ಶಿವಮೊಗ್ಗ :ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಕೂಡಲೇ ರಾಜ್ಯ ಸರ್ಕಾರ ಸಿಬಿಐ (ಕೇಂದ್ರೀಯ ತನಿಖಾ ದಳ)ಗೆ ವಹಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು. ನಗರದಲ್ಲಿಂದು ಜೈನ ಸಮುದಾಯದ ಮುಖಂಡರೊಂದಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜೈನಮುನಿ ಕಗ್ಗೊಲೆ ಆಗಿರುವುದು ನಮ್ಮ ರಾಜ್ಯಕ್ಕೆ ಕಳಂಕ ತಂದಿದೆ. ವೈಯಕ್ತಿಕವಾಗಿ ಏನು ಕೂಡ ಸುಖ, ಶಾಂತಿ ಅಪೇಕ್ಷೆ ಪಡದೆ ಇಡೀ ಸಮಾಜವೇ ಸುಖ ಶಾಂತಿಯಿಂದ ಇರಬೇಕು ಎನ್ನುವ ಒಬ್ಬ ಮುನಿಯನ್ನು ವಿದ್ಯುತ್ ಶಾಕ್ ಕೊಟ್ಟು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾರೆ. ಈ ಪ್ರಯತ್ನ ಮಾಡಿರಬೇಕಾದರೆ ಯಾರೋ ಒಬ್ಬಿಬ್ಬರ ದುಷ್ಕೃತ್ಯ ಅಲ್ಲ. ಇದರ ಹಿಂದೆ ದೊಡ್ಡ ಷಡ್ಯಂತರ ಇದೆ ಎನ್ನುವುದು ಇಡೀ ರಾಜ್ಯದ ಹಾಗು ದೇಶದ ಜನರ ಅನುಮಾನವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಡಾ. ಜಿ ಪರಮೇಶ್ವರ್ ಈ ಪ್ರಕರಣವನ್ನು ಸಿಬಿಐಗೆ ಕೊಡಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ. ಆದರೆ ಕೆಲವೊಂದು ಪ್ರಕರಣದಲ್ಲಿ ಸಿಬಿಐಗೆ ಕೊಟ್ಟ ನಂತರ ನ್ಯಾಯ ಸಿಕ್ಕಿದೆ. ಉದಾಹರಣೆಗೆ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಯಬೇಕಾದರೆ ಎನ್ಐಎ (ರಾಷ್ಟ್ರೀಯ ತನಿಖಾ ತಂಡ)ಗೆ ಕೊಟ್ಟಿದ್ದೆವು. ಬಳಿಕ ಎನ್ಐಎ ನಡೆಸಿದ ವಿಚಾರಣೆ ವೇಳೆ ಇದರ ಹಿಂದೆ ವಿದೇಶದ ಉಗ್ರಗಾಮಿ ಸಂಘಟನೆಗಳು ಇವೆ ಎಂಬುದು ಬೆಳಕಿಗೆ ಬಂತು.