆ. 10-12 ವರ್ಷದ ಮಕ್ಕಳನ್ನು ಅರೆಸ್ಟ್ ಮಾಡ್ತಾ ಇದ್ದಾರೆ. ಗೃಹ ಇಲಾಖೆ ನಿಮ್ಮ ಬಳಿ ಇದೆ. ಸರ್ಕಾರ ನಿಮ್ಮ ಕೈಯಲ್ಲಿ ಇದೆ. ತನಿಖೆ ಮಾಡಿ, ಕಂಡು ಹಿಡಿಯಿರಿ ಎಂದು ಒತ್ತಾಯಿಸಿದರು.

ಸುಟ್ಟ ಪೊಲೀಸ್ ಸ್ಟೇಷನ್ ನಮ್ಮ ಕಾಲದಲ್ಲಿ ನಿರ್ಮಾಣ ಆಗಿತ್ತು. ಈಗ ಪೋಲೀಸ್ ಸ್ಟೇಷನ್ ನೋಡಿದ್ರೆ ಬೇಸರ ಆಗುತ್ತೆ. ಅಖಂಡ ಶ್ರೀನಿವಾಸ್​ಗೆ ನೀವು ರಕ್ಷಣೆ ಕೊಡಬೇಕಿತ್ತು. ನಮ್ಮ ಪಕ್ಷದಿಂದ ನಾವು ರಕ್ಷಣೆ ಮಾಡ್ತೇವೆ. ನಿಮಗೆ ಒಬ್ಬ ದಲಿತ ಶಾಸಕನಿಗೆ ರಕ್ಷಣೆ ಕೊಡೋಕೆ ಆಗಲ್ವೇ? ಪೊಲೀಸ್ ಠಾಣೆ ಸುಡುವ ತನಕ ನಿಮ್ಮ ಪೊಲೀಸ್ ವ್ಯವಸ್ಥೆ ಏನ್ ಮಾಡ್ತಾ ಇತ್ತು. ಇಂಟೆಲಿಜೆನ್ಸ್ ಡಿಪಾರ್ಟ್​ಮೆಂಟ್ ನಿಮ್ಮಲ್ಲಿ ಇಲ್ವಾ? ಇದು ಸರ್ಕಾರದ ಸಂಪೂರ್ಣ ವೈಫಲ್ಯ. ಜಾರ್ಜ್ ಜೊತೆ ಓಡಾಡಿದ ಮೌಲ್ವಿಯನ್ನು ಅರೆಸ್ಟ್ ಮಾಡಿದ್ದು ಯಾಕೆ? ಅವರನ್ನು ಬಂಧಿಸಿ ಮೂರು ದಿನ ಆಯ್ತು. ಅಮಾಯಕರಿಗೆ ಯಾಕೆ ತೊಂದರೆ ಕೊಡ್ತಾ ಇದ್ದೀರಿ ಎಂದು ಕೇಳಿದರು.

ಎಸ್​ಡಿಪಿಐ ಒಂದು ರಾಜಕೀಯ ಪಕ್ಷ. ಅವರು ಕೆಲವು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಾವು ಎಸ್​ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಎಸ್​ಡಿಪಿಐನಿಂದಲೇ ಕೃತ್ಯ ನಡೆದಿದೆ ಅನ್ನೋಕೆ ಆಗಲ್ಲ. ತನಿಖೆಯಿಂದ ಅದು ಹೊರಬರಬೇಕು. ಈಗಲೇ ನಾವು ಅದನ್ನ ಹೇಳೋಕೆ ಬರಲ್ಲ ಎಂದು ವಿವರಿಸಿದರು.

ಪರಿಶೀಲಿಸಿ ಬಂಧಿಸಿ:

ಬಳಿಕ ಮಾತನಾಡಿದ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ಅಮಾಯಕರನ್ನ ನೀವು ಟಾರ್ಚರ್ ಮಾಡುವುದು ಬೇಡ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಿ, ನಂತರ ಬೇಕಾದರೆ ಬಂಧಿಸಲಿ. ಆದರೆ ಘಟನೆಯಲ್ಲಿ ಭಾಗಿಯಾಗದವರನ್ನೂ ಯಾಕೆ ಬಂಧಿಸಬೇಕು ಎಂದು ಪ್ರಶ್ನಿಸಿದರು.

ತಪ್ಪಿತಸ್ಥರು ಯಾರೇ ಆಗಲಿ ಕ್ರಮ ತೆಗೆದುಕೊಳ್ಳಿ. ಪಾಲಿಕೆ ಸದಸ್ಯರಿಗೆ ನೊಟೀಸ್ ಕೊಡ್ತೇವೆ ಅಂತ ಅಶೋಕ್ ಹೇಳಿದ್ದಾರೆ. ನೊಟೀಸ್ ಕೊಡೋಕೆ ಸಚಿವರಿಗೆ ಆಗಲ್ಲ. ನೊಟೀಸ್ ನೀಡೋದು ಪೊಲೀಸ್ ಇಲಾಖೆ ಎಂದರು.

ಎಸ್​ಡಿಪಿಐ ಸಂಘಟನೆ ಬ್ಯಾನ್ ವಿಚಾರ ಮಾತನಾಡಿ, ಬ್ಯಾನ್ ಮಾಡೋಕೆ ಪುರಾವೆಗಳು ಬೇಕು. ನಮ್ಮ ಅವಧಿಯಲ್ಲಿ ಪುರಾವೆ ಕಂಡು ಹಿಡಿಯುತ್ತಿದ್ವಿ. ಈಗ ಸರ್ಕಾರ ಪುರಾವೆ ಹುಡುಕಲಿ. ತಪ್ಪಿದ್ದರೆ ಆಗ ಸರ್ಕಾರ ಬ್ಯಾನ್ ಮಾಡಬಹುದು ಎಂದು ಒತ್ತಾಯ ಮಾಡಿದರು.

ಭದ್ರತೆ ಸಿಕ್ಕಿಲ್ಲ:

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮಾತನಾಡಿ, ನನ್ನ ಮನೆಯನ್ನು ಯಾಕೆ ಸುಟ್ಟು ಹಾಕಲಾಯಿತು ಎನ್ನುವುದಕ್ಕೆ ಇಂದಿಗೂ ಉತ್ತರ ಸಿಗುತ್ತಿಲ್ಲ. ಅಪರಾಧಿಗಳು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಲಿದೆ. ಎಲ್ಲಾ ಧರ್ಮದವರೂ ಒಟ್ಟಾಗಿ ಕ್ಷೇತ್ರದಲ್ಲಿ ಇದ್ದೇವೆ. ನಮ್ಮವರ ಮನೆಯನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಅಮಾಯಕರನ್ನು ವಿಚಾರಣೆಗೆ ಒಳಪಡಿಸಬೇಡಿ. ಇದೊಂದು ವ್ಯವಸ್ಥಿತ ಸಂಚು. ಇದನ್ನು ಭೇದಿಸಬೇಕು ಎಂದು ಒತ್ತಾಯಿಸುತ್ತೇನೆ. ಶಾಸಕನಾಗಿ ನನಗೆ ಪಕ್ಷದಿಂದ ಸಾಕಷ್ಟು ಉತ್ತಮ ಸಹಕಾರ ಸಿಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡುವ ಕಾರ್ಯ ಮಾಡಿ, ಜೊತೆಗೆ ಸಮಿತಿ ಮೂಲಕ ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವ ಕಾರ್ಯ ಮಾಡಬೇಕೆಂದು ಮನವಿ ಮಾಡುತ್ತೇನೆ. ಉದ್ದೇಶಪೂರ್ವಕ ದಾಳಿಯನ್ನು ಖಂಡಿಸುತ್ತೇನೆ.

ನನಗೆ ಇದುವರೆಗೂ ಸರ್ಕಾರದಿಂದ ಯಾವುದೇ ಭದ್ರತೆ ಸಿಕ್ಕಿಲ್ಲ. ನಿನ್ನೆ ನಗರ ಪೊಲೀಸ್ ಆಯುಕ್ತರನ್ನೂ ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನ ಗನ್​ ಮ್ಯಾನ್ ಬಿಟ್ಟರೆ ಬೇರೆ ಭದ್ರತೆ ನೀಡಿಲ್ಲ. ಭದ್ರತೆ ಬೇಕೆಂದು ಕೇಳಿದ್ದೇನೆ. ಸೂಕ್ತ ತನಿಖೆ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details