ಕರ್ನಾಟಕ

karnataka

By ETV Bharat Karnataka Team

Published : Jan 9, 2024, 7:43 AM IST

ETV Bharat / state

ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ಸರ್ಕಾರ: ದರಖಾಸ್ತು ಪೋಡಿ ನಿಯಮದಲ್ಲೇನಿದೆ?

ಪ್ರಾರಂಭದಲ್ಲಿ ರಾಮನಗರದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದು, ಯಶಸ್ವಿಯಾದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಸರ್ಕಾರವೇ ಸಹಾಯ ಮಾಡಲು ಮುಂದಾಗಿದೆ.

Vidhana Soudha
ವಿಧಾನಸೌಧ

ಬೆಂಗಳೂರು: ಜಮೀನು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾನೂನು, ನಿಯಮಗಳಿವೆ. ಆದರೆ, ಆಸ್ತಿ ವಿಷಯದಲ್ಲಿ ಹಲವರಿಗೆ ಮಾಹಿತಿ ಕೊರತೆ ಇರುತ್ತದೆ. ಹಾಗಾಗಿ, ರೈತರು ಸೇರಿದಂತೆ ಜನರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ದರಖಾಸ್ತು ಪೋಡಿ ಅಭಿಯಾನಕ್ಕೆ ಸರ್ಕಾರ ಚಾಲನೆ ನೀಡಿದೆ. ಸರ್ಕಾರಿ ಭೂಮಿ ಮಂಜೂರಾತಿ ಪಡೆದುಕೊಂಡವರ ಪೋಡಿ, ಒತ್ತುವರಿ ಸೇರಿದಂತೆ ಇತರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಂದಾಯ ಇಲಾಖೆ ಪೋಡಿ ಆಂದೋಲನ ಕಾರ್ಯಕ್ರಮ ಕೈಗೊಂಡಿದೆ.

ಏನಿದು ದರಖಾಸ್ತು ಪೋಡಿ ಕಾನೂನು?: ಕಾನೂನಿನ ನಿಯಮದ ಪ್ರಕಾರ, ರೈತರ ಜಮೀನು ಅವರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ, ಅವರು ಅರ್ಜಿ ಸಲ್ಲಿಸಿದಲ್ಲಿ ಅಥವಾ ಅರ್ಜಿ ಸಲ್ಲಿಸದೇ ಇದ್ದರೂ ಕೂಡ ಸರ್ಕಾರವೇ ಅವರ ಆಸ್ತಿ ಸರ್ವೇ ನಡೆಸಿ, ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಹಣಕಾಸಿನ ತೊಂದರೆ, ಕುಟುಂಬ ಸಮಸ್ಯೆ ಅಥವಾ ಬೇರೆ ಯಾವುದೇ ಕಾರಣದಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗಿಲ್ಲದಿದ್ದರೆ ಅಂತಹವರಿಗೆ ಈಗ ಸರ್ಕಾರವೇ ಸಹಾಯ ಮಾಡಲಿದೆ.

ಇಂತಹ ರೈತರಿಗೆ ಸಹಾಯ ಮಾಡಲು ದರಖಾಸ್ತು ಪೋಡಿ ಆಂದೋಲನವನ್ನು ಸರ್ಕಾರ ಆರಂಭಿಸಿದೆ. ನ್ಯಾಯಾಲಯಗಳಲ್ಲಿ ಇಂತಹ ಕೇಸ್​ಗಳು ಹೆಚ್ಚಾಗುತ್ತಿರುವ ಕಾರಣದಿಂದ ಸರ್ಕಾರ ದರಖಾಸ್ತು ಪೋಡಿಗೆ ಮುಂದಾಗಿದೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಮತ್ತಿತರ ಕಚೇರಿಗಳಿಗೆ ರೈತರು ಅಲೆದಾಡುವುದು ತಪ್ಪಿದಂತಾಗುತ್ತದೆ. ಈ ಆಂದೋಲನದ ಮೂಲಕ ಅರ್ಜಿ ಸಲ್ಲಿಸಿದಿದ್ದರೂ ರೈತರ ಜಮೀನಿನಲ್ಲಿ ಸರ್ವೇ ನಡೆಸಿ ಕಂದಾಯ ಇಲಾಖೆ ಪೋಡಿ ಮಾಡಿಕೊಡಲಿದೆ.

ಸರ್ಕಾರಿ ಭೂಮಿಯನ್ನು ದರಖಾಸ್ತು ಕಮಿಟಿ ಮೂಲಕ ಪಡೆದುಕೊಂಡವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಸರ್ಕಾರದಿಂದ ಭೂ ಮಂಜೂರಾತಿ ಆಗಿರುವ ಪೋಡಿ ಪ್ರಕರಣಗಳ ಬಾಕಿ ವಿಲೇವಾರಿಗಾಗಿ ದರಖಾಸ್ತು ಪೋಡಿ ಆಂದೋಲನ ಕೈಗೊಂಡಿದ್ದು, ರೋವರ್, ಆರ್ಥೋ ರೆಕ್ಟಿಫೈಡ್ ರೆಡಾರ್ ಇಮೇಜ್ ಆಧಾರಿತ ಸರ್ವೇ ಮೂಲಕ ಬಾಕಿ ಇರುವ ಪೋಡಿ ಪ್ರಕರಣಗಳ ಸರ್ವೇ ನಡೆಸಲಾಗುತ್ತಿದೆ. ಎಲ್ಲಾ ಅರ್ಹರಿಗೆ ಮಂಜೂರಾದ ಭೂಮಿಯ ಬಗ್ಗೆ ಮಾಹಿತಿ ಸಿಗಲಿದೆ. ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಬದಲಾವಣೆ ಅವಕಾಶ ಇರುವುದಿಲ್ಲ. ಕಚೇರಿಯಲ್ಲಿ ಪೋಡಿ ಸಿದ್ಧಪಡಿಸುವ ಕಾರ್ಯ ಸರಾಗವಾಗಲಿದೆ.

ರಾಜ್ಯದಲ್ಲಿ ಪೋಡಿ ಅರ್ಜಿಗಳ ವಿಲೇವಾರಿ ಸಾಕಷ್ಟು ಬಾಕಿ ಉಳಿದಿದೆ. ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡುವ ಮೂಲಕ ಜನರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವ ಉದ್ದೇಶವಿದೆ. ಹಾಗಾಗಿ, ಮೊದಲಿಗೆ ಈ ಆಂದೋಲನವನ್ನು ರಾಮನಗರದಲ್ಲಿ ಆರಂಭಿಸಲಾಗಿದ್ದು, ಇದು ಯಶಸ್ವಿಯಾದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಸೇವಾ ಶುಲ್ಕ ಇಳಿಕೆ: ಇನ್ನು ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇರಿ ಮೋಜಿಣಿ ವ್ಯವಸ್ಥೆಯಡಿ ಸ್ವೀಕರಿಸುವ ಅರ್ಜಿಗಳ ಸೇವಾ ಶುಲ್ಕವನ್ನು ಸಹ ಸರ್ಕಾರ ಇಳಿಕೆ ಮಾಡಿದೆ. ಈ ಹಿಂದೆ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಏಕರೂಪದ ಸೇವಾ ಶುಲ್ಕವಿತ್ತು. 2022ರ ಫೆಬ್ರವರಿಯಲ್ಲಿ ಗ್ರಾಮೀಣ ಪ್ರದೇಶದ ಸೇವಾ ಶುಲ್ಕವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿತ್ತು. ಪಹಣಿ ಕಾಲಂ-3ರ ವಿಸ್ತೀರ್ಣ ಹೆಚ್ಚಿಗೆ ಇದ್ದು, ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದರೂ ಪೂರ್ಣ ಪ್ರಮಾಣದ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕ ಪಡೆಯಲಾಗುತ್ತಿತ್ತು. ಈ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಕೆಲವು ಶಾಸಕರು ಪ್ರಸ್ತಾಪಿಸಿದ್ದರು. ಇದರಿಂದ ಹೆಚ್ಚು ಹೊರೆಯಾಗುತ್ತಿರುವ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದರು.

ಪ್ರಸ್ತುತ ಪೋಡಿಮುಕ್ತ ಅಭಿಯಾನ ಯೋಜನೆಯಡಿ ಬಹುಮಾಲೀಕತ್ವ ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಮುಂದುವರಿಯಲಿದೆ. ಅಲ್ಲದೆ, ಅಲಿನೇಶನ್‌, ದರಖಾಸ್ತು ಪೋಡಿ ಸಂಬಂಧ ಮಂಜೂರಿ ಸಮಯದಲ್ಲೇ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತದೆ. ಉಳಿದಂತೆ 11ಇ, ಅಲಿನೇಶನ್‌ ಪೂರ್ವ ನಕ್ಷೆ, ತತ್ಕಾಲ್‌ ಪೋಡಿ, ಹದ್ದುಬಸ್ತು ಪ್ರಕ್ರಿಯೆಗಳ ಸಂಬಂಧಿಸಿದ ಅರ್ಜಿ ಶುಲ್ಕಗಳನ್ನು ಕಡಿಮೆ ಮಾಡಲಾಗಿದೆ.

ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿರುವ ಅರ್ಜಿ ಶುಲ್ಕವು ಈಗಾಗಲೇ ಅಳತೆಗಾಗಿ ಸಲ್ಲಿಸಿರುವ ಅರ್ಜಿಗೆ ಅನ್ವಯ ಆಗುವುದಿಲ್ಲ. ಜನವರಿ 1 ರ ನಂತರ ಸಲ್ಲಿಸುವ ಅರ್ಜಿಗಳಿಗೆ ಅನುಕೂಲವಾಗುವಂತೆ ಆದೇಶಿಸಿದ್ದು, ಸ್ವಇಚ್ಛೆಯಿಂದ ಸ್ಕೆಚ್‌ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ 1 ಸಾವಿರ ರೂ. ಶುಲ್ಕವೇ ಮುಂದುವರಿಯಲಿದೆ.

ಇದನ್ನೂ ಓದಿ:6 ಲಕ್ಷ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಬಿಎಂಪಿ ನೋಟಿಸ್

ABOUT THE AUTHOR

...view details