ಕರ್ನಾಟಕ

karnataka

By

Published : Oct 6, 2020, 10:31 AM IST

ETV Bharat / state

ಶಾಲೆ ದತ್ತು ಪಡೆದ ಯುವ ಮುಖಂಡ: ಚಿಕ್ಕ ವಯಸ್ಸಿನಲ್ಲೇ ಸಾಧನೆ

ಮಹದೇವಪುರ‌ ಕ್ಷೇತ್ರದ ಕೆ.ದೊಮ್ಮಸಂದ್ರ ಸರ್ಕಾರಿ ಶಾಲೆಯನ್ನು ಅನ್ವಯ ಫೌಂಡೇಷನ್​ನ ಯುವ ಸದಸ್ಯ ಲಿಖಿತ್​ ಶ್ರೀನಿವಾಸ್​ ಎಂಬುವವರು ದತ್ತು ಪಡೆದಿದ್ದಾರೆ.

ಶಾಲೆ ದತ್ತು ಪಡೆದ ಯುವ ಮುಖಂಡ ಲಿಖಿತ್​ ಶ್ರೀನಿವಾಸ್​
ಶಾಲೆ ದತ್ತು ಪಡೆದ ಯುವ ಮುಖಂಡ ಲಿಖಿತ್​ ಶ್ರೀನಿವಾಸ್​

ಬೆಂಗಳೂರು (ಮಹದೇವಪುರ):16ರ ಹರೆಯದಲ್ಲೇ ಸಮಾಜ ಸೇವೆಗೆ ಮುಂದಾದ ಬಾಲಕ ಮಹದೇವಪುರ‌ ಕ್ಷೇತ್ರದ ಕೆ.ದೊಮ್ಮಸಂದ್ರ ಸರ್ಕಾರಿ ಶಾಲೆಯನ್ನು ಐದು ವರ್ಷಗಳ ಕಾಲ ದತ್ತು ಪಡೆದಿದ್ದಾನೆ.

ಇನ್ನು ಈ ಶಾಲೆಗೆ ಅನ್ವಯ ಫೌಂಡೇಷನ್ ಅಡಿಯಲ್ಲಿ ಎಸ್​ಬಿಆರ್ ಗ್ರೂಪ್ ವತಿಯಿಂದ ಖಾಸಗಿ ಶಾಲೆ ಮಾದರಿಯಲ್ಲಿ ಮೂಲ ಸೌಲಭ್ಯ ಒದಗಿಸಲಾಗಿದೆ. ಶಾಲೆಯಲ್ಲಿ ಈಗಾಗಲೇ ಉನ್ನತ ಮಟ್ಟದ ಲ್ಯಾಬ್ ಕೆಲಸ, ಪೇಂಟಿಂಗ್​, ಗ್ರಂಥಾಲಯ ಹಾಗೂ ಮಕ್ಕಳ ಆಟದ ಮೈದಾನದ ಕೆಲಸಗಳನ್ನು ಮಾಡುತ್ತಿದ್ದು, ಮಾದರಿ ಶಾಲೆಯನ್ನಾಗಿ ಮಾಡಲು ಅನ್ವಯ ಫೌಂಡೇಷನ್ ಯುವ ಮುಖಂಡ ಲಿಖಿತ್ ಶ್ರೀನಿವಾಸ್ ಮುಂದಾಗಿದ್ದಾರೆ.

ಶಾಲೆ ದತ್ತು ಪಡೆದ ಯುವ ಮುಖಂಡ ಲಿಖಿತ್​ ಶ್ರೀನಿವಾಸ್​

ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ನೀಡುತ್ತಿದ್ದಾರೆ. ಶಾಲೆಯ ಕೆಲವು ಕೊಠಡಿಗಳು ಹಳೆಯದಾಗಿದ್ದು, ಅವನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡುವುದಾಗಿ ಹಾಗೂ ಶಾಲೆಯ ಮಕ್ಕಳಿಗೆ ಸುಸಜ್ಜಿತವಾದ ಶೌಚಾಲಯ, ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಲಿಖಿತ್ ಶ್ರೀನಿವಾಸ್ ಹೇಳಿದರು.

ಕೆ.ದೊಮ್ಮಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ವೇದಿಕೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, "ಅನ್ವಯ ಫೌಂಡೇಷನ್ ವತಿಯಿಂದ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಸುಧಾರಿಸುವ ಮತ್ತು ಸ್ಥಳೀಯ ಕಾರ್ಮಿಕರಿಗೆ ಕೆಲಸದ ಅವಕಾಶಗಳನ್ನು ನೀಡುವ ಕಾರ್ಯ ಮಾಡಲಾಗುವುದು. ದೈನಂದಿನ ಕೂಲಿ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಸುದ್ದಿಗಳ ಮೂಲಕ ನಿರಂತರವಾಗಿ ತಿಳಿದು, ಅವರಿಗೆ ಅವಶ್ಯಕ ವಸ್ತುಗಳನ್ನು ಒದಗಿಸುವ ಕಾರ್ಯ ಮಾಡಲಾಗಿದೆ ಎಂದರು.

ಇದೇ ಸಮಯದಲ್ಲಿ ಅನ್ವಯ ಫೌಂಡೇಷನ್ ಸಹ ಸಂಸ್ಥಾಪಕಿ ಶ್ರೀದೇವಿ ಶೆಟ್ಟಿ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಮಾಜಿಕ ಕಳಕಳಿಯಿಂದ ಸಮಾಜ ಸೇವೆ ಮಾಡುತ್ತಿರುವ ನಮ್ಮ ಫೌಂಡೇಷನ್ ಯುವ ಸದಸ್ಯ ಲಿಖಿತ್ ಶ್ರೀನಿವಾಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಮ್ಮ ಕ್ಲಬ್ ವತಿಯಿಂದ ಸರ್ಕಾರಿ ಶಾಲೆಗೆ ಬೇಕಾಗುವ ಮೂಲ ಸೌಲಭ್ಯ ಒದಗಿಸುವುದಲ್ಲದೆ, ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ತರಬೇತಿ ನೀಡಲಾಗುವುದು ಎಂದರು.

ABOUT THE AUTHOR

...view details